ಯಡಿಯೂರಪ್ಪ ಅಥವಾ ಮೋದಿ ಯಾರಾದರೂ ಸ್ಪರ್ಧಿಸಲಿ, ನಾವು ರೆಡಿ
ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಯಡಿಯೂರಪ್ಪ ಬೇಕಾದರೂ ಸ್ಪರ್ಧಿಸಲಿ, ಪ್ರಧಾನಿ ಇಲ್ಲಿಗೆ ಬಂದು ಸ್ಪರ್ಧಿಸಿದರೂ ನಾವು ರೆಡಿ ಎಂದು ರಾಜ್ಯ ಸಚಿವ ಮತ್ತು ಬೆಳಗಾವಿ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ, ಸೆ 17: ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಯಡಿಯೂರಪ್ಪ ಬೇಕಾದರೂ ಸ್ಪರ್ಧಿಸಲಿ, ಪ್ರಧಾನಿ ಇಲ್ಲಿಗೆ ಬಂದು ಸ್ಪರ್ಧಿಸಿದರೂ ನಾವು ರೆಡಿ ಎಂದು ರಾಜ್ಯ ಸಚಿವ ಮತ್ತು ಬೆಳಗಾವಿ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಉತ್ತರ ಕರ್ನಾಟಕದ ಭಾಗದಿಂದ ಯಡಿಯೂರಪ್ಪ ಸ್ಪರ್ಧಿಸಲಿದ್ದಾರಂತೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಜಾರಕಿಹೊಳಿ, ಯಡಿಯೂರಪ್ಪ ಅಥವಾ ನರೇಂದ್ರ ಮೋದಿ ಬೇಕಾದರೂ ಸ್ಪರ್ಧಿಸಲಿ, ನಾವಂತೂ ಸಿದ್ದರಾಗಿದ್ದೇವೆಂದು ವಿಶ್ವಾಸದ ಮಾತನ್ನಾಡಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟನೆ
ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರ ಮಧ್ಯೆ ಹೋಲಿಕೆಯೇ ಸಲ್ಲ, ಐದು ವರ್ಷದಲ್ಲಿ ನಮ್ಮ ಸರಕಾರದ ಅಭಿವೃದ್ದಿ ಕೆಲಸವೇ ನಮಗೆ ಶ್ರೀರಕ್ಷೆ. ಹಾಗಾಗಿ, ನಾವು ಎದುರಾಳಿ ಯಾರೇ ಇರಲಿ, ವಿಶ್ವಾಸದಿಂದ ಚುನಾವಣೆ ಎದುರಿಸುತ್ತೇವೆಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೆಳಗಾವಿ ಜಿಲ್ಲೆ ಅಥಣಿಯಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದೇವೆ. ಆದರೆ ನಮ್ಮ ಮನವಿಯನ್ನು ಸ್ವೀಕರಿಸಿ, ಅವರು ಇಲ್ಲಿಂದ ಸ್ಪರ್ಧಿಸುವ ಸಾಧ್ಯತೆ ಕಮ್ಮಿ ಎಂದು ಜಾರಕಿಹೊಳಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ನಗರದಲ್ಲಿ ಭಾನುವಾರ (ಸೆ 17) ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ರಮೇಶ್, ಬಾಗಲಕೋಟೆ ಜಿಲ್ಲೆಯ ಯಾವುದಾದರೊಂದು ಕ್ಷೇತ್ರದಿಂದ ಯಡಿಯೂರಪ್ಪ ಸ್ಪರ್ಧಿಸಲಿದ್ದಾರೆ ಎನ್ನುವ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.
ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಬಾದಾಮಿ ಅಥವಾ ಬಾಗಲಕೋಟೆ ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಯಾವುದಾದರೂ ಒಂದು ಕ್ಷೇತ್ರದಿಂದ ಯಡಿಯೂರಪ್ಪ ಸ್ಪರ್ಧಿಸುವ ಸಾಧ್ಯತೆಯಿದೆ.