HD Kumaraswamy: ಪೆನ್ಡ್ರೈವ್ನಲ್ಲಿ 18 ನಿಮಿಷದ 6 ಎಪಿಸೋಡ್!?
ಮೈಸೂರು: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಪತ್ರ ವಿಚಾರ ಭಾರಿ ಸೌಂಡ್ ಮಾಡುತ್ತಿದ್ದು, ಇದು ನಕಲಿ ಎಂದು ಕಾಂಗ್ರೆಸ್ ಲೀಡರ್ಸ್ ಆಕ್ರೋಶ ಹೊರಹಾಕುತ್ತಿದ್ದಾರೆ. ಆದರೆ ವಿಪಕ್ಷ ನಾಯಕರು ಇದು ನಿಜ ಎಂದು ಆರೋಪಿಸುತ್ತಿದ್ದಾರೆ. ಹೀಗೆ ಇಬ್ಬರ ನಡುವೆ ತಿಕ್ಕಾಟ ಜೋರಾಗಿರುವಾಗ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಪೆನ್ಡ್ರೈವ್ ತೋರಿಸಿ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ನೇರ ಸವಾಲು ಎಸೆದಿದ್ದಾರೆ.
ಮೈಸೂರಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾಜಿ ಸಿಎಂ ವಿರುದ್ಧ ನೇರ ಯುದ್ಧಕ್ಕೆ ನಿಂತರು. ಈ ಹಿಂದೆ ಕಾಂಗ್ರೆಸ್ ನಾಯಕರ ಬಂಡವಾಳ ಇದರಲ್ಲಿದೆ ಎನ್ನುತ್ತಾ ಕುಮಾರಸ್ವಾಮಿ ಅವರು ಪೆನ್ಡ್ರೈವ್ ತೋರಿಸಿ ಸವಾಲು ಎಸೆದಿದ್ದರು. ಸವಾಲಿನ ಕುರಿತು ಇಂದು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ತಾವೂ ಒಂದು ಪೆನ್ಡ್ರೈವ್ ತೋರಿಸಿ, 18 ನಿಮಿಷದ ನಿಮ್ಮ ವಿಡಿಯೋ ಇದಲ್ಲಿ ಇದೆ. ನೀವು ನಿಮ್ಮ ಪೆನ್ಡ್ರೈವ್ ಹೊರಬಿಟ್ಟ ಬಳಿಕ ನಾನು ಕೂಡ ನನ್ನ ಪೆನ್ಡೈವ್ ಒಳಗಿರುವ ಮಾಹಿತಿ ಹೊರಹಾಕುತ್ತೇನೆ ಎಂದಿದ್ದಾರೆ. ಈ ಮೂಲಕ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳು ಪತ್ರ ಬರೆದಿದ್ದಾರೆಂಬ ವಿಚಾರ ರಾಜಕೀಯ ಕಿಚ್ಚು ಹಚ್ಚಿದೆ.

