ಕೆಎಸ್ಆರ್ಟಿಸಿ; ಬಸ್ ಊಟ-ಉಪಹಾರಕ್ಕೆ ನಿಲುಗಡೆ, ದೂರು, ದಂಡದ ಮಾಹಿತಿ
ಬೆಂಗಳೂರು, ಜೂನ್ 03: ಕೆಎಸ್ಆರ್ಟಿಸಿ ಬಸ್ಗಳು ದೂರದ ಮಾರ್ಗದಲ್ಲಿ ಸಂಚಾರ ನಡೆಸುವಾಗ ಪ್ರಯಾಣಿಕರಿಗೆ ನೈಸರ್ಗಿಕ ಕರೆ, ಲಘು ವಿಶ್ರಾಂತಿ ಮತ್ತು ಊಟೋಪಚಾರಕ್ಕಾಗಿ ನಿಗದಿತ ಸ್ಥಳದಲ್ಲಿ ನಿಲುಗಡೆ ಮಾಡುತ್ತವೆ. ಬಸ್ ನಿಲುಗಡೆ ಮಾಡಲು ಮಾರ್ಗಸೂಚಿ, ನಿಯಮಗಳಿವೆ. ದೂರು ನೀಡಬಹುದು, ಹೋಟೆಲ್ಗಳಿಗೆ ದಂಡ ಹಾಕಲು ಸಹ ಅವಕಾಶವಿದೆ.
ಈ ಕುರಿತು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶದಲ್ಲಿ ಮಾಹಿತಿ ನೀಡಿದ್ದಾರೆ. ದೂರ ಸಂಚಾರದ ಬಸ್ಗಳು ಮಾರ್ಗಮಧ್ಯೆ 10 ರಿಂದ 15 ನಿಮಿಷಗಳ ಕಾಲ ಲಘು ವಿಶ್ರಾಂತಿ, ನೈಸರ್ಗಿಕ ಕರೆ ಮತ್ತು ಊಟೋಪಚಾರಕ್ಕಾಗಿ, ನಿಲ್ಲಿಸಬೇಕು. ಇದಕ್ಕಾಗಿ ಉತ್ತಮ ಸೌಲಭ್ಯ ಹೊಂದಿರುವ ಫಲಹಾರ ಮಂದಿರಗಳನ್ನು ನಿಗದಿ ಮಾಡಲಾಗಿರುತ್ತದೆ.

ಬಸ್ ನಿಲ್ಲಿಸುವ ಫಲಹಾರ ಮಂದಿರದೊಂದಿಗೆ ವಿಭಾಗೀಯ ಕಛೇರಿ ಒಪ್ಪಂದ ಮಾಡಿಕೊಂಡಿರುತ್ತದೆ. ಒಂದು ವೇಳೆ ಅಲ್ಲಿ ಹೆಚ್ಚು ಹಣ ವಸೂಲಿ ಮಾಡಿದರೆ, ಶೌಚಾಲಯಕ್ಕೆ ಹಣ ಪಡೆದರೆ, ಊಟ-ಉಪಹಾರದ ಗುಣಮಟ್ಟ ಕಳಪೆಯಾಗಿದ್ದರೆ ಒಪ್ಪಂದವನ್ನು ರದ್ದುಗೊಳಿಸಿ, ಬಸ್ ನಿಲುಗಡೆ ನೀಡದಂತೆ ಕ್ರಮ ಕೈಗೊಳ್ಳಬಹುದು, ಅವರಿಗೆ ದಂಡ ಹಾಕಬಹುದು.
ಪ್ರಯಾಣಿಕರು ದೂರು ನೀಡಿ: ಫಲಹಾರ ಮಂದಿರಗಳ ಪರವಾನಗಿಯ ನವೀಕರಣದ ಸಂದರ್ಭದಲ್ಲಿ, ವಿಭಾಗದ ವತಿಯಿಂದ ಪರಿವೀಕ್ಷಣೆ ನಡೆಸಿ, ಫಲಹಾರ ಮಂದಿರದ ಶುಚಿತ್ವ, ಊಟೋಪಚಾರದ ಗುಣಮಟ್ಟ ಮತ್ತು ಇತರೆ ಮೂಲಭೂತ ಸೌಕರ್ಯಗಳು ತೃಪ್ತಿಕರವಿದ್ದಲ್ಲಿ ಮಾತ್ರ ಪರಿವೀಕ್ಷಣಾ ವರದಿಯನ್ನು ಸಲ್ಲಿಸಿ, ಕೇಂದ್ರ ಕಛೇರಿಯಿಂದ ಅನುಮೋದನೆ ಪಡೆದು ನಂತರ ಫಲಹಾರ ಮಂದಿರದ ಮಾಲೀಕರೊಂದಿಗೆ ಕರಾರು ಒಪ್ಪಂದ ನವೀಕರಿಸಬೇಕು.
