ಸಿದ್ದರಾಮಯ್ಯ ಮಗನಿಗೆ ಸಿಕ್ಕಿದ್ದು ಇದೊಂದೇ ಪ್ರಾಜೆಕ್ಟಾ?
ಬೆಂಗಳೂರು, ಏಪ್ರಿಲ್ 15 : ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಿದ್ದರಾಮಯ್ಯನವರ ಮಗ ಡಾ. ಯತೀಂದ್ರ ಮಲ್ಟಿ ಸ್ಪೆಷಾಲಿಟಿ ಲ್ಯಾಬ್ ಸ್ಥಾಪಿಸುತ್ತಿರುವುದು ವಿರೋಧ ಪಕ್ಷಗಳಿಗೆ ಮುಖ್ಯಮಂತ್ರಿಗಳನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಪ್ರಬಲ ಅಸ್ತ್ರ ಸಿಕ್ಕಂತಾಗಿದೆ. ಸಿದ್ದರಾಮಯ್ಯನವರೂ ಸೋಲು ಒಪ್ಪಿಕೊಳ್ಳುತ್ತಿಲ್ಲ, ವಿರೋಧ ಪಕ್ಷದವರೂ ಬಿಡುತ್ತಿಲ್ಲ.
ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ಸ್ ಲಿಮಿಟೆಡ್ ಸಂಸ್ಥೆಗೆ ಡಾ. ಯತೀಂದ್ರ ಸಿದ್ದರಾಮಯ್ಯ ನಿರ್ದೇಶಕರಾದ ನಂತರ ಇದೊಂದೇ ಪ್ರಾಜೆಕ್ಟ್ ಸಿಕ್ಕಿದೆಯಾ? ಅಥವಾ ಸಿದ್ದರಾಮಯ್ಯನವರ ಕೃಪೆಯಿಂದಾಗಿ ಇನ್ನೂ ಹಲವಾರು ಪ್ರಾಜೆಕ್ಟುಗಳು ಯತೀಂದ್ರ ಅವರ ಸಂಸ್ಥೆಗೆ ಮಂಜೂರಾಗಿದೆಯಾ?
ಇನ್ನೆರಡು ಪ್ರಾಜೆಕ್ಟ್ : ಈ ಸಂಗತಿಯನ್ನು ಕೆದಕುತ್ತ ಹೋದರೆ, ಸಿದ್ದರಾಮಯ್ಯನವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವಂಥ ಮತ್ತಷ್ಟು ವಿಷಯಗಳು ಹೊರಬರುತ್ತಿವೆ. ಮೈಸೂರು ಮತ್ತು ಕಲಬುರಗಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಗಳಲ್ಲಿಯೂ ಡಾ. ಯತೀಂದ್ರ ಅವರ ಮ್ಯಾಟ್ರಿಕ್ಸ್ ಸಂಸ್ಥೆ ಪ್ರಯೋಗಾಲಯಗಳನ್ನು ಸ್ಥಾಪಿಸಿರುವುದು ಬೆಳಕಿಗೆ ಬಂದಿದೆ. [ಸಿದ್ದರಾಮಯ್ಯ ಪುತ್ರ ಯತೀಂದ್ರರ 'ಮ್ಯಾಟ್ರಿಕ್ಸ್' ಹಿನ್ನಲೆ ಏನು?]
2014ರ ಸೆಪ್ಟೆಂಬರ್ 8ರಂದು ಡಾ. ಯತೀಂದ್ರ ಅವರು ಮ್ಯಾಟ್ರಿಕ್ಸ್ ಸಲ್ಯೂಷನ್ಸ್ ಲಿಮಿಟೆಡ್ ಕಂಪನಿಗೆ ನಿರ್ದೇಶಕರಾಗಿ ಆಯ್ಕೆಯಾದರು. ಅದೇ ತಿಂಗಳಲ್ಲಿ ಮೈಸೂರು ಮತ್ತು ಕಲಬುರ್ಗಿಯ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಟೆಂಡರ್ ಕರೆಯಲಾಯಿತು ಮತ್ತು ನವೆಂಬರ್ ನಲ್ಲಿ ಟೆಂಡರ್ ಕ್ಲೋಸ್ ಮಾಡಲಾಯಿತು. ಎರಡೂ ಯೋಜನೆಗಳನ್ನು ಯತೀಂದ್ರ ತಮ್ಮದಾಗಿಸಿಕೊಂಡರು.
