ಕೆಎಸ್ಆರ್ಟಿಸಿ ಅಧಿಕಾರಿಗಳನ್ನು ಬೇರೆ ನಿಗಮಗಳಿಗೆ ನಿಯೋಜಿಸುವಂತಿಲ್ಲ
ಬೆಂಗಳೂರು, ಮೇ 29 : ಕೆಎಸ್ಆರ್ಟಿಸಿಯ ಕ್ಲಾಸ್ 1 ಮತ್ತು ಕ್ಲಾಸ್ 2 ಅಧಿಕಾರಿಗಳನ್ನು ಯೋಜನೆ ಮೇರೆಗೆ ಬೇರೆ ಸಾರಿಗೆ ನಿಗಮಗಳಿಗೆ ವರ್ಗಾವಣೆ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕೆ.ಅಬ್ದುಲ್ ಅಜೀಜ್ ಸೇರಿದಂತೆ ಒಟ್ಟು 6 ಜನರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್.ದೇವರಾಜ್ ಅವರಿದ್ದ ನ್ಯಾಯಪೀಠ ಮಾನ್ಯ ಮಾಡಿದೆ. ಬೇರೆ ನಿಗಮಗಳಿಗೆ ವರ್ಗಾವಣೆ ಮಾಡುವುದು ಕಾನೂನು ಬಾಹಿರ ಎಂದು ಆದೇಶದಲ್ಲಿ ಹೇಳಿದೆ.
ಕೆಎಸ್ಆರ್ಟಿಸಿ ನೌಕರರು ಎಂದು ನೇಮಕ ಮಾಡಿಕೊಂಡವರನ್ನು ಉಳಿದ ನಿಗಮಗಳು ಸ್ವಾಯತ್ತ ಮತ್ತು ಸ್ವತಂತ್ರ ಸಂಸ್ಥೆಗಳಿಗೆ ನಿಯೋಜನೆ ಮಾಡುವುದು ರಸ್ತೆ ಸಾರಿಗೆ ನಿಗಮ ಕಾಯ್ದೆ 1950ರ ಅನುಸಾರ ಕಾನೂನು ಬಾಹಿರ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

1997ರಲ್ಲಿ ಕೆಎಸ್ಆರ್ಟಿಸಿಯನ್ನು ವಿಭಜನೆ ಮಾಡಿ ಮೊದಲು ಬಿಎಂಟಿಸಿಯನ್ನು ಸ್ವತಂತ್ರ ಸಂಸ್ಥೆಯಾಗಿ ಮಾಡಲಾಯಿತು. ಬಳಿಕ ವಾಯುವ್ಯ ನಿಗಮ ಹಾಗೂ ಈಶಾನ್ಯ ಸಾರಿಗೆ ನಿಗಮವನ್ನು ಆರಂಭಿಸಲಾಯಿತು.
ಹೊಸ ನಿಗಮಗಳು ಆರಂಭವಾದಾಗ ಕೆಎಸ್ಆರ್ಟಿಸಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಅರ್ಜಿದಾರರನ್ನು ಆಡಳಿತಾತ್ಮಕ ಕಾರಣಗಳ ಮೇರೆಗೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ನಿಯೋಜನೆ ಮೇರೆಗೆ ವರ್ಗಾವಣೆ ಮಾಡಲಾಗಿತ್ತು.
ಕೆಎಸ್ಆರ್ಟಿಸಿಯಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಈಶಾನ್ಯ ಮತ್ತು ವಾಯುವ್ಯ ಸಾರಿಗೆ ನಿಗಮಗಳಿಗೆ ನಿಯೋಜನೆ ಆಧಾರದಲ್ಲಿ ವರ್ಗಾವಣೆ ಮಾಡಿದ್ದ ಆದೇಶದಲ್ಲಿ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಲಾಗಿತ್ತು.
ಕೆಎಸ್ಆರ್ಟಿಸಿ ನೌಕರರನ್ನು ಬೇರೆ ನಿಗಮಗಳಿಗೆ ನಿಯೋಜನೆ ಮೇರೆಗೆ ವರ್ಗಾವಣೆ ಮಾಡಿ ಆಗಸ್ಟ್ 5, 2000ದಲ್ಲಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಈ ಮೂಲಕ ಅರ್ಜಿದಾರರಿಗೆ ಗೆಲುವು ಸಿಕ್ಕಿದೆ.












Click it and Unblock the Notifications