ಬೆಂಗಳೂರು ಬಿಟ್ಟು ಹೊರಟರೆ ಎಚ್ಡಿಕೆಗೆ ಸಿಎಂ ಸ್ಥಾನ ಹೋಗುತ್ತಾ?
Recommended Video
ಚಿತ್ರದುರ್ಗ, ಜೂ 28: ಬೆಂಗಳೂರು ಬಿಟ್ಟು ಹೊರಟರೆ ಎಲ್ಲಿ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗುತ್ತೋ ಎನ್ನುವ ಭಯಕ್ಕಾಗಿ ಕುಮಾರಸ್ವಾಮಿ ರಾಜಧಾನಿ ಬಿಟ್ಟು ಹೋಗುತ್ತಿಲ್ಲ ಎಂದು ಬಿ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.
ಮೊಳಕಾಲ್ಮೂರು ಬಿಜೆಪಿ ಶಾಸಕ ಶ್ರೀರಾಮುಲು, ಸಮ್ಮಿಶ್ರ ಸರಕಾರ ಮತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿ, ಸಚಿವರಿಗೇ ಎಷ್ಟು ದಿನ ಅಧಿಕಾರ ಇರುತ್ತದೆ ಎನ್ನುವ ಗ್ಯಾರಂಟಿ ಇಲ್ಲದೇ ಇರುವುದರಿಂದ, ಇದ್ದಷ್ಟು ದಿನ ದುಡ್ಡು ಹೊಡೆಯುವ ಕೆಲಸವನ್ನು ಮಾಡುತ್ತಾರೆಂದು ಶ್ರೀರಾಮುಲು ಹೇಳಿದ್ದಾರೆ.
ಕುಮಾರಸ್ವಾಮಿ ವಚನ ಭ್ರಷ್ಟ, ಅವರಿಗೆ ಎರಡು ನಾಲಿಗೆ: ಶ್ರೀರಾಮುಲು
ಚುನಾವಣೆಗೆ ಮುನ್ನ ಆರೋಪ, ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಈಗ ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಲು ಮೈತ್ರಿಕೊಂಡಿದೆಯೇ ವಿನಃ ರಾಜ್ಯದ ಅಭಿವೃದ್ದಿಗೆ ಅಲ್ಲ. ಅಧಿಕಾರಕ್ಕೆ ಬಂದ ಕೂಡಲೇ ಸಾಲಮನ್ನಾ ಮಾಡುತ್ತೇನೆ ಅಂದ ಸಿಎಂ ಮಾತಿಗೆ ತಪ್ಪಿದ್ದಾರೆಂದು ಶ್ರೀರಾಮುಲು ಕಿಡಿಕಾರಿದ್ದಾರೆ.
ಹದಿನೈದು ದಿನ ಕಾಲಾವಕಾಶ ಕೇಳಿದ್ದ ಕುಮಾರಸ್ವಾಮಿ, ಈಗ ಬಜೆಟ್ ನಲ್ಲಿ ಸಾಲಮನ್ನಾ ಮಾಡುತ್ತೇನೆಂದು ಹೇಳುತ್ತಿದ್ದಾರೆ, ಬಜೆಟ್ ನಲ್ಲಿ ಇನ್ನೇನು ಹೇಳುತ್ತಾರೋ ಎಂದು ಲೇವಡಿ ಮಾಡಿರುವ ಶ್ರೀರಾಮುಲು, ಬಜೆಟ್ ನಲ್ಲೂ ಸಾಲಮನ್ನಾ ಮಾಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಹೊಸ ಬಜೆಟ್ ಮಂಡಿಸಬೇಕೋ ಬೇಡವೋ ಎನ್ನುವುದು ಸಮ್ಮಿಶ್ರ ಸರಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ, ಇವರಿಗೆ ಬಡವರ, ರೈತರ ಬಗ್ಗೆ ಕಾಳಜಿಯಿಲ್ಲ. ಈ ಸರಕಾರ ಅದೆಷ್ಟು ದಿನ ಬದುಕಿರುತ್ತೋ ದೇವರೇ ಬಲ್ಲ, ನಮ್ಮ ಜೊತೆ ಕೆಲವೊಂದು ಪಕ್ಷೇತರ ಶಾಸಕರು ಸಂಪರ್ಕದಲ್ಲಿದ್ದಾರೆಂದು ಶ್ರೀರಾಮುಲು ಹೇಳಿದ್ದಾರೆ.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಹೋಬಳಿ ವ್ಯಾಪ್ತಿಗೆ ಸೇರಿದ ನಲಗೇತನಹಟ್ಟಿಯಲ್ಲಿ ಶ್ರೀರಾಮುಲು ಗ್ರಾಮ ವಾಸ್ತವ್ಯ ಹೂಡಿದ್ದರು.