ನಕಲಿ ಪತ್ರ ಬರೆದವರನ್ನ ಅರೆಸ್ಟ್ ಮಾಡಿ!
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ 8 ಜನರ ಸಹಿಯನ್ನ ಒಬ್ಬರೇ ಮಾಡಿದ್ದಾರೆ. ಕೃಷಿ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರು ತಮಗೂ ಈ ಪತ್ರಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ. ಆದರೆ ಕುಮಾರಸ್ವಾಮಿ ಪೆನ್ಡ್ರೈವ್ ಇಟ್ಕೊಂಡು ಆರೋಪ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಹಿಟ್ ಅಂಡ್ ರನ್ ರೀತಿ ವರ್ತಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಅಲ್ಲದೆ ನಕಲಿ ಪತ್ರದ ಬಗ್ಗೆ ಸೂಕ್ತ ತನಿಖೆ ನಡೆಸಬೇಕಿದೆ ಎಂದು ಆಗ್ರಹಿಸಿದ ಲಕ್ಷ್ಮಣ್, ಅಕಸ್ಮಾತ್ ಸೂಕ್ತ ತನಿಖೆ ನಡೆಯದಿದ್ದರೆ ನಾವೇ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
18 ನಿಮಿಷದ 6 ಎಪಿಸೋಡ್ ಇದೆ!
ಹಾಗೇ ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದು ಇನ್ನೂ 3 ತಿಂಗಳಾಗಿದೆ. ಆದ್ರೆ ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದೆ. ಇದನ್ನ ನೋಡಿ ನಿಮಗೆ ತಡೆಯಲು ಆಗುತ್ತಿಲ್ಲ ಇದೇ ಕಾರಣಕ್ಕೆ ಹೀಗೆ ಆರೋಪ ಮಾಡುತ್ತಿದ್ದೀರಿ. ನಿಮ್ಮ ಪೆನ್ಡ್ರೈವ್ ಮೊದಲು ಹೊರಗೆ ಬಿಡಿ. ನನ್ನ ಬಳಿಯೂ ಪೆನ್ ಡ್ರೈವ್ ಇದ್ದು, 18 ನಿಮಿಷದ 6 ಎಪಿಸೋಡ್ ನನ್ನ ಬಳಿಯೂ ಇದೆ. ನೀವು ನಿಮ್ಮ ಪೆನ್ಡ್ರೈವ್ ಹೊರಬಿಟ್ಟ ನಂತರ ಕೇವಲ ಒಂದು ಗಂಟೆ ಒಳಗಾಗಿಯೇ ನನ್ನ ಪೆನ್ಡ್ರೈವ್ನಲ್ಲಿ ಇರುವ ಮಾಹಿತಿ ಕೂಡ ನೀಡುತ್ತೇನೆ ಎಂದರು.
ಸಿದ್ದರಾಮಯ್ಯ, ಡಿಕೆಶಿ ರಾಜ್ಯಕ್ಕೆ ಮಾಸ್ ಲೀಡರ್!
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇಡೀ ರಾಜ್ಯಕ್ಕೆ ಮಾಸ್ ಲೀಡರ್. ಅವರನ್ನು ಎಚ್.ಡಿ ಕುಮಾರಸ್ವಾಮಿ ಅವರು ಏನೂ ಮಾಡಿಕೊಳ್ಳಲು ಆಗಲ್ಲ. ಆದ್ರೆ ಒಕ್ಕಲಿಗ ಸಮುದಾಯದಲ್ಲಿ ನಾನೊಬ್ಬನೇ ಇರಬೇಕು ಎಂದು ಹೀಗೆ ಒಕ್ಕಲಿಗ ಸಮುದಾಯ ನಾಯಕರನ್ನ ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಇದೇ ವೇಳೆ ಲಕ್ಷ್ಮಣ್ ಗಂಭೀರ ಆರೋಪವನ್ನು ಮಾಡಿದ್ದಾರೆ. ಮೂಗರ್ಜಿ ಬಗ್ಗೆ ಕ್ರಮ ಜರುಗಿಸಲು ಹೊರಟ ರಾಜ್ಯಪಾಲರು ಇವರೇ ಮೊದಲು ಎಂದು ರಾಜ್ಯಪಾಲರ ನಡೆಯ ವಿರುದ್ಧವೂ ಎಂ.ಲಕ್ಷ್ಮಣ್ ಅಸಮಾಧಾನ ವ್ಯಕ್ತಪಡಿಸಿದ್ರು.

ಒಟ್ನಲ್ಲಿ ಕೃಷಿ ಸಚಿವರ ವಿರುದ್ಧದ ಪತ್ರ ವಿಚಾರ ರಾಜಕೀಯ ತಿರುವು ಪಡೆಯುತ್ತಿದೆ. ಆದ್ರೆ ಈ ಹೊತ್ತಲ್ಲೇ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೊಸ ಬಾಂಬ್ ಸಿಡಿಸಿದ್ದಾರೆ. ಅಲ್ಲದೆ ಈ ಪತ್ರದ ಬಗ್ಗೆ ಸೂಕ್ತ ತನಿಖೆ ನಡೆಸದೇ ಇದ್ದಲ್ಲಿ ನಾವೇ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ. ಈ ಎಲ್ಲಾ ಲೆಕ್ಕಾಚಾರ ನೋಡುತ್ತಿದ್ದರೆ ಮುಂಬರುವ ದಿನಗಳಲ್ಲಿ ಪತ್ರದ ಫೈಟ್ ಕೂಡ ಭಾರಿ ತಿಕ್ಕಾಟಕ್ಕೆ ವೇದಿಕೆ ಸಿದ್ಧಪಡಿಸುವ ಮುನ್ಸೂಚನೆಯನ್ನೂ ನೀಡಿದೆ. ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ? ಅಂತಾ ಕಾದು ನೋಡಬೇಕು.












Click it and Unblock the Notifications