ಲ್ಯಾಬ್ನ ಅವಶ್ಯಕತೆಯೇನುತ್ತು? : ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿಯೇ ಅತ್ಯುತ್ತಮ ಪ್ರಯೋಗಾಲಯ ಇರುವಾಗ ಖಾಸಗಿ ಕಂಪನಿಯಿಂದ ಮತ್ತೊಂದು ಲ್ಯಾಬನ್ನು ಸ್ಥಾಪಿಸುವ ಅಗತ್ಯವಾದರೂ ಏನಿತ್ತು ಎಂದು ಕೆಲ ಹಿರಿಯ ವೈದ್ಯರು ಚಕಾರವೆತ್ತಿದ್ದಾರೆ. ಅಲ್ಲದೆ, ಸರಕಾರಿ ಆಸ್ತಿಯಲ್ಲಿ ಖಾಸಗಿ ಕಂಪನಿ ಲಾಭ ಮಾಡಿಕೊಳ್ಳಲು ಯಾಕೆ ಅವಕಾಶ ನೀಡಬೇಕು ಎಂಬುದು ಅವರ ವಾದ.
ಈ ವಾದವನ್ನು ತಳ್ಳಿಹಾಕುವ ಸಿದ್ದರಾಮಯ್ಯ ಬೆಂಬಲಿಗರು, ಹಿಂದೆ ಕೂಡ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಖಾಸಗಿ ಸಂಸ್ಥೆ ಲ್ಯಾಬ್ ಸ್ಥಾಪಿಸಲು ಅವಕಾಶ ಮಾಡಿಕೊಡಲಾಗಿತ್ತು. ಈಗ ಮತ್ತೊಂದು ಖಾಸಗಿ ಸಂಸ್ಥೆಗೆ ಅವಕಾಶ ಮಾಡಿಕೊಟ್ಟರೆ ತಪ್ಪೇನು ಎಂಬುದು. [ಸಿದ್ದರಾಮಯ್ಯಗೆ ಪೂಜಾರಿ ಮಂಗಳಾರತಿ]
ಈ ನಡುವೆ, ಯತೀಂದ್ರ ಹೇಳುವುದೇನೆಂದರೆ, ಇಲ್ಲಿ ಅವ್ಯವಹಾರ ನಡೆದಿಲ್ಲ. ಅಂತಿಮ ಹಂತದಲ್ಲಿ ಮ್ಯಾಟ್ರಿಕ್ಸ್ ಮತ್ತು ಎಚ್ಎಲ್ಎಲ್ ಕಂಪನಿಗಳು ಶಾರ್ಟ್ ಲಿಸ್ಟ್ ಆಗಿದ್ದವು. ಆದರೆ, ಎಚ್ಎಲ್ಎಲ್ ಕಂಪನಿ ಡಿಮಾಂಡ್ ಡ್ರಾಫ್ಟ್ ಸಲ್ಲಿಸದಿದ್ದರಿಂದ ಮ್ಯಾಟ್ರಿಕ್ಸ್ ಕಂಪನಿಗೆ ಈ ಪ್ರಾಜೆಕ್ಟ್ ದೊರೆಯಿತು. ಅಲ್ಲದೆ, ಅವ್ಯವಹಾರ ನಡೆದಿದೆ ಎಂಬುದು ಸಾಬೀತಾದರೆ ಸಂಸ್ಥೆಗೇ ರಾಜೀನಾಮೆ ನೀಡುವುದಾಗಿ ಯತೀಂದ್ರ ಹೇಳಿದ್ದಾರೆ.