Voter Data Theft Case : ಸಿಎಂ ಬೊಮ್ಮಾಯಿಗೆ ಧಮ್ ಇದ್ರೆ ನ್ಯಾಯಾಂಗ ತನಿಖೆ ಮಾಡಿಸಲಿ- ಡಿಕೆಶಿ
ಬೆಂಗಳೂರು, ನವೆಂಬರ್ 19: ಸಿಎಂ ಬಸವರಾಜ ಬೊಮ್ಮಾಯಿಗೆ ಧಮ್, ತಾಕತ್ತು ಇದ್ರೆ ಮತದಾರರ ಮಾಹಿತಿ ಕಳ್ಳತನದ ಬಗ್ಗೆ ನ್ಯಾಯಾಂಗ ತನಿಖೆಗೆ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.
ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ಬಳಿಕ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಸಚಿವ ಅಶ್ವತ್ಥ ನಾರಾಯಣ ಪಾತ್ರ ಇದೆ. ಅಶ್ವತ್ಥ ನಾರಾಯಣ ಅವರು ಫೋನ್ ನಲ್ಲಿ ಮಾತನಾಡಿದ್ದು, ಅವರ ಚೆಕ್ ಬುಕ್, ನೋಟ್ ಕೌಟಿಂಗ್ ಯಂತ್ರ, ಸೀಲ್, ಲೆಟರ್ ಪ್ಯಾಡ್ ಏಕೆ ಅಲ್ಲಿ ಹೋಯಿತು? ಅಶ್ವತ್ಥ್ ನಾರಾಯಣ ಅವರೇ ಇದರ ನಿರ್ವಹಣೆ ಮಾಡಿದ್ದಾರೆ ಎಂದು ಆರೋಪ ಮಾಡಿದರು.
ಬಿಜೆಪಿ ಸೋಲಿನ ಭಯದಲ್ಲಿ ಈ ರೀತಿ ಷಡ್ಯಂತ್ರ ಮಾಡುತ್ತಿದೆ
ಕಾಂಗ್ರೆಸ್ ಪಕ್ಷದ ನಕಲಿ ಮತಗಳು ಕೈ ತಪ್ಪಲಿವೆ ಎಂಬ ಕಾರಣಕ್ಕೆ ಈ ಆರೋಪ ಮಾಡುತ್ತಿದ್ದಾರೆ ಎಂಬ ಮುಖ್ಯಮಂತ್ರಿಗಳ ಹೇಳಿಕೆ ವಿಚಾರವಾಗಿ ಪ್ರಶ್ನೆ ಕೇಳಿದಾಗ, 'ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಪಾಲಿಕೆ ಆಯುಕ್ತರು ಈ ಸಂಸ್ಥೆಗೆ ಅನುಮತಿ ನೀಡಿದ್ದಾರೆ ಎಂದು ಹೇಳಿದ್ದು, ಅವರು ಬೆಂಗಳೂರು ಉಸ್ತುವಾರಿ ಯಾಕಾಗಿದ್ದಾರೆ? ಇದಕ್ಕೂ ಅವರಿಗೂ ಸಂಬಂಧವಿಲ್ಲವದಿದ್ದರೆ ಈ ಪ್ರಕರಣದ ತನಿಖೆಯನ್ನು ನ್ಯಾಯಾಂಗ ತನಿಖೆಗೆ ನೀಡಲಿ. ಬಿಜೆಪಿ ಸೋಲಿನ ಭಯದಲ್ಲಿ ಈ ರೀತಿ ಷಡ್ಯಂತ್ರ ಮಾಡುತ್ತಿದೆ. ಇದಕ್ಕೆ ಅವರು ಹೆದರುತ್ತಿರುವುದೇಕೆ? ಅವರು ಧಮ್ಮು ತಾಕತ್ತಿನ ಮಾತನಾಡುತ್ತಾರಲ್ಲ ಈಗ ನಿಮ್ಮ ಧಮ್ಮು ತಾಕತ್ತು ತೋರಿಸಿ. ಇಲ್ಲಿ ಮತದಾರರ ಮಾಹಿತಿ ದುರ್ಬಳಕೆ ಆಗಿದೆ ಎಂದು ಬಿಬಿಎಂಪಿ ಆಯುಕ್ತರು ಒಪ್ಪಿಕೊಂಡಿದ್ದಾರೆ. ಈ ದುರ್ಬಳಕೆ ಯಾವ ಮಟ್ಟದಲ್ಲಿ ಆಗಿದೆ ಎಂಬ ತನಿಖೆ ಆಗಬೇಕಲ್ಲವೇ? ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದು, ಇವರ ಅಧಿಕಾರವನ್ನು ಖಾಸಗಿ ಸಂಸ್ಥೆಗಳಿಗೆ ನೀಡುವುದು ಎಷ್ಟು ಸರಿ?' ಎಂದು ಸವಾಲು ಹಾಕಿದರು.
ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿನ ಭಯ ಇದೆಯೋ ಅಲ್ಲಿ ಖಾಸಗಿ ಸಂಸ್ಥೆಗಳ ಮೂಲಕ ಎಲೆಕ್ಷನ್ ಕಮಿಷನ್ ಡೇಟಾ, ಪಾಸ್ ವರ್ಡ್, ಕೋಡ್ ಕಳ್ಳತನ ಮಾಡಿದೆ. ಇದನ್ನು ಬಿಜೆಪಿ ಮಂತ್ರಿ ಶಾಸಕರಿಗೆ ಕೊಡಲಾಗಿದೆ. ಯಾರ ಹೆಸರನ್ನು ತೆಗೆಯಬೇಕು ಯಾರನ್ನು ಸೇರಿಸಬೇಕು ಎಂದು ಹೊರಟಿದ್ದಾರೆ.
