ʼಪ್ರೀತಿ ಮಾಡದೆ ಇದ್ದರೆ ಹೆಣ್ಮಗಳ ಹತ್ಯೆ, ಮಾತು ಕೇಳದಿದ್ದರೂ ಹೆಣ್ಮಕ್ಕಳ ಹತ್ಯೆ: ನಾವು ಕರ್ನಾಟಕದಲ್ಲಿ ಇದ್ದೇವಾ?ʼ
ಬೆಂಗಳೂರು, ಮೇ 17: ಪ್ರೀತಿ ಮಾಡದೆ ಇದ್ದರೆ ಹೆಣ್ಮಗಳ ಹತ್ಯೆ, ಮಾತು ಕೇಳದಿದ್ದರೂ ಹೆಣ್ಮಕ್ಕಳ ಹತ್ಯೆ, ಕ್ಷುಲ್ಲಕ ಕಾರಣಕ್ಕೆ ಮಹಿಳೆಯನ್ನು ವಿವಸ್ತ್ರಗೊಳಿಸುವುದು, ಸಾಮೂಹಿಕ ಅತ್ಯಾಚಾರ, ರೊಟ್ಟಿ ಕೇಳಲು ಹೋದ ವ್ಯಕ್ತಿಯ ಕೊಲೆ, ಕಾರಿನ ವ್ಯವಹಾರದಲ್ಲಿ ವ್ಯಕ್ತಿಯನ್ನು ನಗ್ನಗೊಳಿಸಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಡುವುದು ನಡೆದಿದೆ. ನಾವು ಕರ್ನಾಟಕದಲ್ಲಿ ಇದ್ದೇವಾ? ಎಲ್ಲಿದ್ದೇವೆ? ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಪ್ರಶ್ನಿಸಿದರು.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಯವರು ತಕ್ಷಣವೇ ರಾಜ್ಯದ ಗೃಹ ಸಚಿವರನ್ನು ವಜಾ ಮಾಡಬೇಕು. ಈ ಸರಕಾರಕ್ಕೆ ಜೀವ ಇದೆಯೇ? ಸರಕಾರ ಸತ್ತು ಹೋಗಿದೆಯೇ? ಮಹಿಳೆಯರು, ದಲಿತರು, ಹಿಂದುಳಿದವರನ್ನು ರಕ್ಷಿಸುವಲ್ಲಿ, ಅಮಾಯಕರನ್ನು ರಕ್ಷಿಸುವಲ್ಲಿ ಈ ಸರಕಾರ ಸಂಪೂರ್ಣ ವಿಫಲವಾಗಿದೆ. ನಾನು ಗೃಹ ಸಚಿವ ಡಾ. ಪರಮೇಶ್ವರ್ ಅವರ ರಾಜೀನಾಮೆ ಕೊಡುವಂತೆ ಕೇಳುವುದಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯವು ಕೊಲೆಗಡುಕರ ನೆಲೆವೀಡಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕಳೆದ ಒಂದು ವರ್ಷದಲ್ಲಿ ಆದ ಸರಣಿ ಹತ್ಯೆಗಳ ಕುರಿತು, ಸರಣಿ ಅತ್ಯಾಚಾರ, ಸರಣಿ ದೌರ್ಜನ್ಯಗಳ ಬಗ್ಗೆ ಈ ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ರಾಜ್ಯದ ಜನತೆಯ ಕ್ಷಮೆ ಕೋರಬೇಕು. ತಕ್ಷಣವೇ ಗೃಹ ಸಚಿವರನ್ನು ವಜಾ ಮಾಡಲಿ ಎಂದು ಒತ್ತಾಯಿಸಿದರು.
ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು, ದಿನಕ್ಕೆ 2-3 ಕೊಲೆಗಳು, ಅಮಾಯಕರ ಮೇಲೆ ಸುಳ್ಳು ಕೇಸು ಹಾಕಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಅಂಜಲಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಅಂಜಲಿ ಹತ್ಯೆಗೂ ಮೊದಲು ಕೊಲೆಗಾರ ಆ ಹೆಣ್ಮಗಳಿಗೆ ಬೆದರಿಕೆ ಒಡ್ಡಿದ್ದ. ನಿನ್ನನ್ನೂ ನೇಹಾ ಮಾದರಿಯಲ್ಲಿ ಹತ್ಯೆ ಮಾಡುವುದಾಗಿ ತಿಳಿಸಿದ್ದ. ಹತ್ಯೆಗೀಡಾದ ಯುವತಿ ಮತ್ತು ಅವರ ಅಜ್ಜಿ ಖುದ್ದಾಗಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು ಎಂದು ವಿವರಿಸಿದರು.
ಆದರೆ, ಪೊಲೀಸರು ಇದನ್ನು ಮೂಢನಂಬಿಕೆ ಎಂದು ತಳ್ಳಿಹಾಕಿದ್ದರು. ಇದರ ಮುಂದುವರೆದ ಪರಿಣಾಮ ಒಬ್ಬ ಹೆಣ್ಮಗಳ ಬರ್ಬರ ಹತ್ಯೆ ಆಗಿದೆ ಎಂದ ಅವರು, ಅತಿ ಹೆಚ್ಚು ಅಪರಾಧ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗುತ್ತಿವೆ. ಈ ಸರಕಾರ ಪೊಲೀಸರಿಗೆ ಪೊಲೀಸರ ಕರ್ತವ್ಯ ಮಾಡಲು ಅವಕಾಶ ಮಾಡಿ ಕೊಡದೆ ಇರುವುದೇ ಇದಕ್ಕೆ ಕಾರಣ ಎಂದು ಆಕ್ಷೇಪಿಸಿದರು. ಪೊಲೀಸರನ್ನು ದ್ವೇಷದ ರಾಜಕೀಯ, ಅಮಾಯಕರ ಮೇಲೆ ಕೇಸು ಹಾಕಲು ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.












Click it and Unblock the Notifications