Breaking; ಚಿರತೆ ದಾಳಿ, ಅರಣ್ಯ ಇಲಾಖೆ ನಿದ್ರೆಯಲ್ಲಿದೆ ಎಂದ ಎಚ್ಡಿಕೆ
ಬೆಂಗಳೂರು, ಡಿಸೆಂಬರ್ 02; ' ಅರಣ್ಯ ಇಲಾಖೆ ಗಾಢ ನಿದ್ರೆಯಲ್ಲಿ ಇದ್ದಂತೆ ಇದೆ. ಹಾಗಾದರೆ, ಇನ್ನೆಷ್ಟು ಜೀವಗಳು ಹೋಗಬೇಕು?' ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರಾಜ್ಯದಲ್ಲಿನ ಚಿರತೆ ದಾಳಿ ಪ್ರಕರಣದ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ.
ಶುಕ್ರವಾರ ಟ್ವೀಟ್ ಮಾಡಿರುವ ಅವರು, 'ರಾಜ್ಯದಲ್ಲಿ ಚಿರತೆ ದಾಳಿಗೆ ತುತ್ತಾಗುತ್ತಿರುವವರ ಸಂಖ್ಯೆ ದಿನೇದಿನೆ ಅಧಿಕವಾಗುತ್ತಿದೆ. ಅರಣ್ಯ ಇಲಾಖೆ ಈ ಬಗ್ಗೆ ಅತೀವ ನಿರ್ಲಕ್ಷ್ಯ ವಹಿಸಿರುವುದು ನನ್ನ ಗಮನಕ್ಕೆ ಬಂದಿದೆ. ಮೇಘನಾ ಎಂಬ ವಿದ್ಯಾರ್ಥಿನಿಯೊಬ್ಬರು ಚಿರತೆಗೆ ಬಲಿಯಾಗಿರುವ ಘಟನೆ ನನ್ನ ಮನ ಕಲಕಿದೆ' ಎಂದು ಹೇಳಿದ್ದಾರೆ.

'ಚಿರತೆಗಳ ಇರುವಿಕೆಯನ್ನು ಪತ್ತೆ ಹಚ್ಚಿ ಜನರನ್ನು ಎಚ್ಚರಗೊಳಿಸುವುದು ಅರಣ್ಯ ಇಲಾಖೆಯ ಹೊಣೆ. ಆ ಚಿರತೆಗಳನ್ನು ಹಿಡಿದು ದಟ್ಟ ಕಾಡಿಗೆ ಬಿಡಬೇಕಾದ ಅಗತ್ಯವಿದೆ. ಆದರೆ, ಅರಣ್ಯ ಇಲಾಖೆ ಗಾಢ ನಿದ್ರೆಯಲ್ಲಿ ಇದ್ದಂತೆ ಇದೆ. ಹಾಗಾದರೆ, ಇನ್ನೆಷ್ಟು ಜೀವಗಳು ಹೋಗಬೇಕು?' ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಚಿರತೆ ದಾಳಿಗೆ ತುತ್ತಾಗುತ್ತಿರುವವರ ಸಂಖ್ಯೆ ದಿನೇದಿನೆ ಅಧಿಕವಾಗುತ್ತಿದೆ. ಅರಣ್ಯ ಇಲಾಖೆ ಈ ಬಗ್ಗೆ ಅತೀವ ನಿರ್ಲಕ್ಷ್ಯ ವಹಿಸಿರುವುದು ನನ್ನ ಗಮನಕ್ಕೆ ಬಂದಿದೆ. ಮೇಘನಾ ಎಂಬ ವಿದ್ಯಾರ್ಥಿನಿಯೊಬ್ಬರು ಚಿರತೆಗೆ ಬಲಿಯಾಗಿರುವ ಘಟನೆ ನನ್ನ ಮನ ಕಲಕಿದೆ.1/5#ಚಿರತೆಗಳಿಂದ_ಜನರ_ಜೀವ_ರಕ್ಷಿಸಿ
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 2, 2022
'ಅರಣ್ಯಗಳ ಅಕ್ಕಪಕ್ಕ ವಾಸ ಮಾಡುವ ಜನರಿಗೆ ರಕ್ಷಣೆ ಕಲ್ಪಿಸುವುದು, ಚಿರತೆಗಳ ಹಾವಳಿ ನಿವಾರಿಸುವ ನಿಟ್ಟಿನಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಬೇಕು. ಈ ಉದ್ದೇಶಕ್ಕೆ ಅತ್ಯಾಧುನಿಕ ಕಾರ್ಯಪಡೆ ರಚನೆ ಮಾಡಬೇಕು. ಚಿರತೆಗಳಿಗೆ ಬಲಿಯಾದವರ ಕುಟುಂಬಗಳಿಗೆ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು' ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
5 ಲಕ್ಷ ರೂ. ಪರಿಹಾರ; ಗುರುವಾರ ಟಿ. ನರಸೀಪುರ ತಾಲೂಕಿನ ಎಸ್. ಕಬ್ಬೆಹುಂಡಿಯಲ್ಲಿ ಚಿರತೆ ದಾಳಿಗೆ ಬಲಿಯಾದ ಯುವತಿ ಮೇಘನಾ ಕುಟುಂಬಕ್ಕೆ ಅರಣ್ಯ ಇಲಾಖೆ ವತಿಯಿಂದ 5 ಲಕ್ಷ ರೂ. ಪರಿಹಾರ ನೀಡಲಾಗಿದೆ.
ಮನೆಯ ಮುಂದೆ ಕುಳಿತಿದ್ದ ಯುವತಿ ಮೇಘನಾ ಮೇಲೆ ಚಿರತೆ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದರು.
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದಾಗ ಗ್ರಾಮಸ್ಥರು ವಾಗ್ವಾದ ನಡೆಸಿದ್ದರು. ಆಗ ಮೇಘನಾ ಕುಟುಂಬಕ್ಕೆ 7.5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಈಗ ಡಿಸಿಎಫ್ ಕಮಲಾ ಕರಿಕಾಳನ್ 5 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಿದ್ದಾರೆ.











Click it and Unblock the Notifications