ʼಮುಡಾ ಹಗರಣದಂತೆ ಬಿಡಿಎ ಹಗರಣ ಕೂಡ ಸಿದ್ದರಾಮಯ್ಯ ಕೊರಳಿಗೆʼ: ಸಿಎಂ ವಿರುದ್ದ ಹೊಸ ಬಾಂಬ್
ಬೆಂಗಳೂರು, ಸೆಪ್ಟೆಂಬರ್ 12: ಭ್ರಷ್ಟಾಚಾರ ಮಾಡಲೆಂದೇ ಬಿಡಿಎ ಕಾಂಪ್ಲೆಕ್ಸ್ಗಳನ್ನು ಖಾಸಗೀಕರಣ ಮಾಡಲು ಸಚಿವರು, ಶಾಸಕರು ಮುಂದಾಗಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ ನೀವು ಇದನ್ನು ನೋಡಿಕೊಂಡು ಸುಮ್ಮನೆ ಇದ್ದರೆ ಮುಡಾ ಹಗರಣದಂತೆ ಬಿಡಿಎ ಕಾಂಪ್ಲೆಕ್ಸ್ ಹಗರಣ ಕೂಡ ನಿಮ್ಮ ಕೊರಳಿಗೆ ಸುತ್ತಿಕೊಳ್ಳಲಿದ್ದು ಯಾವುದೇ ಕಾರಣಕ್ಕೂ ಬಿಡಿಎ ಕಾಂಪ್ಲೆಕ್ಸ್ಗಳ ಖಾಸಗೀಕರಣಕ್ಕೆ ಅವಕಾಶ ಕೊಡಬೇಡಿ ಎಂದು ಆಮ್ ಆದ್ಮಿ ಪಾರ್ಟಿ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.
ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆದ 'ಬಿಡಿಎ ಕಾಂಪ್ಲೆಕ್ಸ್ ಉಳಿಸಿ ನಾಗರಿಕ ಪ್ರತಿರೋಧ ಸಮಾವೇಶ'ದಲ್ಲಿ ಭಾಗವಹಿಸಿ ಮಾತನಾಡಿದ ಡಾ. ಮುಖ್ಯಮಂತ್ರಿ ಚಂದ್ರು, 2008ರಿಂದ ಈ ಗುತ್ತಿಗೆ ವ್ಯವಹಾರ ಆರಂಭವಾಗಿದೆ. ಇಂದಿರಾನಗರದಲ್ಲಿ ಮೊದಲು ಬಿಡಿಎ ಆಸ್ತಿಯನ್ನು ಗುತ್ತಿಗೆ ನೀಡಲಾಯಿತು. ಕಿಕ್ಬ್ಯಾಕ್ ಪಡೆಯುವುದರಲ್ಲಿ ಹೆಚ್ಚು ಕಡಿಮೆಯಾಗಿ, ಟೆಂಡರ್ ಕರೆಯುವುದು ರದ್ದು ಮಾಡುವುದು ಮಾಡಿದ್ದಾರೆ. ಈಗ ಗುತ್ತಿಗೆ ಹೆಸರಿನಲ್ಲಿ7 ಕಾಂಪ್ಲೆಕ್ಸ್ಗಳನ್ನು ಖಾಸಗಿಯವರಿಗೆ ನೀಡಲು ಹೊರಟಿದೆ ಎಂದರು.