ಪ್ರತಿ ತಿಂಗಳು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಫಲಹಾರ ಮಂದಿರಗಳನ್ನು ವಿಭಾಗದ ಅಧಿಕಾರಿಗಳಿಂದ ಪರಿವೀಕ್ಷಣೆ ನಿಬಂಧನೆಗಳಿಗನುಗುಣವಾಗಿ ಫಲಹಾರ ಮಂದಿರಗಳಲ್ಲಿನ ವ್ಯವಸ್ಥೆ ಸಮರ್ಪಕವಾಗಿರುವ ಬಗ್ಗೆ ದೃಢೀಕರಿಸಿಕೊಳ್ಳುವುದು.
ಸಾರ್ವಜನಿಕ ಪ್ರಯಾಣಿಕರಿಂದ ಫಲಹಾರ ಮಂದಿರಗಳ ಕುರಿತು ದೂರುಗಳು ಬಂದಲ್ಲಿ ಕೂಡಲೇ ಸ್ಪಂದಿಸಿ, ಪರಿಶೀಲಿಸಿ ಕ್ರಮ ಕೈಗೊಳ್ಳುವುದು ಹಾಗೂ ಫಲಹಾರ ಮಂದಿರದ ಮಾಲೀಕರಿಗೆ ಸೂಕ್ತವಾಗಿ ಎಚ್ಚರಿಸುವುದು. ಪರಿವೀಕ್ಷಣೆ ನಡೆಸುವ ಅಧಿಕಾರಿಗಳು ಫಲಹಾರ ಮಂದಿರದಲ್ಲಿನ ರಿಜಿಸ್ಟರ್ ಅನ್ನು ತಪಾಸಣೆ ನಡೆಸುವುದು. ವಿಭಾಗಗಳ ವತಿಯಿಂದ ತನಿಖಾ ಸಿಬ್ಬಂದಿಗಳನ್ನು ನಿಯೋಜಿಸಿ, ಅನಧಿಕೃತ ಹೋಟೆಲ್/ ಡಾಬಾಗಳಲ್ಲಿ ನಿಲುಗಡೆ ನೀಡುವ ಚಾಲನಾ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದು.
50 ವಾಹನಕ್ಕಿಂತ ಕಡಿಮೆ ನಿಲುಗಡೆ ಹೊಂದಿರುವ ಫಲಹಾರ ಮಂದಿರಗಳನ್ನು ಪ್ರತಿ ತಿಂಗಳಿಗೊಮ್ಮೆ ಹಾಗೂ 50ಕ್ಕಿಂತ ಹೆಚ್ಚಿನ ವಾಹನಗಳನ್ನು ಹೊಂದಿರುವ ಫಲಹಾರ ಮಂದಿರಗಳನ್ನು ಪ್ರತಿ 15 ದಿನಕ್ಕೊಮ್ಮೆ ವಿಭಾಗೀಯ ಸಂಚಾರ ಅಧಿಕಾರಿ ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಜಂಟಿ ಪರಿಶೀಲನೆ ಮಾಡಿ, ನ್ಯೂನ್ಯತೆಗಳು ಕಂಡು ಬಂದಲ್ಲಿ ದಂಡ ವಿಧಿಸುವುದು. ದೂರುಗಳು ಪದೇ-ಪದೇ ಮರುಕಳಿಸಿದಲ್ಲಿ, ಕರಾರನ್ನು ರದ್ದುಗೊಳಿಸಬಹುದು.
