Karnataka Assembly Election 2023 : ಮತಕ್ಕಾಗಿ ಆಮೀಷ ಒಡ್ಡುವ ವಿಡಿಯೋ ಕಳಿಸಿ ಹಣ ಗೆಲ್ಲಿ: KRS
ಮುಂಬರುವ ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಆಮಿಷ ಒಡ್ಡುತ್ತಿರುವ ವಿಡಿಯೋ ತೆಗೆದು ನಮಗೆ ಕಳುಹಿಸಿದರೆ ನಗದು ಬಹುಮಾನ ನೀಡುವುದಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (KRS)ವು ಘೋಷಣೆ ಮಾಡಿದೆ.
ಬೆಂಗಳೂರು, ಜನವರಿ 30: ಮುಂಬರುವ ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಆಮಿಷ ಒಡ್ಡುತ್ತಿರುವ ವಿಡಿಯೋ ತೆಗೆದು ನಮಗೆ ಕಳುಹಿಸಿದರೆ ನಗದು ಬಹುಮಾನ ನೀಡುವುದಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (KRS)ವು ಘೋಷಣೆ ಮಾಡಿದೆ.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ 2023ಕ್ಕೆ ಕೆಲವೇ ವಾರಗಳು ಬಾಕಿ ಇವೆ. ಈಗಾಗಲೇ ಹಲವು ರಾಜಕೀಯ ಪಕ್ಷಗಳು ಪ್ರಚಾರ ಆರಂಭಿಸಿವೆ. ಅನೇಕ ಜನಪ್ರತಿನಿಧಿಗಳು ಮತದಾರರನ್ನು ಓಲೈಸಲು ಕುಕ್ಕರ್, ಹೊಲಿಗೆ ಮಷಿನ್, ಬಟ್ಟೆ, ಹಣ, ದೈನಂದಿನ ಬಳಕೆಯ ವಸ್ತುಗಳನ್ನು ನೀಡುತ್ತಿರುವುದು ಕಂಡು ಬಂದಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮತದಾರರಿಗೆ ಹಣದ ಆಫರ್ ನೀಡಲಾಗಿದೆ.
ತ್ರಿಪುರಾ ಚುನಾವಣೆ: ಟಿಎಂಸಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (KRS)ವು ಜನವರಿ 27ರಿಂದ ಫೆಬ್ರುವರಿ 10ರವರೆಗೆ 'ನ್ಯಾಯಸಮ್ಮತ ಚುನಾವಣೆಗಾಗಿ KRS ಅಭಿಯಾನ' ಆರಂಭಿಸಿದೆ. ಇದರ ಮಧ್ಯೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕು. ಅದಕ್ಕಾಗಿ ಆಮಿಷ ಒಡ್ಡಬಾರದು. ಒಂದು ವೇಳೆ ಆಮಿಷ, ಒಲೈಕೆ ಮಾಡಿದಲ್ಲಿ ಅಂತಹ ವಿಡಿಯೋಗಳನ್ನು ತೆಗೆದು 88617 75862ಗೆ ಕಳುಹಿಸಿ 5000/- ರೂಪಾಯಿ ಪಡೆಯಿರಿ ಎಂದು ಆಫರ್ ನೀಡಿದೆ. ಈ ವಿಷಯ ಇದೀಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ವಿಚಾರದಲ್ಲಿ ಮತದಾರರು ಯಾವ ಕಾರಣಕ್ಕೂ ಭಯ ಪಡಬಾರದು. ವಿಡಿಯೋ ಕಳುಹಿಸುವ ಜೊತೆಗೆ ಆ ವಸ್ತು ಕೊಟ್ಟವರನ್ನು ಪ್ರಶ್ನಿಸಬೇಕು. ಅದನ್ನು ತಿರಸ್ಕರಿಸುವ, ಭ್ರಷ್ಟ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡ ವಿಡಿಯೋವನ್ನು ಕೆಎಸ್ಆರ್ ಪಕ್ಷದ ತಿಳಿಸಲಾದ ಸಂಖ್ಯೆಗೆ ರವಾನಿಸಬೇಕು. ನಿಮ್ಮ ಬೆಂಬಲಕ್ಕೆ ಪಕ್ಷ ನಿಲ್ಲಲಿದೆ ಎಂದು ಕೆಎಸ್ಆರ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ತಿಳಿಸಿದ್ದಾರೆ.
ಅಭಿಯಾನ ಎಲ್ಲೆಲ್ಲಿ ನಡೆಯಲಿದೆ
2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 'ನ್ಯಾಯಸಮ್ಮತ ಚುನಾವಣೆಗಾಗಿ KRS ಅಭಿಯಾನ' ಹಮ್ಮಿಕೊಂಡಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು (KRS) ಬೆಂಗಳೂರು ನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ಹಾಸನ, ಮಂಡ್ಯ, ಮೈಸೂರು, ಬೀದರ್, ಕಲಬುರಗಿ, ಬಾಗಲಕೋಟೆ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಅಭಿಯಾನ ಈಗಾಗಲೇ ಆರಂಭಿಸಿದೆ. ಅಭಿಯಾನದಡಿ ಜಿಲ್ಲಾಧಿಕಾರಿಗಳನ್ನು ಕೆಆರ್ಎಸ್ ಪಕ್ಷದ ಕಾರ್ಯಕರ್ತರು ಭೇಟಿ ಮಾಡಲಿದ್ದಾರೆ. ಚುನಾವಣೆ ಸಂದರ್ಭಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಯುವಂತೆ ಮನವಿ ಮಾಡಲಿದ್ದಾರೆ.
ಚುನಾವಣೆಗಳು ಬಂತೆಂದರೆ ಸಾಕು ರಾಜಕಾರಣಿಗಳು ಓಟಿಗಾಗಿ ಮತದಾರರಿಗೆ ಆಮಿಷ ಒಡ್ಡಲು ಮುಂದಾಗುತ್ತವೆ. ಆದರೆ ಇಂತಹ ಆಸೆ-ಆಮಿಷಗಳಿಗೆ ಮತದಾರರು ಬಲಿಯಾಗಬಾರದು. ಜೊತೆಗೆ ಜಿಲ್ಲಾಡಳಿತವು ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ನ್ಯಾಯಸಮ್ಮತ ಚುನಾವಣೆ ನಡೆಯುವ ಬಗ್ಗೆ ಖಾತ್ರಿಯಾಗಬೇಕು. ಈ ಉದ್ದೇಶದಿಂದಲೇ ಅಭಿಯಾನ ಆರಂಭಿಸಲಾಗಿದೆ ಎಂದು ಕೆಆರ್ಎಸ್ ಪಕ್ಷ ತಿಳಿಸಿದೆ.