ಕರ್ನಾಟಕದಲ್ಲಿ ಮಳೆ ಅಭಾವ: ಅಕ್ಕಿ ಬೆಲೆಯಲ್ಲಿ ಹೆಚ್ಚಳ- ಕೇವಲ ಒಂದೂವರೆ ತಿಂಗಳಲ್ಲಿ ದುಬಾರಿಯಾಗಿದ್ದು ಎಷ್ಟು ಗೊತ್ತೇ?
ಬೆಂಗಳೂರು, ಆಗಸ್ಟ್ 22: ಬಹುಪಾಲು ಭಾರತೀಯರ ಪ್ರಧಾನ ಆಹಾರವಾದ ಅಕ್ಕಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಅದರಲ್ಲೂ ಕರ್ನಾಟಕದಲ್ಲಿ ಮಳೆ ಅಭಾವದಿಂದ ಅಕ್ಕಿ ಬೆಲೆ ದುಬಾರಿಯಾಗುತ್ತಿದೆ. ಅನಿಯಮಿತ ಮಳೆಯಿಂದಾಗಿ ಆಹಾರ ಬೆಲೆಗಳಲ್ಲಿ ಏರಿಕೆ ಕಾಣುತ್ತಿದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮಳೆ ಕೊರತೆಯಿಂದ ಅಕ್ಕಿ ಬೆಳೆಗೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ದಾಸ್ತಾನಿನಲ್ಲಿ ಕೊರತೆ ಉಂಟಾಗಿದೆ. ಆದರೆ, ಜನರ ಬೇಡಿಕೆಯು ಹೆಚ್ಚಾಗಿದೆ. ಕಾರಣ, ಒಂದೂವರೆ ತಿಂಗಳಲ್ಲಿ ಬೆಲೆ 15 ರಿಂದ 20 ರಷ್ಟು ದುಬಾರಿಯಾಗಿದೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ಯಶವಂತಪುರ ಎಪಿಎಂಸಿಯ ವ್ಯಾಪಾರಿಗಳ ಪ್ರಕಾರ, ಶುಕ್ರವಾರ ಕಚ್ಚಾ ಸೋನಾ ಮಸೂರಿ ಕೆಜಿಗೆ 55ರಿಂದ 60 ರೂ.ಗೆ ಮಾರಾಟವಾಗುತ್ತಿದೆ. ಜೂನ್ ಅಂತ್ಯದ ವೇಳೆಗೆ ಇದು 45 ರಿಂದ 48 ರೂಪಾಯಿವರೆಗೆ ಇತ್ತು. ಇಡ್ಲಿ- ದೋಸೆ ಅಕ್ಕಿ ಕೆಜಿಗೆ 35 ರೂ.ಗೆ ಮಾರಾಟವಾಗುತ್ತಿದೆ. ಈ ಹಿಂದೆ 28 ರಿಂದ 30 ರೂ ವರೆಗೆ ಮಾರಾಟವಾಗುತ್ತಿತ್ತು.
ಹೋಟೆಲ್ಗಳಲ್ಲಿ ಹೆಚ್ಚು ಬಳಸುವ ಸ್ಟೀಮ್ ರೈಸ್ ಕೆಜಿಗೆ 45 ಯಿಂದ 50 ರೂ. ವರೆಗೆ ಮಾರಾಟವಾಗುತ್ತಿದೆ. ಇದು ಎಂಪಿಎಂಸಿಯಲ್ಲಿ 38 ಯಿಂದ 43 ರೂ. ವರೆಗೆ ಮಾರಾಟವಾಗುತ್ತಿದೆ. ಎಪಿಎಂಸಿಯಲ್ಲಿ ಸಗಟು ದರಕ್ಕಿಂತ ಚಿಲ್ಲರೆ ಅಕ್ಕಿ ದರಗಳು ಶೇ 10 ರಿಂದ 15ರಷ್ಟು ಏರಿಕೆಯಾಗುತ್ತವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಜುಲೈನಲ್ಲಿ ಬೆಲೆ ಏರಿಕೆಯಾಗಿತ್ತು. ಈ ತಿಂಗಳು ಮತ್ತೆ ಏರಿಕೆಯಾಗಿದೆ. ಕಳೆದ ವರ್ಷ, ಹೆಚ್ಚು ಮಳೆಯಿಂದ ಹಾನಿಗೊಳಗಾಗಿತ್ತು. ಈ ವರ್ಷ, ಕಡಿಮೆ ಮಳೆಯಿಂದಾಗಿ ಕರ್ನಾಟಕದಾದ್ಯಂತ ಶೇ 40 ಬಿತ್ತನೆ ಕಡಿಮೆಯಾಗಿದೆ ಎಂದು ರೈತರು ಹೇಳಿದ್ದಾರೆ.
