ಸಿಎಂ ಬಗ್ಗೆ ದಿನೇಶ್ ಗುಂಡೂರಾವ್ ಹೇಳಿಕೆಯಲ್ಲಿ ಏನೇನೋ ಗೂಡಾರ್ಥ?
ಮೊನ್ನೆಮೊನ್ನೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಿಂದಿ ಭಾಷಣವನ್ನು ಕನ್ನಡಕ್ಕೆ ತರ್ಜುಮೆಗೊಳಿಸುವ ವೇಳೆ, ರುಚಿಗೆ ತಕ್ಕಂತೆ ಮಸಾಲ ಬೆರೆಸಿ ಕನ್ನಡಕ್ಕೆ ಭಾಷಾಂತರಗೊಳಿಸಿ ಸೈ ಎನಿಸಿಕೊಂಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಿಎಂ ಸಿದ್ದರಾಮಯ್ಯನವರ ಬಗ್ಗೆ ನೀಡಿರುವ ಹೇಳಿಕೆ ಕಾಂಗ್ರೆಸ್ಸಿಗರೇ ಹುಬ್ಬೇರಿಸುವಂತೆ ಮಾಡಿದೆ.
ಜನಾಶೀರ್ವಾದ ಯಾತ್ರೆಯ ವೇಳೆ, ರಾಹುಲ್ ಗಾಂಧಿ ಹೆಚ್ಚು ಸಿದ್ದರಾಮಯ್ಯನವರನ್ನೇ ಅವಲಂಬಿಸಿದ್ದರು ಎನ್ನುವ ಹತಾಶೆ, ಮೂಲ ಕಾಂಗ್ರೆಸ್ಸಿಗರಲ್ಲಿ ಕಾಣುತ್ತಿತ್ತು ಎನ್ನುವ ಗುಸುಗುಸು ಸುದ್ದಿಯ ನಡುವೆ ದಿನೇಶ್ ಗುಂಡೂರಾವ್ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಸಿದ್ದರಾಮಯ್ಯ ರಾಷ್ಟ್ರ ನಾಯಕರಾಗುವತ್ತ ಸಾಗುತ್ತಿದ್ದಾರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಎದುರಿಸಲು ಅವರು ಸಮರ್ಥರು ಎನ್ನುವ ಹೇಳಿಕೆಯನ್ನು ದಿನೇಶ್ ಗುಂಡೂರಾವ್ ನೀಡಿದ್ದಾರೆ. ದಿನೇಶ್, ಈ ಹೇಳಿಕೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಮಧ್ಯೆ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಮಹಾದಾಯಿ ವಿಚಾರದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಮಾತಿನ ಸಮರ, ಪ್ರಧಾನಿಯ 'ಟೆನ್ ಪರ್ಸೆಂಟ್' ಹೇಳಿಕೆಯ ನಂತರ ಇನ್ನಷ್ಟು ತೀವ್ರತೆ ಪಡೆದುಕೊಂಡಿದೆ. ನೇರವಾಗಿ ಟ್ವಿಟ್ಟರ್ ಮೂಲಕ ನರೇಂದ್ರ ಮೋದಿಯವರನ್ನು ಪ್ರಶ್ನಿಸುತ್ತಿರುವ ಸಿದ್ದರಾಮಯ್ಯ, ಮತ್ತೆ ರಾಜ್ಯಕ್ಕೆ ಬರುವಾಗ ದಾಖಲೆ ಸಮೇತ ಬನ್ನಿ ಎಂದು ಮೋದಿಗೆ ಸವಾಲೆಸೆದಿದ್ದಾರೆ.
ಕಳೆದ ನಾಲ್ಕುವರೆ ವರ್ಷದಲ್ಲಿ ರಾಜ್ಯವನ್ನು ಅಭಿವೃದ್ದಿ ಪಥದತ್ತ ಸಾಗಿಸುತ್ತಿರುವ ಸಿಎಂ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಬಿಜೆಪಿಯ ಬೆಳವಣಿಗೆಗೆ ಬ್ರೇಕ್ ಹಾಕಿದ್ದಾರೆಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮುಂದೆ ಓದಿ..

ಪ್ರಧಾನಿ ಜೊತೆ ನೇರ ಆಖಾಡಕ್ಕೆ ಇಳಿದಿರುವ ಸಿದ್ದು
ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ದ ನೇರವಾಗಿ ಆಖಾಡಕ್ಕೆ ಇಳಿದಿರುವುದರಿಂದ, ಈ ಬಾರಿಯ ಕರ್ನಾಟಕ ಅಸೆಂಬ್ಲಿ ಚುನಾವಣೆ ನರೇಂದ್ರ ಮೋದಿ Vs ಸಿದ್ದರಾಮಯ್ಯ ಎಂದೂ ಬಿಂಬಿಸಲಾಗುತ್ತಿದೆ. ಹಾಗಾಗಿ, ದಿನೇಶ್ ಗುಂಡೂರಾವ್ ನೀಡಿರುವ ಹೇಳಿಕೆ, ಚುನಾವಣಾ ಹೊಸ್ತಿಲಲ್ಲಿ ಬೇರೆ ಅರ್ಥ ಬರುವಂತೆ ಮಾಡಿದೆ.

