ಲಿಂಗಾಯತರ ದಾರಿ ತಪ್ಪಿಸುತ್ತಿರುವ ಬಿಜೆಪಿ, ಕಾಂಗ್ರೆಸ್ ಅಂದು-ಇಂದು
ಬೆಂಗಳೂರು, ಮಾರ್ಚ್ 21: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಜನರ ಭಾವನೆ ಜತೆ ಆಟವಾಡುತ್ತಿವೆಯಾ? ಹೌದು ಎನ್ನುತ್ತಿವೆ ದಾಖಲೆಗಳು. ಪ್ರತ್ಯೇಕ ಧರ್ಮ ವಿಚಾರದಲ್ಲಿ ಎರಡೂ ಪಕ್ಷಗಳು ದ್ವಂದ್ವ ನೀತಿ ಅನುಸರಿಸುವುದು ಬಹಿರಂಗವಾಗಿದೆ. ಈ ಮೂಲಕ ಕೇವಲ ಚುನಾವಣೆಯ ಕಾರಣಕ್ಕೆ ಎರಡೂ ಪಕ್ಷಗಳು ಧರ್ಮವನ್ನು ಮುಂದಿಟ್ಟುಕೊಂಡು ಆಟವಾಡುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ.
ಸಿದ್ದರಾಮಯ್ಯ ಹೊಡೆದ ಲಿಂಗಾಯತ ಶಾಟ್ : ಸಿಕ್ಸೋ, ಔಟೋ?
ಲಿಂಗಾಯತ ಧರ್ಮಕ್ಕಾಗಿ ಪತ್ರ ಬರೆದಿದ್ದ ಯಡಿಯೂರಪ್ಪ
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಠಾಧೀಶರು ಬೇಡಿಕೆ ಇಟ್ಟಿದ್ದ ಪತ್ರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಈ ಹಿಂದೆ ಸಹಿ ಹಾಕಿದ್ದರು. ಈ ಪತ್ರವನ್ನು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ವಿ. ಶ್ರೀನಿವಾಸ್ ಟ್ವೀಟ್ ಮಾಡಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾದ ಇಟ್ಟಿದ್ದ 'ಪ್ರತ್ಯೇಕ ಧರ್ಮ' ಬೇಡಿಕೆಯ ಪತ್ರಕ್ಕೆ ಅಂದಿನ 57 ಶಾಸಕರು ಹಾಗೂ ಸಂಸದರು ಸಹಿ ಹಾಕಿದ್ದರು. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯ ಅನೇಕ ಶಾಸಕರು ಇದಕ್ಕೆ ತಮ್ಮ ಒಪ್ಪಿಗೆ ಸೂಚಿಸಿದ್ದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಯಡಿಯೂರಪ್ಪ ಕೂಡ ಇದಕ್ಕೆ ಸಹಿ ಹಾಕಿದ್ದರು. ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ, ಪ್ರಭಾಕರ್ ಕೋರೆ, ಉಮೇಶ್ ಕತ್ತಿ, ಲಕ್ಷ್ಮಣ್ ಸವದಿ, ಅರವಿಂದ್ ಬೆಲ್ಲದ್, ಜೆಡಿಎಸ್ ನಿಂದ ಬಸವರಾಜ ಹೊರಟ್ಟಿ, ಎಸ್ಎಸ್ ಶಿವಶಂಕರ್ ಹಾಗೂ ಮಲ್ಲಿಕಾರ್ಜುನ ಖೂಬಾ ಸೇರಿದಂತೆ ಅನೇಕರು ತಮ್ಮ ಒಪ್ಪಿಗೆ ಸೂಚಿಸಿ ಸಹಿ ಹಾಕಿದ್ದರು.
ನಂತರ ಇದನ್ನು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕಳಿಸಲಾಗಿತ್ತು. ವಿಚಿತ್ರವೆಂದರೆ ಅಂದು ಸಹಿ ಹಾಕಿದ್ದ ಯಡಿಯೂರಪ್ಪ ಇಂದು ಇದನ್ನು ವಿರೋಧಿಸುತ್ತಿದ್ದಾರೆ. ಮತ್ತು ಸಿದ್ದಗಂಗಾ ಮಠ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎನ್ನುತ್ತಿದ್ದಾರೆ.
