ಸ್ವಲ್ಪ ತಡೆಯಿರಿ ಮೀನುಗಾರರ, ನೇಕಾರರ, ಸ್ತ್ರೀಶಕ್ತಿ ಸಂಘದ ಸಾಲ ಕೂಡ ಮನ್ನಾ ಆಗಲಿದೆ
ಬೆಂಗಳೂರು, ಜುಲೈ 14: ರೈತರ ಸಾಲವನ್ನು ಈಗಾಗಲೇ ಮನ್ನಾ ಮಾಡಿ ಕುಮಾರಸ್ವಾಮಿ ಅವರು ಮೀನುಗಾರರು, ನೇಕಾರರು ಹಾಗೂ ಸ್ತ್ರೀಶಕ್ತಿ ಸಾಲವನ್ನೂ ಮನ್ನಾ ಮಾಡಲಿದ್ದಾರೆ.
ಹೌದು, ಹೀಗೆ ಹೇಳಿದವರು ಮತ್ಯಾರು ಅಲ್ಲ, ಕುಮಾರಸ್ವಾಮಿ ಅವರ ಮಾರ್ಗದರ್ಶಕ, ಸಮ್ಮಿಶ್ರ ಸರ್ಕಾರದ ಗಾಡ್ ಫಾದರ್ ದೇವೇಗೌಡರು.
ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ
ಜೆಪಿ ಭವನದಲ್ಲಿ ಇಂದು ಆಯೋಜಿತವಾಗಿದ್ದ ಜೆಡಿಎಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಈಗ ರೈತರ ಸಾಲಮನ್ನಾ ಮಾಡಿದ್ದಾರೆ, ಜನತೆ ಸ್ವಲ್ಪ ಸಮಯಾವಕಾಶ ಕೊಟ್ಟಲ್ಲಿ ಮೀನುಗಾರರ, ನೇಕಾರರ ಹಾಗೂ ಸ್ತ್ರೀಶಕ್ತಿ ಸಂಘಗಳ ಸಾಲವನ್ನೂ ಮನ್ನಾ ಮಾಡುತ್ತಾರೆ ಎಂದು ಭರವಸೆ ನೀಡಿದರು.
ಸಾಲಮನ್ನಾ ಮಾಡಲು ಹಣಕಾಸು ಕ್ರೂಢೀಕರಣ ಆಗಬೇಕು, ಅದನ್ನು ಮಾಡಲು ಸಮಯಾವಾಕಾಶ ಕೊಡುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಜೆಡಿಎಸ್ ಪ್ರಣಾಳಿಕೆಯಲ್ಲಿನ ಎಲ್ಲವನ್ನೂ ಈಡೇರಿಸಿದರೆ ಮಾತ್ರವೇ ನನಗೂ ಸಮಾಧಾನವಾಗುವುದು ಎಂದು ಅವರು ಹೇಳಿದ್ದಾರೆ.
ಅಂಕಿ-ಅಂಶ: ಒಟ್ಟು ಎಷ್ಟು ರೈತರ ಎಷ್ಟು ಮೊತ್ತದ ಸಾಲಮನ್ನಾ ಆಗಲಿದೆ
ಕುಮಾರಸ್ವಾಮಿ ಎಂಥಹಾ ಸಂದಿಗ್ಧ ಸ್ಥಿತಿಯಲ್ಲಿ ಬಜೆಟ್ ಮಂಡಿಸಿದ್ದಾರೆ ನನಗೆ ಮಾತ್ರವೇ ಗೊತ್ತು, ಒಂದೆಡೆ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುವುದು ಬೇಡ ಎಂದಿದ್ದರು, ಮತ್ತೊಂದೆಡೆ ಹಳೆಯ ಬಜೆಟ್ ಅನ್ನೇ ಮುಂದುವರೆಸುವ ಒತ್ತಡವೂ ಇತ್ತು ಆದರೂ ಅವರು ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಿದರು ಎಂದು ಅವರು ಹೇಳಿದರು.
ಬಿಜೆಪಿಯವರ ಆಟವನ್ನು ಗಮನಿಸುತ್ತಿದ್ದೇನೆ ಎಂದ ದೇವೇಗೌಡ, ಮುಖ್ಯಮಂತ್ರಿಗಳು ಯಾವ ಕಾರಣಕ್ಕಾಗಿ ಇಂಧನ ಬೆಲೆ ಏರಿಕೆ ಮಾಡಿದರು ಎಂದು ಅರಿತುಕೊಳ್ಳಬೇಕು, ಸುಖಾಸುಮ್ಮನೆ ಅಪಪ್ರಚಾರ ಮಾಡಬಾರದು ಎಂದು ಅವರು ಹೇಳಿದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗಿನಿಂದಲೂ 18 ಗಂಟೆಗಳ ಕಾಲ ಮಾಡುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ನನಗೆ ಆತಂಕವಿದೆ, ಅವರು ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ದೇವೇಗೌಡರು ಮನವಿ ಮಾಡಿದರು.