ಕ್ಷೀರಭಾಗ್ಯ ಯೋಜನೆ ಐದು ದಿನಗಳಿಗೆ ವಿಸ್ತರಣೆ
ಬೆಂಗಳೂರು, ಆಗಸ್ಟ್ 4 : ಕ್ಷೀರಭಾಗ್ಯ ಯೋಜನೆಯನ್ನು ವಾರದ ಮೂರು ದಿನದ ಬದಲು 5 ದಿನಗಳಿಗೆ ವಿಸ್ತರಣೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಈ ಯೋಜನೆಯಡಿ ಅಂಗನವಾಡಿಯಿಂದ ಹತ್ತನೇ ತರಗತಿ ವರೆಗಿನ ಸುಮಾರು 1 ಕೋಟಿಗೂ ಹೆಚ್ಚು ಮಕ್ಕಳಿಗೆ ಹಾಲು ನೀಡಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್, ಪಶು ಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ, ಕೆಎಂಎಫ್ ಅಧ್ಯಕ್ಷ ಪಿ. ನಾಗರಾಜು ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. [ಕ್ಷೀರಭಾಗ್ಯ ಯೋಜನೆ ವಿಸ್ತರಣೆ?]

ಪ್ರಸ್ತುತ ವಾರದಲ್ಲಿ ಮೂರು ದಿನ ಶಾಲಾ ಮಕ್ಕಳಿಗೆ ಹಾಲನ್ನು ನೀಡಲಾಗುತ್ತಿದೆ. ಸೋಮವಾರ, ಮಂಗಳವಾರ ಮತ್ತು ಶುಕ್ರವಾರ ಹಾಲನ್ನು ನೀಡಲಾಗುತ್ತಿದ್ದು, ಈ ಯೋಜನೆಯನ್ನು ಐದು ದಿನಗಳಿಗೆ ವಿಸ್ತರಣೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಈ ಕುರಿತು ಅಧಿಕೃತ ಆದೇಶ ಪ್ರಕಟವಾಗುವ ಸಾಧ್ಯತೆ ಇದೆ. [ಮೊಸರಿನ ದರ 2 ರೂ. ಏರಿಕೆ ಮಾಡಿದ ಕೆಎಂಎಫ್]
7 ಲಕ್ಷ ಲೀಟರ್ ಹಾಲು : ಕ್ಷೀರಭಾಗ್ಯ ಯೋಜನೆಯಡಿ ಅಂಗನವಾಡಿಯಿಂದ 10ನೇ ತರಗತಿ ವರೆಗಿನ 1 ಕೋಟಿಗೂ ಹೆಚ್ಚು ಮಕ್ಕಳಿಗೆ ಹಾಲು ನೀಡಲಾಗುತ್ತಿದೆ. ಸದ್ಯ, ಪ್ರತಿದಿನ 7 ಲಕ್ಷ ಲೀಟರ್ ಹಾಲನ್ನು ಈ ಯೋಜನೆಗಾಗಿ ಬಳಸಲಾಗುತ್ತಿದೆ. ಯೋಜನೆ 5 ದಿನಗಳಿಗೆ ವಿಸ್ತರಣೆಯಾದರೆ. 10 ಲಕ್ಷ ಲೀಟರ್ ಹಾಲು ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

ಹಾಲಿನ ಪುಡಿಗೆ ಬೇಡಿಕೆ : ಪ್ರಸ್ತುತ 20 ಸಾವಿರ ಮೆಟ್ರಿಕ್ ಟನ್ ಹಾಲಿನ ಪುಡಿ ದಾಸ್ತಾನಾಗಿದೆ. ತೆಲಂಗಾಣದಿಂದ ಒಂದು ಲಕ್ಷ ಲೀಟರ್ ಹಾಲಿಗೆ ಬೇಡಿಕೆ ಬಂದಿದೆ ಹಾಲಿನ ಪುಡಿ ತಯಾರಿಕೆ ಘಟಕಗಳ ಸ್ಥಾಪನೆಗೆ ಅನುಮತಿ ನೀಡುವಂತೆಯೂ ಸಭೆಯಲ್ಲಿ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.












Click it and Unblock the Notifications