ಚರ್ಚೆ: ಅಂದು ಸಹಿ ಹಾಕಿದ್ದಕ್ಕೆ, ಇಂದು ಯಡಿಯೂರಪ್ಪ ಮೌನವೇ?
ಯಡಿಯೂರಪ್ಪನವೇ ಯಾಕೀ ದ್ವಂದ್ವ ನೀತಿ ಎಂದು ಪ್ರಶ್ನಿಸಬೇಕಾಗಿದೆ. ಇದೀಗ ಚುನಾವಣೆಗೂ ಮುನ್ನ ವಿಭಜನೆ ರಾಜಕಾರಣದಲ್ಲಿ ಕಾಂಗ್ರೆಸ್ ತೊಡಗಿದೆ ಎಂದು ಬಿಜೆಪಿ ಆರೋಪಿಸುತ್ತಿರುವುದು ಎಷ್ಟು ಸರಿ?
Yeddyurappa was all for a separate #Lingayat religion. Few years back he had even signed a memorandum on the same. Such gimmicks now. On that few media questioning Congress? pic.twitter.com/Y6vLui3KVw
— Srinivas B V (@srinivasiyc) March 19, 2018
ಕಾಂಗ್ರೆಸ್ ನಿಂದಲೂ ದ್ವಂದ್ವ ನೀತಿ
ಜನರನ್ನು ದಿಕ್ಕು ತಪ್ಪಿಸುವ ಆರೋಪ ಯಡಿಯೂರಪ್ಪನವರ ಮೇಲೆ ಮಾತ್ರ ಇಲ್ಲ. ಕಾಂಗ್ರೆಸ್ ಮೇಲೆಯೂ ಇದೇ ಆರೋಪ ಇದೆ. ಕಾಂಗ್ರೆಸ್ ನವರದ್ದೂ ಲಿಂಗಾಯತ ವಿಚಾರದಲ್ಲಿ ಎರಡು ನಾಲಗೆ ಎಂಬುದು ದಾಖಲೆಗಳಿಂದ ಬಹಿರಂಗವಾಗುತ್ತಿದೆ.
2013ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಇಟ್ಟಿದ್ದ 'ಪ್ರತ್ಯೇಕ ಧರ್ಮ' ಬೇಡಿಕೆಯನ್ನು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಬಳಿಗೆ ಕಳುಹಿಸಿಕೊಡಲಾಗಿತ್ತು. ವಿಚಿತ್ರವೆಂದರೆ ಇಂದು ಲಿಂಗಾಯತ ಧರ್ಮಕ್ಕಾಗಿ ಹೋರಾಟ ನಡೆಸುತ್ತಿರುವ ಅಂದಿನ ಕಾಂಗ್ರೆಸ್ ಸರಕಾರ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡಲು ನಿರಾಕರಿಸಿತ್ತು.
"ವೀರಶೈವ/ಲಿಂಗಾಯತರು ಹಿಂದೂಗಳ ಭಾಗ ಮತ್ತು ಸ್ವತಂತ್ರ ಧರ್ಮವಲ್ಲ," ಎಂದು ಕೇಂದ್ರ ಪ್ರತಿಕ್ರಿಯೆ ನೀಡಿತ್ತು. ಹಾಗೂ ಈ ಬೇಡಿಕೆ ತಾರ್ಕಿಕವಾಗಿಲ್ಲ ಎಂದು ಹೇಳಿತ್ತು.
ವಿಚಿತ್ರವೆಂದರೆ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಹೀಗಾಗಿ 2013ರಲ್ಲಿ ತೆಗೆದುಕೊಂಡಿದ್ದ ತೀರ್ಮಾನಕ್ಕೆ ಭಿನ್ನವಾಗಿ ಎರಡೂ ಪಕ್ಷಗಳು ವಾದಿಸುತ್ತಿವೆ. ಬಹುಶಃ ದ್ವಂದ್ವ ನೀತಿಗೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೆ ಇಲ್ಲ.
ಇವೆಲ್ಲದರ ಪರಿಣಾಮ ದಾರಿ ತಪ್ಪುತ್ತಿರುವವರು ಮಾತ್ರ ಅಮಾಯಕ ಲಿಂಗಾಯತರು; ಅಷ್ಟೇ!