ಶೇ 15ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ ಕೆಎಸ್ಆರ್ಟಿಸಿ
ಬೆಂಗಳೂರು, ಜುಲೈ 17 : ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸರ್ಕಾರಿ ಬಸ್ ಪ್ರಯಾಣ ದರ ಏರಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. 'ದರ ಹೆಚ್ಚಳ ಮಾಡುವುದಿಲ್ಲ' ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶೇ 15ರಷ್ಟು ಪ್ರಯಾಣ ದರ ಹೆಚ್ಚಳ ಮಾಡಲು ಅನುಮತಿ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 2014ರ ಏಪ್ರಿಲ್ ಬಳಿಕ ದರ ಹೆಚ್ಚಳ ಮಾಡಿಲ್ಲ. ಇದರಿಂದಾಗಿ ಸಂಸ್ಥೆಗಳಿಗೆ ನಷ್ಟ ಉಂಟಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.
ದಾವಣಗೆರೆ : ಕೆಎಸ್ಆರ್ಟಿಸಿ ತಿರುಪತಿ ಪ್ಯಾಕೇಜ್, ವಿವರಗಳು
ಕರ್ನಾಟಕದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು ಡಿ.ಸಿ.ತಮ್ಮಣ್ಣ ಅವರು ಸಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಬಳಿಕ ಅವರು, 'ಸರ್ಕಾರಿ ಬಸ್ ದರ ಏರಿಕೆ ಮಾಡುವುದಿಲ್ಲ. ಕನಿಷ್ಠ ಈ ವರ್ಷವಾದರೂ ಏರಿಕೆ ಮಾಡುವುದನ್ನು ತಡೆಯುತ್ತೇವೆ' ಎಂದು ಹೇಳಿದ್ದಾರೆ.
ಸರ್ಕಾರಿ ಬಸ್ ಪ್ರಯಾಣ ದರ ಹೆಚ್ಚಳವಿಲ್ಲ : ಡಿ.ಸಿ.ತಮ್ಮಣ್ಣ
ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ.ಬಸವರಾಜು ಅವರು, 'ಕೆಎಸ್ಆರ್ಟಿಸಿ ಸೇರಿದಂತೆ ವಿವಿಧ ನಿಗಮಗಳಿಂದ ದರ ಏರಿಕೆಯ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆ. ಸಾರಿಗೆ ಸಚಿವರು ಈ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಳ್ಳಬೇಕು' ಎಂದು ತಿಳಿಸಿದ್ದಾರೆ.
ಶೇ 15ರಷ್ಟು ದರ ಹೆಚ್ಚಳ
ಶೇ 15ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿರುವುದನ್ನು ಕೆಎಸ್ಆರ್ಟಿಸಿ ಸಮರ್ಥಿಸಿಕೊಂಡಿದೆ. ರಸ್ತೆ ಸಾರಿಗೆ ನಿಗಮಗಳು ನಷ್ಟವನ್ನು ಅನುಭವಿಸುತ್ತಿವೆ. ಆದ್ದರಿಂದ, ದರ ಹೆಚ್ಚಳ ಅನಿವಾರ್ಯ ಎಂದು ಹೇಳಿದೆ.
ತೈಲಬೆಲೆಗಳ ಹೆಚ್ಚಳದಿಂದ ಶೇ 40 ರಷ್ಟು ನಷ್ಟ ಉಂಟಾಗುತ್ತಿದೆ. ನಿರ್ವಹಣಾ ವೆಚ್ಚ, ಸಿಬ್ಬಂದಿಗಳ ವೇತನ ಹೆಚ್ಚಳದ ಬಳಿಕ ಸಂಸ್ಥೆಗಳಿಗೆ ಭಾರೀ ನಷ್ಟ ಉಂಟಾಗುತ್ತಿದೆ ಎಂದು ಕೆಎಸ್ಆರ್ಟಿಸಿ ಪ್ರಸ್ತಾವನೆಯಲ್ಲಿ ತಿಳಿಸಿದೆ.
ಬಿಎಂಟಿಸಿಯಿಂದ ಪ್ರಸ್ತಾವನೆ
ಕೆಎಸ್ಆರ್ಟಿಸಿ ಜೊತೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಹ ಸರ್ಕಾರಕ್ಕೆ ಪ್ರತ್ಯೇಕವಾಗಿ ಮನವಿ ಸಲ್ಲಿಸಲಿದ್ದು, ದರ ಹೆಚ್ಚಳಕ್ಕೆ ಅವಕಾಶ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಲಿದೆ.
ಬಿಎಂಟಿಸಿಯ ಎಂ.ಟಿ.ಪೊನ್ನುರಾಜ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಬಿಎಂಟಿಸಿಯೂ ನಷ್ಟದಲ್ಲಿದೆ ಕಳೆದ ವರ್ಷ ಸಂಸ್ಥೆಗೆ 217 ಕೋಟಿ ನಷ್ಟವಾಗಿದೆ. ಸರ್ಕಾರ 100 ಕೋಟಿ ಸಬ್ಸಿಡಿ ನೀಡಲು ಸಿದ್ಧವಿದೆ. ನಾವು ಬೇರೆ-ಬೇರೆ ಮೂಲಗಳಿಂದ ಅನುದಾನ ಸಂಗ್ರಹಿಸಲು ಪ್ರಯತ್ನ ನಡೆಸಿದ್ದೇವೆ' ಎಂದು ಹೇಳಿದ್ದಾರೆ.
ನಷ್ಟಕ್ಕೆ ಕಾರಣವಾದ ತೈಲ ಬೆಲೆ
ತೈಲ ಬೆಲೆ ಹೆಚ್ಚಳದ ಬಳಿಕ ಕೆಎಸ್ಆರ್ಟಿಸಿ ಸೇರಿದಂತೆ ವಿವಿಧ ನಿಗಮಗಳು ನಷ್ಟ ಅನುಭವಿಸುತ್ತಿದ್ದವು. ಸದ್ಯ ಸರ್ಕಾರ ತೈಲ ಬೆಲೆಗಳ ಮೇಲಿನ ಸೆಸ್ ಹೆಚ್ಚಳ ಮಾಡಿದ ಬಳಿಕ ಮತ್ತಷ್ಟು ಹೊರೆ ಉಂಟಾಗಿದೆ.
ಕೆಎಸ್ಆರ್ಟಿಸಿ ಪ್ರತಿದಿನ ಸುಮಾರು 6 ಲಕ್ಷ ಲೀಟರ್ ಡೀಸೆಲ್ ಉಪಯೋಗಿಸುತ್ತಿದೆ. ಸೆಸ್ ಹೆಚ್ಚಳದ ಬಳಿಕ 2 ರಿಂದ 2.5 ಕೋಟಿ ಹೆಚ್ಚಿನ ಹೊರೆಯಾಗಿದೆ. ಬಿಎಂಟಿಸಿ ಪ್ರತಿ ತಿಂಗಳು ಸುಮಾರು 1 ಕೋಟಿ ರೂ.ಗಳನ್ನು ಡೀಸೆಲ್ಗಾಗಿ ಖರ್ಚು ಮಾಡುತ್ತಿದೆ.
ಸಚಿವರು ಮೌನ
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಅಧಿಕಾರವಹಿಸಿಕೊಂಡಾಗ ದರ ಹೆಚ್ಚಳ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ, ಕಳೆದ ವಾರ ಕೆಎಸ್ಆರ್ಟಿಸಿ ಪ್ರಸ್ತಾವನೆ ಸಲ್ಲಿಸಿದ ಬಳಿಕ ಸಚಿವರು ದರ ಹೆಚ್ಚಳದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.