ಮಂಡ್ಯದಲ್ಲಿ ಕುಮಾರಪರ್ವ: ಜನಬೆಂಬಲಕ್ಕೆ ಧನ್ಯರಾದ ಎಚ್ಡಿಕೆ!
Recommended Video

ಮಂಡ್ಯ, ಫೆಬ್ರವರಿ 08: ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯವನ್ನು ಇನ್ನೂ ಉಳಿಸಿಕೊಂಡಿದೆ ಎಂಬುದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹಮ್ಮಿಕೊಂಡಿರುವ ಕುಮಾರಪರ್ವ ವಿಕಾಸ ವಾಹಿನಿ ಯಾತ್ರೆಗೆ ಹರಿದು ಬರುತ್ತಿರುವ ಜನಸ್ತೋಮವೇ ಸಾಕ್ಷಿಯಾಗಿದೆ.
ಮೊದಲಿನಿಂದಲೂ ಹಳೆ ಮೈಸೂರು ವ್ಯಾಪ್ತಿಯ ಜನ ಜೆಡಿಎಸ್ ಅನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಅದರಲ್ಲೂ ಮಂಡ್ಯ ಜಿಲ್ಲೆ ಜೆಡಿಎಸ್ ನ ಭದ್ರಕೋಟೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇಲ್ಲಿನ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಜೆಡಿಎಸ್ ಈ ಹಿಂದೆ ಜೆಡಿಎಸ್ ಗೆಲುವು ಸಾಧಿಸಿತ್ತು. (ಈ ಪೈಕಿ ಇಬ್ಬರು ಶಾಸಕರಾದ ಚೆಲುವರಾಯಸ್ವಾಮಿ ಮತ್ತು ರಮೇಶ್ ಬಂಡಿಸಿದ್ದೇಗೌಡ ಅವರು ಬಂಡಾಯ ಎದ್ದಿದ್ದು ಕಾಂಗ್ರೆಸ್ ನ ಅಂಗಳದಲ್ಲಿದ್ದಾರೆ.) ಆದರೂ ಜೆಡಿಎಸ್ ನ ರಾಷ್ಟ್ರಾಧ್ಯಕ್ಷರಾದ ಹೆಚ್.ಡಿ.ದೇವೇಗೌಡರಾಗಲೀ, ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರ ಸ್ವಾಮಿಯಾಗಲೀ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಪರ್ಯಾಯ ನಾಯಕರನ್ನು ಅವರ ವಿರುದ್ಧ ಸ್ಪರ್ಧೆಗೊಡ್ಡಲು ತಯಾರಿ ನಡೆಸಿದ್ದಾರೆ.

ಹೆಚ್ಡಿಕೆ ಧೈರ್ಯ ತುಂಬಿದ ಜನರು
ಇದೀಗ ಕುಮಾರಸ್ವಾಮಿ ಅವರ ಕುಮಾರಪರ್ವ ವಿಕಾಸ ವಾಹಿನಿ ಯಾತ್ರೆ ಜಿಲ್ಲೆಗೆ ಕಾಲಿಟ್ಟಿದ್ದು, ಜನಸಾಗರ ಹರಿದು ಬರುತ್ತಿರುವುದನ್ನು ನೋಡಿದ ಕುಮಾರಸ್ವಾಮಿ ಅವರಿಗೆ ಒಂದಷ್ಟು ಧೈರ್ಯ ಬಂದಂತಾಗಿದೆ. ಮಂಡ್ಯದ ಜನ ಕೈಹಿಡಿಯುತ್ತಾರೆ ಎಂಬ ನಿರೀಕ್ಷೆ ಮೂಡಿದೆ.
ಈಗಾಗಲೇ ಪಕ್ಷದಿಂದ ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್ ನ ಸಂಭಾವನೀಯ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದರಿಂದಾಗಿ ಅವರ ಪರವಾಗಿಯೇ ಪ್ರಚಾರ ಮಾಡುತ್ತಿರುವುದು ವಿಶೇಷವಾಗಿದೆ.

