ಸಿಎಂ ಯಡಿಯೂರಪ್ಪ- ಸಚಿವ ಈಶ್ವರಪ್ಪ ಮಧ್ಯೆ ಮತ್ತೆ ಶುರುವಾಯ್ತಾ ಮುಸುಕಿನ ಗುದ್ದಾಟ?
ಬೆಂಗಳೂರು, ಡಿ. 08: ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಈಶ್ವರಪ್ಪ ಮಧ್ಯೆ ಮತ್ತೆ ಮುಸುಕಿನ ಗುದ್ದಾಟ ಶುರುವಾಗಿದೆಯಾ? ಹೌದು ಎನ್ನುತ್ತಿವೆ ಇತ್ತೀಚಿಗೆ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು. ಅದಕ್ಕೆ ಕಾರಣವಾಗಿರುವುದು ಸಚಿವ ಈಶ್ವರಪ್ಪ ಅವರು ಸಾಧ್ಯವಾದಷ್ಟು ಸಿಎಂ ಯಡಿಯೂರಪ್ಪ ಅವರ ಭೇಟಿಯನ್ನು ತಪ್ಪಿಸಿಕೊಳ್ಳುತ್ತಿರುವುದು.
ಒಂದು ಕಾಲದ ಆತ್ಮೀಯ ಗೆಳೆಯರು. ಕರ್ನಾಟಕದಲ್ಲಿ ಬಿಜೆಪಿಯನ್ನು ಜೊತೆಯಾಗಿ ಕಟ್ಟಿ ಬೆಳೆಸಿದವರು ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರು. ಆದರೆ ಇತ್ತೀಚೆಗೆ ಸಿಎಂ ಯಡಿಯೂರಪ್ಪ ಅವರ ಜೊತೆಗಿನ ಮುಖಾಮುಖಿ ಭೇಟಿಯನ್ನು ಸಚಿವ ಈಶ್ವರಪ್ಪ ಅವರು ಮತ್ತೆ ತಪ್ಪಿಸಿಕೊಳ್ಳುತ್ತಿದ್ದಾರೆ. ಹಿಂದೆ 2011ರಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ಯಡಿಯೂರಪ್ಪ ಅವರು 2012ರಲ್ಲಿ ಸುದ್ದಿಗೋಷ್ಠಿ ನಡೆಸಿ ಈಶ್ವರಪ್ಪ ಅವರ ಮೇಲೆ ಬಹಿರಂಗ ವಾಗ್ದಾಳಿ ನಡೆಸಿದ್ದರು. ತಮ್ಮ ಬಂಧನಕ್ಕೆ ಕೆ.ಎಸ್. ಈಶ್ವರಪ್ಪ ಅವರೆ ಕಾರಣ ಎಂದು ಆಗ ರೇಸ್ಕೋರ್ಸ್ ರಸ್ತೆಯ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಮೇಲೆ ಹರಿಹಾಯ್ದಿದ್ದರು. ಅದಾದ ಬಳಿಕ ಯಡಿಯೂರಪ್ಪ ಬಿಜೆಪಿ ತೊರೆದಿದ್ದರು.
ಈಗ ಮತ್ತೆ ಸಚಿವ ಈಶ್ವರಪ್ಪ ಅವರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡದೆ ಇರುವುದರ ಹಿಂದೆ ಬಹುದೊಡ್ಡ ಕಾರಣವಿದೆ ಎನ್ನಲಾಗುತ್ತಿದೆ. ಅದು ಶಿಕಾರಿಪುರ ವಿಧಾನಸಭಾ ಕ್ಷೇತ್ರ!
ಶಿಕಾರಿಪುರದಲ್ಲಿ ಶಕ್ತಿ ಪ್ರದರ್ಶನ
ಕುರುಬ ಸಮುದಾಯದ ಎಸ್.ಟಿ. ಮೀಸಲಾತಿ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಕ್ಷೇತ್ರ ಶಿಕಾರಿಪುರದಲ್ಲಿ ನಿನ್ನೆ (ಡಿ. 07) ಕುರುಬ ಎಸ್.ಟಿ. ಮೀಸಲಾತಿ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಚಿವ ಕೆ.ಎಸ್. ಈಶ್ವರಪ್ಪ ತಮ್ಮ ನೇತೃತ್ವದಲ್ಲಿ ಕುರುಬರ ಶಕ್ತಿ ಪ್ರದರ್ಶನ ಮಾಡಿದರು.
ಸಮಾವೇಶಕ್ಕೆ
ತೆರಳುವ
ಮುನ್ನ
ವಿಧಾನಸೌಧಕ್ಕೆ
ಬಂದರೂ,
ಕಲಾಪದಲ್ಲಿ
ಭಾಗವಹಿಸದೆ
ಶಿಕಾರಿಪುರಕ್ಕೆ
ತೆರಳಿದ್ದರು.
ಸಂಜೆ
ಸಚಿವ
ಸಂಪುಟ
ಸಭೆ
ನಿಗದಿಯಾಗಿದ್ದರೂ
ಶಿಕಾರಿಪುರದ
ಕುರುಬ
ಎಸ್ಟಿ
ಹೋರಾಟ
ಸಮಾವೇಶದ
ಹಿನ್ನೆಲೆಯಲ್ಲಿ
ಈಶ್ವರಪ್ಪ
ಅವರು
ಸಚಿವ
ಸಂಪುಟ
ಸಭೆಗೆ
ಗೈರಾದರು.
ಸಂಪುಟ ಸಭೆಗಳಿಗೆ ಈಶ್ವರಪ್ಪ ಗೈರು
ರಾಜ್ಯ ಸಚಿವ ಸಂಪುಟ ಸಭೆಗೆ ಸಚಿವ ಈಶ್ವರಪ್ಪ ಅವರು ಗೈರು ಹಾಜರಾಗಿರುವುದು ಕೇವಲ ನಿನ್ನೆ ಮಾತ್ರವಲ್ಲ. ಅದರ ಹಿಂದಿನ ಸಂಪುಟ ಸಭೆಗೂ ಈಶ್ವರಪ್ಪ ಅವರು ಗೈರು ಹಾಜರಾಗಿದ್ದರು. ಕಳೆದ ನವೆಂಬರ್ 27ರಂದು ಈಶ್ವರಪ್ಪ ಅವರು ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆ ಪ್ರಚಾರದಲ್ಲಿ ಭಾಗವಹಿಸುವ ನೆಪದಲ್ಲಿ ಸಂಪುಟ ಸಭೆಯಲ್ಲಿ ಭಾಗವಹಿಸಿರಲಿಲ್ಲ. ನಿರಂತರವಾಗಿ ಎರಡು ಸಂಪುಟ ಸಭೆಗಳಿಗೆ ಸಚಿವ ಈಶ್ವರಪ್ಪ ಅವರು ಗೈರಾಗುವ ಮೂಲಕ ಇದೀಗ ಕುತೂಹಲ ಹುಟ್ಟಿಸಿದ್ದಾರೆ.
ಸಿಎಂ ಭೇಟಿ ಸಂದರ್ಭ ಗೈರು
ಇಷ್ಟೇ ಅಲ್ಲ. ಇತ್ತೀಚೆಗೆ ಎಸ್.ಟಿ. ಮೀಸಲಾತಿ ಹೋರಾಟ ಸಮಿತಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಆ ಸಂದರ್ಭಧಲ್ಲಿಯೂ ಕುರುಬ ಎಸ್ಟಿ ಹೋರಾಟದ ನೇತೃತ್ವ ವಹಿಸಿಕೊಂಡಿರುವ ಈಶ್ವರಪ್ಪ ಗೈರಾಗಿದ್ದರು. ಸಿಎಂ ಯಡಿಯೂರಪ್ಪ ಅವರನ್ನು ಕುರುಬರ ಎಸ್.ಟಿ. ಹೋರಾಟ ಸಮಿತಿ ನಿಯೋಗ ಭೇಟಿ ಮಾಡಿದಾಗ ಈಶ್ವರಪ್ಪ ಅವರು ನಿಯೋಗದಲ್ಲಿ ಇರಲಿಲ್ಲ. ಅದಾದ ಬಳಿಕ ಶಿವಮೊಗ್ಗದಲ್ಲಿ ನಡೆದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಎರಡು ಕಾರ್ಯಕ್ರಮಗಳಲ್ಲಿ ಕೂಡಾ ಸಚಿವ ಈಶ್ವರಪ್ಪ ಅವರು ಭಾಗವಹಿಸಿಲ್ಲ.
Recommended Video
ನಾಯಕತ್ವ ಬದಲಾವಣೆ ಹಿನ್ನೆಲೆಯಲ್ಲಿ?
ಬಿಜೆಪಿ ನಾಯಕತ್ವ ಬದಲಾವಣೆ ಮಾತುಗಳು ಬಿಜೆಪಿ ವಲಯದಲ್ಲಿಯೇ ಕೇಳಿ ಬರುತ್ತಿವೆ. ಜೊತೆಗೆ ಬಿಜೆಪಿ ಹೈಕಮಾಂಡ್ ಕೂಡ ನಾಯಕತ್ವ ಬದಲಾವಣೆ ಚಿಂತನೆ ನಡೆಸಿದೆ ಎಂಬ ಮಾತುಗಳೂ ಕೇಳಿ ಬಂದಿವೆ. ನಾಯಕತ್ವ ಬದಲಾವಣೆ ಆದಲ್ಲಿ ಶಿಕಾರಿಪುರ ಕ್ಷೇತ್ರ ಖಾಲಿಯಾಗಲಿದೆ. ಹೀಗಾಗಿ ಅಲ್ಲಿ ತಮ್ಮ ಪುತ್ರ ಕಾಂತೇಶ್ ಅವರನ್ನು ಚುನಾವಣೆಗೆ ಇಳಿಸುವುದು ಈಶ್ವರಪ್ಪ ಅವರ ಉದ್ದೇಶ ಎನ್ನಲಾಗಿದೆ. ಈ ಬಗ್ಗೆ ಮಾತುಕತೆ ನಡೆದು ಇಬ್ಬರೂ ನಾಯಕರಲ್ಲಿ ಮುಸುಕಿನ ಗುದ್ದಾಟ ನಡೆದಿದೆಯಾ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬಂದಿವೆ.
ಒಟ್ಟಾರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರೇ ಈ ಬೆಳವಣಿಗೆ ಕುರಿತು ಸ್ಪಷ್ಟನೆ ಕೊಟ್ಟು, ಕಾರ್ಯಕರ್ತರಲ್ಲಿನ ಗೊಂದಲ ಪರಿಹರಿಸಬೇಕಿದೆ.