KSRTC ಬಸ್ ಟಿಕೆಟ್ ದರ ಶೇಕಡ 15-20ರಷ್ಟು ಹೆಚ್ಚಳ: ನಿಗಮದ ಅಧ್ಯಕ್ಷರು ಹೇಳೋದೇನು?
KSRTC Bus Ticket Fare: ಈಗಾಗಲೇ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದು, ಇದರ ನಡುವೆಯೇ ಇತ್ತೀಚೆಗಷ್ಟೇ ಹಾಲು, ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡಿದ್ದರು. ಇದಕ್ಕೆ ವ್ಯಾಪಕ ಆಕ್ರೋಶಗಳು ಕೂಡ ವ್ಯಕ್ತವಾಗಿದ್ದವು. ಇದೀಗ ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲು ನಿಗಮ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ ಹಾಗಾದರೆ ಎಷ್ಟು ಹೆಚ್ಚಳ ಮಾಡಲು ಪ್ರಸ್ತಾವನೆ ಸಲ್ಲಿಸಿದೆ ಎಂದು ಇಲ್ಲಿ ತಿಳಿಯಿರಿ.
ಶಕ್ತಿ ಯೋಜನಡಯಡಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಈ ಹಣವನ್ನು ಬರಿಸಲು ಇದೀಗ ಸರ್ಕಾರ ಕೆಎಸ್ಆರ್ಟಿಸಿ ಟಿಕೆಟ್ ದರವನ್ನು ಏರಿಕೆ ಮಾಡುತ್ತಿದೆ ಎನ್ನುವ ಆಕ್ರೋಶಗಳು ಭಗಿಲೆದ್ದಿವೆ. ಇನ್ನು ನಿಗಮದ ಅಧ್ಯಕ್ಷರು ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.

"ಶೀಘ್ರದಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳ ಟಿಕೆಟ್ ದರ ಹೆಚ್ಚಾಗುವ ಸಾಧ್ಯತೆಯಿದೆ. ಶೇಕಡ 15ರಿಂದ 20ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ," ಎಂದು ತುಮಕೂರಿನಲ್ಲಿ ಗುಬ್ಬಿ ಕಾಂಗ್ರೆಸ್ ಶಾಸಕ, ಕೆಎಸ್ಆರ್ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಬೋರ್ಡ್ ಮೀಟಿಂಗ್ ಮಾಡಿ, ಟಿಕೆಟ್ ದರ ಹೆಚ್ಚಳ ಮಾಡುವ ವಿಚಾರದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಈ ಹಿಂದೆ 2019ರಲ್ಲಿ ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಆಗಿತ್ತು. ಇಲ್ಲಿವರೆಗೂ ಟಿಕಟ್ ದರ ಹೆಚ್ಚಳ ಮಾಡದೆ 5 ವರ್ಷವಾಗಿದೆ. ತೈಲ ಬೆಲೆ ಏರಿಕೆ ಆಗಿರುವುದರಿಂದ ದರ ಏರಿಕೆ ಅನಿವಾರ್ಯವಾಗಿದೆ. ನೌಕರರಿಗೆ ಸಂಬಳ ಹೆಚ್ಚಳ ಮತ್ತು ಸೌಲಭ್ಯಗಳನ್ನು ಕೊಡಬೇಕೆಂದರೆ ದರ ಹೆಚ್ಚಳ ಆಗಲೇಬೇಕು ಎಂದಿದ್ದಾರೆ.