ಪರಿವೀಕ್ಷಣೆ ಮಾಡುವ ಅಧಿಕಾರಿಗಳು ಫಲಹಾರ ಮಂದಿರದಲ್ಲಿ ಪ್ರದರ್ಶಿಸಿರುವ ದರಪಟ್ಟಿ, ನಿಗಮದ ವತಿಯಿಂದ ಮಾನ್ಯತೆ ಪಡೆದಿರುವುದಾಗಿ ಪ್ರದರ್ಶಿಸಿರುವ ಫಲಕ ಮತ್ತು ದೂರು ಮತ್ತು ಸಲಹೆಗಳಿಗಾಗಿ ಸಂಪರ್ಕಿಸಲು ಒದಗಿಸಿರುವ ಮಾಹಿತಿ ಫಲಕಗಳ ಛಾಯಾಚಿತ್ರಗಳನ್ನು ತೆಗೆದು ಕೇಂದ್ರ ಕಛೇರಿಗೆ ಕಳುಹಿಸಬೇಕು.
ಫಲಹಾರ ಮಂದಿರವು ಕರಾರು ಒಪ್ಪಂದದ ಸಮಯದಲ್ಲಿ ಸಲ್ಲಿಸಿದ ದರಪಟ್ಟಿಯನ್ನು ಪಾಲಿಸುತ್ತಿದ್ದಾರೆಯೇ? ಎಂಬುದರ ಬಗ್ಗೆ ಪರಿವೀಕ್ಷಣಾ ಅಧಿಕಾರಿಯು ಖಾತರಿಪಡಿಸಿಕೊಳ್ಳುವುದು. ಫಲಹಾರ ಮಂದಿರದ ಮಾಲೀಕರು ತಿಂಡಿ-ತಿನಿಸುಗಳ ದರ ಪರಿಷ್ಕರಿಸುವ ಸಂದರ್ಭದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಸಹಮತಿಯನ್ನು ಪಡೆಯುವುದು ಕಡ್ಡಾಯವಿರುತ್ತದೆ.
ಫಲಹಾರ ಮಂದಿರಗಳ ಪರಿಶೀಲನೆ/ ಪರಿವೀಕ್ಷಣೆ ಮಾಡುವ ನಮೂನೆಯನ್ನು ನೀಡಲಾಗಿದೆ. ಪ್ರತಿ ತಿಂಗಳು 10 ತಾರೀಖಿನೊಳಗೆ ಫಲಹಾರ ಮಂದಿರಗಳ ಪರವಾನಗಿದಾರರು ಪಾವತಿಸುವ ಶುಲ್ಕದ ಮಾಹಿತಿಯನ್ನು ಕೇಂದ್ರ ಕಛೇರಿಗೆ ನೀಡಬೇಕಿದೆ.
ವಿಭಾಗೀಯ ಮಟ್ಟದಲ್ಲಿ ಫಲಹಾರ ಮಂದಿರಗಳನ್ನು ಆಯ್ಕೆಗೊಳಿಸಿದಂತಹ ಸಂದರ್ಭದಲ್ಲಿ ಫಲಹಾರ ಮಂದಿರದ ಸಂಪೂರ್ಣ ವಿವರ ನೀಡಿ ಕೇಂದ್ರ ಕಛೇರಿಯಿಂದ ಅನುಮತಿ ಪಡೆದು ನಂತರವಷ್ಟೇ ಕರಾರು ಒಪ್ಪಂದವನ್ನು ವಿಭಾಗದ ಮಟ್ಟದಲ್ಲಿ ಮಾಡಿಕೊಳ್ಳುವುದು.
ಆಸನ ಕಾಯ್ದಿರಿಸುವ ವ್ಯವಸ್ಥೆಯುಳ್ಳ ವಾಹನಗಳ ಸಂಬಂಧ ವಿತರಿಸಲಾಗುವ ಮುಂಗಡ ಟಿಕೆಟ್ನಲ್ಲಿ ಊಟೋಪಹಾರಕ್ಕಾಗಿ ನಿಲುಗಡೆ ಮಾಡಲಾಗುವ ಫಲಹಾರ ಮಂದಿರದ ಹೆಸರನ್ನು ನಮೂದಿಸುವುದು.












Click it and Unblock the Notifications