2020ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಗುತ್ತಿಗೆ ಕೊಡುವುದನ್ನು ತಡೆ ಹಿಡಿಯಲಾಗಿದೆ. ಹ್ಯಾರಿಸ್ ಅವರಿಗೆ ಸಂಬಂಧಪಟ್ಟ ಒಂದು ಕಂಪನಿ, ಗರುಡಾಚಾರ್ ಅವರಿಗೆ ಸಂಬಂಧಪಟ್ಟ ಕಂಪನಿಗೆ ಗುತ್ತಿಗೆ ಕೊಡಲು ಹೊರಟಿದೆ. 65 ರಷ್ಟು ಖಾಸಗಿಯವರಿಗೆ 35 ಬಿಡಿಎಗೆ ಎಂದು ಹೇಳಲಾಗಿದೆ. ಮೊದಲ 30 ವರ್ಷ ಒಪ್ಪಂದ ಮುಗಿದ ಬಳಿಕ ಮತ್ತೆ 30 ವರ್ಷ ಕೊಡಬಹುದು ಎಂದು ಹೇಳಲಾಗಿದೆ. ಅಂದರೆ ಕಡಿಮೆ ಹಣದಲ್ಲಿ ಹೆಚ್ಚಿನ ಆಸ್ತಿಯನ್ನು ಖಾಸಗಿಯವರಿಗೆ ನೀಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯನವರು ಇನ್ನೂ ಸುಮ್ಮನಿದ್ದರೆ ಈ ಹಗರಣ ಕೂಡ ನಿಮ್ಮ ತಲೆಗೆ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.
ಆಮ್ ಆದ್ಮಿ ಪಾರ್ಟಿ ಪಕ್ಷಬೇಧ ಮರೆತು ಹೋರಾಟಕ್ಕೆ ಬೆಂಬಲ ಕೊಡುತ್ತೇವೆ. ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಬಿಡಿಎ ಸ್ವತ್ತುಗಳನ್ನು ನೀಡಬಾರದು. ಗುತ್ತಿಗೆ ಹೆಸರಿನಲ್ಲಿ ಹಗಲು ದರೋಡೆ ಮಾಡ್ತಿದ್ದೀರಾ, ಸರ್ಕಾರ ಈಗಲೇ ಎಚ್ಚೆತ್ತು ಬೇಡಿಕೆಗಳನ್ನು ಪೂರೈಸಬೇಕು ಎಂದು ಆಗ್ರಹಿಸಿದರು.
ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿರೆಡ್ಡಿ ಮಾತನಾಡಿ, ರಾಜ್ಯವನ್ನು ಮಾರಾಟ ಮಾಡಿ ಎಂದು ನಿಮಗೆ ಅಧಿಕಾರ ಕೊಟ್ಟಿದ್ದೇವಾ? ಒಂದು ಕಡೆ ಕೇಂದ್ರ ಸರ್ಕಾರ ವಿಮಾನ ನಿಲ್ದಾಣ, ರೈಲ್ವೆ ಎಲ್ಲವನ್ನೂ ಮಾರಾಟ ಮಾಡುತ್ತಿದೆ, ತಮ್ಮ ಅನುಕೂಲಕ್ಕಾಗಿ ಅಕ್ರಮ ಸಕ್ರಮ ಮಾಡುತ್ತಾರೆ. ಚುನಾವಣಾ ಬಾಂಡ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಬಿಡಿಎ ಕಾಂಪ್ಲೆಕ್ಸ್ ಖಾಸಗೀಕರಣ ಕೂಡ ಅಂತಹದ್ದೇ ಒಂದು ಹಗರಣ, ಖಾಸಗಿಯವರು ಹಣ ಮಾಡಿಕೊಳ್ಳಲು ಹೊರಟಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ಈಗ ತಮ್ಮ ಖುರ್ಚಿ ಉಳಿಸಿಕೊಳ್ಳುವ ಸಂಕಷ್ಟದಲ್ಲಿದ್ದಾರೆ. ನಿಮ್ಮ ಮಂತ್ರಿಗಳು, ಶಾಸಕರು ಮಾಡುತ್ತಿರುವ ಅನ್ಯಾಯ ನಿಮಗೆ ಕಾಣಿಸುತ್ತಿಲ್ಲವಾ? ಕೆರೆ, ಗೋಮಾಳ, ಸರ್ಕಾರಿ ಜಮೀನುಗಳನ್ನು ನುಂಗಿದ್ದಾಗಿದೆ. ಈಗ ಗುತ್ತಿಗೆ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಬಿಡಿಎ ಆಸ್ತಿಗಳನ್ನು ನುಂಗಲು ಹೊರಟಿದ್ದಾರೆ. ಇದೇ ಜಾಗದಲ್ಲಿ ಶಾಲೆಗಳನ್ನು ಕಟ್ಟಿ, ಆಸ್ಪತ್ರೆಗಳನ್ನು ಕಟ್ಟಿ ಎಂದು ಆಗ್ರಹಿಸಿದರು.
ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಉಳ್ಳವರಿಗೆ ಅನುಕೂಲ ಮಾಡಿಕೊಡಲು ಬಿಡಿಎ ಕಾಂಪ್ಲೆಕ್ಸ್ಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಮಧ್ಯಮ ವರ್ಗದ ವ್ಯಾಪಾರಿಗಳು ಬಿಡಿಎ ಕಾಂಪ್ಲೆಕ್ಸ್ಗಳಲ್ಲಿ ವ್ಯಾಪಾರ ಮಾಡಿ ಕುಟುಂಬವನ್ನು ಪೋಷಣೆ ಮಾಡುತ್ತಿದ್ದಾರೆ. ಆದರೆ ಭ್ರಷ್ಟರ ಅನುಕೂಲಕ್ಕಾಗಿ, ಬಿಡಿಎ ಕಾಂಪ್ಲೆಕ್ಸ್ ಆಸ್ತಿಗಳನ್ನು ನುಂಗಲು ಹೊರಟಿದ್ದಾರೆ ಎಂದರು.
ಸಮಾಜ ಪರಿವರ್ತನಾ ಸಮುದಾಯ ಸಂಚಾಲಕ ಎಸ್.ಆರ್.ಹಿರೇಮಠ ಮಾತನಾಡಿ, ಬಿಡಿಎಯಿಂದ ಜನಸಾಮಾನ್ಯರಿಗೆ ಅನುಕೂಲ ಇಲ್ಲ ಎಂದಾದರೆ ಅದು ಏಕೆ ಇರಬೇಕು ಮುಚ್ಚಿಬಿಡಿ. ಬಡವರಿಗೆ ಕಡಿಮೆ ಬೆಲೆಗೆ ಸೈಟು ಕೊಡಬೇಕು ಎಂದು ಲೇಔಟ್ ಮಾಡುತ್ತಾರೆ. ನಾಡಪ್ರಭು ಕೆಂಪೇಗೌಡ ಲೇಔಟ್ ಮಾಡಿ ಒಂದು ಸೈಟು 24 ಲಕ್ಷ ರೂಪಾಯಿಗಳಂತೆ 25 ಸಾವಿರ ಸೈಟುಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡಿದ್ದಾರೆ. ಇದರಲ್ಲಿ ಬರುವ ಸಾವಿರಾರು ಕೋಟಿ ರೂಪಾಯಿ ಹಣ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ, ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಕುಮಾರ್, ಎಎಪಿ ಮುಖಂಡ ಅನಿಲ್ ನಾಚಪ್ಪ, ಬಿಡಿಎ ಕಾಂಪ್ಲೆಕ್ಸ್ ಹೋರಾಟ ಸಮಿತಿ ಮುಖ್ಯಸ್ಥ ಆರ್. ನಾಗೇಶ್, ಸಂಚಾಲಕ ಲಿಂಗರಾಜು, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ್, ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ರಾಜ್ಯ ಸಮಿತಿ ಮುಖ್ಯಸ್ಥೆ ಗೌರಮ್ಮ, ಕರವೇ ಗಜಸೇನೆ ರಾಜ್ಯಾಧ್ಯಕ್ಷ ತಾಯ್ನಾಡು ರಾಘವೇಂದ್ರ, ದಲಿತ ಸೇವಾ ಸಂಘದ ರಾಜ್ಯಾಧ್ಯಕ್ಷ ಎಂ. ಚಂದ್ರಪ್ಪ, ಬಹುಜನ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಆರ್.ಎನ್.ಎಂ.ರಮೇಶ್ ಭಾಗವಹಿಸಿದ್ದರು.












Click it and Unblock the Notifications