ಕೆಎಸ್ಆರ್ಟಿಸಿ ನೌಕರರ ವೇತನ ಪರಿಷ್ಕರಣೆ 2020ರಲ್ಲಿ ಮಾಡಬೇಕಿತ್ತು. ಇಲ್ಲಿವರೆಗೂ ಮಾಡಿಲ್ಲ. ಈ ಬಾರಿ 2024ರಲ್ಲಿ ವೇತನ ಪರಿಷ್ಕರಣೆ ಮಾಡುತ್ತೇವೆ. ಆದ್ದರಿಂದ ಟಿಕೆಟ್ ದರ ಹೆಚ್ಚಳ ಆಗುತ್ತದೆ. ಕಾಲಕಾಲಕ್ಕೆ ಹೆಚ್ಚಳ ಮಾಡಿದರೆ, ಹೀಗೆ ಆಗುತ್ತಿರಲಿಲ್ಲ. ಕಳೆದ ತ್ರೈ ಮಾಸಿಕದಲ್ಲಿ ಕೆಎಸ್ಆರ್ಟಿಸಿದೆ 295 ಕೋಟಿ ರೂಪಾಯಿ ನಷ್ಟವಾಗಿದೆ. 40 ಹೊಸ ವೋಲ್ವೋ ಬಸ್ಗಳಿಗೆ ಪ್ರಸ್ಥಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈಗಾಗಲೆ 600 ಸಾಮಾನ್ಯ ಬಸ್ಗಳನ್ನು ಕೊಂಡುಕೊಳ್ಳಲಾಗಿದ್ದು, ಶೇಕಡ 15-20ರಷ್ಟು ಟಿಕೆಟ್ ದರವನ್ನಯ ಹೆಚ್ಚಿಸಲು ಪ್ರಸ್ತವನೆ ಸಲ್ಲಿಸಲಾಗಿದೆ ಎಂದರು.
ಇನ್ನು ಉಳಿದ ವಿಚಾರ ಸಿಎಂ ಆಲೋಚನೆಗೆ ಬಿಟ್ಟಿದ್ದು. ದರ ಹೆಚ್ಚಳ ಮಾಡಿರುವುದರಿಂದ ಪುರುಷ ಪ್ರಯಾಣಿಕರಿಗೆ ಹೊರೆ ಆಗುತ್ತದೆ ಎನ್ನುವ ಪ್ರಶ್ನೆಯೇ ಇಲ್ಲ. ಶಕ್ತಿ ಯೋಜನೆಯಲ್ಲಿನ ಮಹಿಳಾ ಪ್ರಯಾಣಿಕರ ಟಿಕೆಟ್ ದರ ಹೆಚ್ಚಾಗುತ್ತದೆ. ಸರ್ಕಾರ ಅದನ್ನು ತುಂಬಿಕೊಡುತ್ತದೆ. ಕೆಎಸ್ಆರ್ಟಿಸಿ ಸಂಸ್ಥೆ ಉಳಿಯಬೇಕಾದರೆ ದರ ಹೆಚ್ಚಳ ಅನಿವಾರ್ಯ ಎಂದು ತಿಳಿಸಿದರು.
ಮತ್ತೊಂದೆಡೆ ಶಕ್ತಿ ಯೋಜನೆಯಿಂದ ನಿಗಮ ನಷ್ಟದಲ್ಲಿದೆ. ಡೀಸೆಲ್ ಹಾಗೂ ಬಸ್ನ ಬಿಡಿ ಭಾಗಗಳ ಬೆಲೆ ಕೂಡ ಏರಿಕೆಯಾಗಿದೆ. ಕಳೆದ 10 ವರ್ಷಗಳಿಂದ ಬಸ್ ಟಿಕೆಟ್ ದರ ಏರಿಕೆ ಮಾಡಿಲ್ಲ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKSRTC) ಆಸ್ತಿ ಪರಭಾರೆ ಮಾಡುತ್ತೇವೆ. ಸಂಸ್ಥೆಗೆ ಸೇರಿದ ಹಳೇ ಕಟ್ಟಡಗಳನ್ನು ನವೀಕರಿಸಿ ಬಾಡಿಗೆ ಕೊಡುತ್ತೇವೆ. ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡುವ ಚಿಂತನೆಯಲ್ಲಿದ್ದೇವೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ರಾಜು ಕಾಗೆ ಹೇಳಿದ್ದಾರೆ.
ಒಟ್ಟಿನಲ್ಲಿ ಇವರ ಹೇಳಿಕೆಯನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.












Click it and Unblock the Notifications