ಮೋದಿಯವನ್ನು ಸಮರ್ಥವಾಗಿ ಎದುರಿಸುವಂತಹ ನಾಯಕರು ನಮ್ಮಲಿರಲಿಲ್ಲ
ಮೋದಿಯವನ್ನು ಸಮರ್ಥವಾಗಿ ಎದುರಿಸುವಂತಹ ನಾಯಕರು ನಮ್ಮಲಿರಲಿಲ್ಲ. ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಲಾಲೂ ಪ್ರಸಾದ್ ಯಾದವ್ ಅಂತಹ ಮುಖಂಡರು ಸ್ವಲ್ಪ ಮಟ್ಟಿಗೆ ಮೋದಿಯನ್ನು ತಡೆಯಲು ಸಮರ್ಥರಾದರು. ಕರ್ನಾಟಕದಲ್ಲಿ ಸಿದ್ದರಾಮಯ್ಯ, ಮೋದಿಯವರನ್ನು ಎದುರಿಸಲು ಶಕ್ತರಾಗಿದ್ದಾರೆ - ದಿನೇಶ್ ಗುಂಡೂರಾವ್.

ಹೈಕಮಾಂಡ್ ಸಿದ್ದರಾಮಯ್ಯ ಸರಕಾರಕ್ಕೆ ಫುಲ್ ಮಾರ್ಕ್
ಅಭಿವೃದ್ದಿ ಮತ್ತು ಬಿಜೆಪಿ ವಿರುದ್ದ ವಾಗ್ದಾಳಿಯ ವಿಚಾರದಲ್ಲಿ ನಮ್ಮ ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯನವರಿಗೆ ಫುಲ್ ಮಾರ್ಕ್ ನೀಡಿದ್ದಾರೆ. ಸಿದ್ದರಾಮಯ್ಯನವರು ರಾಷ್ಟ್ರ ಮಟ್ಟದ ನಾಯಕರಾಗುವತ್ತ ಸಾಗುತ್ತಿದ್ದಾರೆ, ಪ್ರಧಾನಿ ಮೋದಿಯನ್ನು ಎದುರಿಸಲು ಅವರು ಸಮರ್ಥರು - ದಿನೇಶ್ ಗುಂಡೂರಾವ್.

ರಾಜ್ಯ ಕಾಂಗ್ರೆಸ್ಸಿನಲ್ಲೂ ಸಿದ್ದರಾಮಯ್ಯ ಬಲಿಷ್ಟರಾಗುತ್ತಿದ್ದಾರೆ
ರಾಜ್ಯ ಕಾಂಗ್ರೆಸ್ಸಿನಲ್ಲೂ ಸಿದ್ದರಾಮಯ್ಯ ಬಲಿಷ್ಟರಾಗುತ್ತಿದ್ದಾರೆ, ಅವರ ಮೇಲೆ ಪಕ್ಷದೊಳಗಿನ ಅಸಮಾಧಾನ ಕೂಡಾ ದಿನೇದಿನೇ ಕಮ್ಮಿಯಾಗುತ್ತಿದೆ. ಅವರು ನಮ್ಮ ನಾಯಕರು ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ದಿನೇಶ್ ಹೇಳಿಕೆ, ರಾಷ್ಟ್ರ ರಾಜಕಾರಣದತ್ತ ಸಿದ್ದರಾಮಯ್ಯ ಸಾಗಲಿದ್ದಾರಾ ಎನ್ನುವ ಪ್ರಶ್ನೆ ಬರುವಂತೆ ಮಾಡಿದೆ.

ರಾಷ್ಟ್ರ ರಾಜಕಾರಣದತ್ತ ಸಿದ್ದು ಸಾಗಲಿದ್ದಾರಾ ಎನ್ನುವ ಪ್ರಶ್ನೆ ಜೀವಂತ
ರಾಷ್ಟ್ರ ರಾಜಕಾರಣದತ್ತ ಹೋಗುತ್ತೀರಾ ಎನ್ನುವ ಪ್ರಶ್ನೆಗೆ ಈ ಹಿಂದೆಯೊಮ್ಮೆ ಸಿದ್ದರಾಮಯ್ಯ ಉತ್ತರಿಸುತ್ತಾ, ನಾನು ಅದರಲ್ಲಿ ಆಸಕ್ತಿ ಹೊಂದಿಲ್ಲ. ನನ್ನದೇನಿದ್ದರೂ ರಾಜ್ಯ ರಾಜಕಾರಣ ಎಂದಿದ್ದರು. ಆದರೆ, ಮೋದಿ ವಿರುದ್ದ ಅವರ ಗಟ್ಟಿ ನಿಲುವು ಮತ್ತು ದಿನೇಶ್ ಗುಂಡೂರಾವ್ ಹೇಳಿಕೆಯ ಹಿಂದೆ ರಾಷ್ಟ್ರ ರಾಜಕಾರಣದತ್ತ ಸಿದ್ದು ಸಾಗಲಿದ್ದಾರಾ ಎನ್ನುವ ಪ್ರಶ್ನೆಯನ್ನು ಜೀವಂತವಾಗಿರಿಸಿದೆ.












Click it and Unblock the Notifications