ಭತ್ತ ಬಿತ್ತನೆ ಮಾಡುವ ರೈತರು ಇನ್ನೂ ಬಿತ್ತನೆ ಮಾಡಿಲ್ಲ. 20 ದಿನಗಳಿಂದ ಮಳೆಯಾಗಿಲ್ಲ. ಮುಂದಿನ 10 ದಿನಗಳು ನಿರ್ಣಾಯಕವಾಗಿವೆ. ಮಳೆ ಕೈಕೊಟ್ಟರೆ ಅಕ್ಕಿ ಬೆಲೆ ಇನ್ನಷ್ಟು ಏರಿಕೆಯಾಗಲಿದೆ ಎಂದು ಯಶವಂತಪುರ ಎಪಿಎಂಸಿ ಸಮನ್ವಯ ಸಮಿತಿ ಸದಸ್ಯ ರಮೇಶ್ ಚಂದ್ರ ಲಾಹೋಟಿ 'ಟೈಮ್ಸ್ ಆಫ್ ಇಂಡಿಯಾ'ಗೆ ತಿಳಿಸಿದ್ದಾರೆ.

ಕೇವಲ 1 ಕೆಜಿ ಭತ್ತವನ್ನು ಯಶಸ್ವಿಯಾಗಿ ಬೆಳೆಯಲು ಮತ್ತು ಕೊಯ್ಲು ಮಾಡಲು 2,500 ಲೀಟರ್ ನೀರು ಬೇಕಾಗುತ್ತದೆ ಎಂದು ಕೃಷಿ ಮಾರುಕಟ್ಟೆ ಇಲಾಖೆಯ ಮೂಲಗಳು ತಿಳಿಸಿವೆ.
ರೈತರ ಮುಖಂಡ ಮತ್ತು ಎರಡು ಎಕರೆ ಭತ್ತದ ಗದ್ದೆಯ ಮಾಲೀಕ ಕುರುಬೂರು ಶಾಂತಕುಮಾರ್ ಅವರು ಈ ಕುರಿತು ಮಾತನಾಡಿದ್ದಾರೆ.
ರೈತರು ಪ್ರತಿ ಮುಂಗಾರು ಮತ್ತು ಹಿಂಗಾರು ಋತುವಿನಲ್ಲಿ ಸೋನಾ ಮಸೂರಿಯನ್ನು ಬೆಳೆಯುತ್ತಾರೆ. ಆದರೆ ನೀರಿನ ಸಂಪನ್ಮೂಲಗಳ ಕೊರತೆಯಿಂದಾಗಿ ಈ ಬಾರಿ ಬೀಜಗಳನ್ನು ಬಿತ್ತಿಲಾಗಿಲ್ಲ. ಕೆಆರ್ಎಸ್ನಲ್ಲಿ ನೀರಿಲ್ಲ. ಮೈಸೂರು, ಮಂಡ್ಯ ಸುತ್ತಮುತ್ತ ಭತ್ತ ಬೆಳೆಯುವ ಪ್ರದೇಶಗಳು ಒಣಗಿವೆ ಎಂದು ಅವರು ತಿಳಿಸಿದ್ದಾರೆ.
ಹಾಸನ, ಚಾಮರಾಜನಗರದಲ್ಲಿ ನೀರಿನ ಕೊರತೆಯಾಗಿದೆ. ಇಳುವರಿ ಪಡೆಯಲು ಕನಿಷ್ಠ ಮೂರು ತಿಂಗಳ ಕಾಲ ನಿರಂತರ ಹರಿವು ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ದಾವಣಗೆರೆಯ ಭತ್ತದ ಬೆಳೆಗಾರ ಹನುಮಂತಪ್ಪ ಆಂಜನಪ್ಪ ಮಾತನಾಡಿ, 'ಸುಮಾರು ಐದು ದಿನಗಳ ಹಿಂದೆ ಅಣೆಕಟ್ಟಿನಿಂದ ತಮ್ಮ ಹೊಲಕ್ಕೆ ನೀರು ಬಿಟ್ಟಿದ್ದಾರೆ. ಆದರೆ, ಪ್ರತಿನಿತ್ಯ ನೀರು ಬೇಕಿದೆ' ಎಂದು ಹೇಳಿದ್ದಾರೆ.
ಚಾಮರಾಜನ ಜಿಲ್ಲೆಯ ರೈತ ಹಳ್ಳಿಕೆರೆಹುಂಡಿ ಭಾಗ್ಯರಾಜು ಮಾತನಾಡಿ, 'ಭತ್ತದ ರೈತರು ಕೆಲಸ ಬಿಟ್ಟು ನಗರಕ್ಕೆ ಹೋಗಿ ಕಟ್ಟಡ ನಿರ್ಮಾಣ ಮತ್ತು ಮರಗೆಲಸಕ್ಕೆ ಸಂಬಂಧಿಸಿದ ತಾತ್ಕಾಲಿಕ ಕೆಲಸಗಳನ್ನು ಮಾಡಲು ಯೋಚಿಸುತ್ತಿದ್ದೇವೆ' ಎಂದು ತಿಳಿಸಿದ್ದಾರೆ.












Click it and Unblock the Notifications