ರೈತರಿಗೆ ಭರವಸೆ ತುಂಬಿದ ಕುಮಾರಣ್ಣ ಭಾಷಣ
ಮಳವಳ್ಳಿಯ ಹಲಗೂರಿಗೆ ಕುಮಾರಪರ್ವ ವಿಕಾಸ ವಾಹಿನಿ ಯಾತ್ರೆ ಬಂದ ವೇಳೆ ಸೇರಿದ ಜನಸ್ತೋಮ ಕುಮಾರಸ್ವಾಮಿಗೆ ಹುಮ್ಮಸ್ಸನ್ನು ಹೆಚ್ಚಿಸುವಂತೆ ಮಾಡಿದೆ. ಅಷ್ಟೇ ಅಲ್ಲದೆ ಅವರ ಭರವಸೆಯ ಭಾಷಣಗಳು ಈಗಾಗಲೇ ಸಂಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬಿದೆ.
ಚಿತ್ರಗಳು : ಕುಮಾರಸ್ವಾಮಿಯ ವಿಕಾಸ ವಾಹಿನಿ ಯಾತ್ರೆ

ರೈತರ ಸಾಲ ಮನ್ನಾದ ಭರವಸೆ
ರೈತರನ್ನುದ್ದೇಶಿಸಿ ಮಾತನಾಡಿದ ಅವರು ಮಂಡ್ಯ ಜಿಲ್ಲೆಯಲ್ಲಿ ರೈತರು ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೆಲ್ಲ ನೋಡುತ್ತಾ ಕೈಕಟ್ಟಿ ಕುಳಿತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕಿತ್ತೊಗೆಯುವಂತೆ ಕರೆ ನೀಡಿದ್ದಾರೆ.
ನಾನು ಅಧಿಕಾರಕ್ಕೆ ಬಂದ ತಕ್ಷಣವೇ ರಾಜ್ಯದಲ್ಲಿ ಮುಗ್ಧ ಜನರ ಮೇಲೆ ಹಾಕಿರುವ ಸುಳ್ಳು ಕೇಸುಗಳನ್ನು ವಾಪಾಸ್ ತೆಗೆದುಕೊಳ್ಳುವುದಾಗಿ ಹೇಳಿದ ಅವರು, ಪ್ರತಿಯೊಬ್ಬ ರೈತರ ಸಾಲವನ್ನು ಮನ್ನಾ ಮಾಡುತ್ತೇನೆ. ಮತ್ತೆ ಅವರು ಸಾಲ ಮಾಡದಂತೆ ಕೃಷಿ ಯೋಜನೆಯನ್ನು ಜಾರಿಗೆ ತಂದು ಅವರು ದುಡಿದ ಹಣಕ್ಕೆ ತಕ್ಕ ಪ್ರತಿಫಲ ಸಿಗುವಂತೆ ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ.

ಫೆಬ್ರವರಿ 17 ರಂದು ಅಭ್ಯರ್ಥಿಗಳ ಪಟ್ಟಿ
ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಹಿಡಿತದಲ್ಲಿರುವ ಮಳವಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲಿರುವ ಡಾ. ಕೆ.ಅನ್ನಧಾನಿಯನ್ನು ಗೆಲ್ಲಿಸುವಂತೆಯೂ ಇದೇ ವೇಳೆ ಕರೆನೀಡಿದರು. ಬೆಂಗಳೂರಿನಲ್ಲಿ ಫೆಬ್ರವರಿ 17 ರಂದು ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು. ಕುಮಾರಪರ್ವ ವಿಕಾಸ ವಾಹಿನಿ ಯಾತ್ರೆ ವೇಳೆ ಒಂದಷ್ಟು ಮಂದಿ ಜೆಡಿಎಸ್ ಸೇರ್ಪಡೆಯಾಗಿದ್ದು ಕಂಡು ಬಂತು.
ಒಟ್ಟಾರೆ ಕುಮಾರಸ್ವಾಮಿ ಅವರ ಕುಮಾರಪರ್ವ ವಿಕಾಸ ವಾಹಿನಿ ಯಾತ್ರೆ ಮಂಡ್ಯದಲ್ಲಿ ಸಂಚಲನ ಮೂಡಿಸಿದ್ದಂತು ಸತ್ಯ. ಮುಂದೇನಾಗುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications