ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ
ಬೆಂಗಳೂರು, ಜೂನ್ 25: ಕೊರೊನಾ ಸೋಂಕು ಹೆಚ್ಚಳದಿಂದ ರಾಜ್ಯದಲ್ಲಿ ಸಾರಿಗೆ ಸಂಚಾರವನ್ನು ಬಂದ್ ಮಾಡಲಾಗಿತ್ತು. ಸೋಂಕು ಕಡಿಮೆಯಾದ ಕಾರಣ ಹಂತಹಂತವಾಗಿ ಅನ್ಲಾಕ್ ಮಾಡಿದಾಗ ಕೆಲವು ಜಿಲ್ಲೆಗಳಲ್ಲಿ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.
ಆದರೂ, ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಿದ್ದ ಕಾರಣ ಬಸ್ ಓಡಿಸುವಂತಿರಲಿಲ್ಲ. ಶನಿವಾರ (ಜೂ.26)ದಿಂದ ವಾರಾಂತ್ಯ ವೇಳೆಯೂ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಓಡಾಡಲಿದ್ದು, ಇದರಿಂದ ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.
ಈಗಾಗಲೇ ದಿನದ 24 ಗಂಟೆಯೂ ಕೆಎಸ್ಆರ್ಟಿಸಿ ಬಸ್ ಕಾರ್ಯಚರಣೆ ನಡೆಸುತ್ತಿದ್ದು, ಬೆಳಿಗ್ಗೆ 6ರಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಬಿಎಂಟಿಸಿ ಬಸ್ ಕಾರ್ಯಚರಣೆ ಇತ್ತು. ಈಗ ಶನಿವಾರದಿಂದಲೇ ಎಲ್ಲ ಸಾರಿಗೆ ಬಸ್ಗಳ ಸಂಚಾರ ಇರಲಿದೆ.

ಈ ಕುರಿತು ಕೆಎಸ್ಆರ್ಟಿಸಿ ಟ್ವಿಟ್ಟರ್ನಲ್ಲಿ ತಿಳಿಸಿದ್ದು, "ಶನಿವಾರ ಮತ್ತು ಭಾನುವಾರ ವಾರಾಂತ್ಯ ಕರ್ಫ್ಯೂ ಇದ್ದಾಗ್ಯೂ ಸಹ ಕೆಎಸ್ಆರ್ಟಿಸಿ ಬಸ್ಸುಗಳ ಕಾರ್ಯಾಚರಣೆ ಇರಲಿದೆ. ಕರ್ಫ್ಯೂ ಸಮಯದಲ್ಲಿ ಬಹಳಷ್ಟು ಚಟುವಟಿಕೆಗಳು ನಿಷೇಧಿಸಿರುವುದರಿಂದ ಅವಶ್ಯಕತೆಗೆ ತಕ್ಕಂತೆ ಮಾತ್ರ ಬಸ್ಗಳು ಸಂಚರಿಸಲಿವೆ,'' ಎಂದು ಪ್ರಕಟಿಸಿದೆ.
ಅದೇ ರೀತಿ ವಾರಾಂತ್ಯದಲ್ಲಿ ಬಸ್ ಸಂಚಾರ ಇರುವುದಿಲ್ಲ ಎಂದಿದ್ದ ಬಿಎಂಟಿಸಿ, "ಪ್ರಯಾಣಿಕರ ಅನುಕೂಲಕ್ಕಾಗಿ ಶನಿವಾರ ಮತ್ತು ಭಾನುವಾರ ಬಸ್ ಕಾರ್ಯಚರಣೆ ಇರಲಿದೆ,'' ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ್ ಹೇಳಿದ್ದಾರೆ.
"ಈಗಾಗಲೇ ವಾರದ 5 ದಿನಗಳಲ್ಲಿ 4 ಸಾವಿರ ಬಸ್ ಕಾರ್ಯಚರಣೆ ಮಾಡಲಾಗುತ್ತಿತ್ತು. ಅದರಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಬಸ್ ಓಡಾಟವಿದೆ. ವಾರಾಂತ್ಯ ಕರ್ಫ್ಯೂ ಇರುವಾಗ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಎಲ್ಲವೂ ಕ್ಲೋಸ್ ಆಗಿರುತ್ತದೆ. ಈ ಹಿನ್ನೆಲೆ ನಾಳೆ ಬಿಎಂಟಿಸಿ ಬಸ್ಗಳ ಕಾರ್ಯಚರಣೆ ಕಡಿಮೆ ಇರಲಿದೆ,'' ಎಂದರು.

"ನಾಳೆ ಬೆಂಗಳೂರಿನಲ್ಲಿ 1200 ಬಸ್ಗಳನ್ನು ರಸ್ತೆಗಿಳಿಸಲು ತೀರ್ಮಾನಿಸಲಾಗಿದೆ, ಬಿಎಂಟಿಸಿ ಕಡೆಯಿಂದ ಪ್ರಯಾಣಿಕರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಜನ ಕಂಪನಿ, ಆಫೀಸ್ ಕೆಲಸದ ಮೇಲೆ ಓಡಾಟ ಮಾಡಬಹುದು, ಆದ್ದರಿಂದ ನಾವು ನಿರ್ಬಂಧ ಹೇರಲು ಸಾಧ್ಯವಿಲ್ಲ. ಜನ ಅವರ ಅಗತ್ಯತೆ ಮೇರೆಗೆ ಓಡಾಟ ನಡೆಸಬೇಕು,'' ಎಂದು ರಾಜೇಶ್ ಹೇಳಿದರು.
"ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಿಎಂಟಿಸಿಗೆ ಗುರುವಾರ 1 ಕೋಟಿ 7 ಲಕ್ಷ ಆದಾಯ ಬಂದಿದ್ದು, 9 ಲಕ್ಷ 31 ಸಾವಿರ ಪ್ರಯಾಣಿಕರು ಸಂಚಾರ ಮಾಡಿದ್ದಾರೆ,'' ಎಂದು ಮಾಹಿತಿ ನೀಡಿದರು.












Click it and Unblock the Notifications