ಈವರೆಗೂ ಒಬ್ಬರನ್ನು ಆರೆಸ್ಟ್ ಮಾಡಿಲ್ಲ. ಮೂರು ಜನ ಮಂತ್ರಿಗಳು ಇಬ್ಬರು ಶಾಸಕರು ಲಿಂಕ್ ಇಟ್ಟುಕೊಂಡಿದ್ದಾರೆ ಚಿಲುಮೆ ಜೊತೆ. ಆದರೂ ಯಾರ ಮೇಲೂ ಎಫ್ ಐಆರ್ ಆಗಿಲ್ಲ , ಬಂಧನ ಆಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
2 7 ಲಕ್ಷ ಓಟ್ ಡಿಲೀಟ್ ಮಾಡಲಾಗಿದೆ. ಮನೆಗೆ ಹೋಗದೆ ಯಾವುದೇ ನಿಯಮ ಪಾಲನೆ ಮಾಡದೆ ಈ ಕೆಲಸ ಮಾಡಲಾಗಿದೆ ಎಂದು ಆರೋಪ ಮಾಡಿದರು. ಬಿಎಲ್ ಒ ನೇಮಕ ಮಾಡಲು ಯಾರಿಗೂ ಹಕ್ಕಿಲ್ಲ. ಸರ್ಕಾರಕ್ಕೆ ಮಾತ್ರ ಅಧಿಕಾರ ಇದೆ. ಇದನ್ನು ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ. ಹೀಗಿದ್ದರೂ ಖಾಸಗಿ ಅವರಿಗೆ ಹೇಗೆ ನೀಡಿದರು? ಎಂದು ಪ್ರಶ್ನಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಮಾನ ಆಗುತ್ತಿದೆ. ಮುಖ್ಯ ಚುನಾವಣಾಧಿಕಾರಿ ವಿಭಾಗಾಧಿಕಾರಿಗೆ ತನಿಖೆಗೆ ಸೂಚನೆ ನೀಡಿದ್ದೇನೆ ಎನ್ನುತ್ತಾರೆ. ನಮಗೆ ನ್ಯಾಯ ಸಿಗುವ ಹಾಗೆ ಕಾಣುತ್ತಿಲ್ಲ. ಎಆರ್ ಓ ಡಿಅರ್ ಓ ಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇವಾಗ ಮತಪಟ್ಟಿಯಲ್ಲಿ ಡಿಲೀಟ್ ಹಾಗೂ ಸೇರ್ಪಡೆ ಆಗಿದ್ದನ್ನು ಪರಿಶೀಲನೆ ಮಾಡಬೇಕು.ಅಷ್ಟೇ ಅಲ್ಲದೆ ಮಾಡಿರುವ ಮತಪಟ್ಟಿ ಪರಿಷ್ಕರಣೆ ರದ್ದು ಮಾಡಬೇಕು ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನಿಗಾದಲ್ಲಿ ತನಿಖೆ ಮಾಡಿ ಎಂದು ಒತ್ತಾಯಿಸಿದರು.
ಖಾಸಗಿ ಸಂಸ್ಥೆ ಡೇಟಾವನ್ನು ಕದ್ದಿದ್ದಾರೆ. ಇವಿಎಂ ಮ್ಯಾನೇಜ್ ಮಾಡುವ ಪವರ್ ಕೊಡಲಾಗಿದೆ. ನಾವು ತಪ್ಪು ಮಾಡಿದರೆ ಕ್ರಮ ಕೈಗೊಳ್ಳಿ. ಯಾರು ಬೇಡ ಎನ್ನುತ್ತಾರೆ ಎಂದು ಹೇಳಿದರು.
ಹೊಂಬಾಳೆ ಪ್ರೈ.ಲಿ ಕಂಪನಿಯಲ್ಲಿರುವವರೇ ಚಿಲುಮೆ ಸಂಸ್ಥೆಯಲ್ಲೂ ಇದ್ದಾರೆ. ಇದು 2019 ರಿಂದ ವ್ಯವಸ್ಥಿತವಾಗಿ ಮಾಡಿಕೊಂಡು ಬಂದಿದ್ದಾರೆ. ಮತದಾರರ ನಕಲಿ ಗುರುತಿನ ಚೀಟಿ ವಿಚಾರವಾಗಿ ಪ್ರಕರಣ ದಾಖಲಾಗುತ್ತಿದೆ. ಅವರ ಕ್ಷೇತ್ರದಲ್ಲಿ ಈ ರೀತಿ ಮತದಾರರ ಮಾಹಿತಿ ಕಲೆಹಾಕಲಾಗಿದೆ. ನಾವು ಈ ಪ್ರಕರಣ ಬಯಲಿಗೆಳೆದ ಹಿನ್ನೆಲೆಯಲ್ಲಿ ನೆಪಮಾತ್ರಕ್ಕೆ ಒಂದು ಸಣ್ಣ ದೂರು ದಾಖಲಿಸಿಕೊಂಡಿದ್ದಾರೆ. ಈ ಸಂಸ್ಥೆ ನಿರ್ದೇಶಕರನ್ನು ಈವರೆಗೂ ಬಂಧಿಸಿಲ್ಲ. ನಿನ್ನೆ ಆ ಸಂಸ್ಥೆ ಕಚೇರಿಯಲ್ಲಿ ನೋಟು ಏಣಿಕೆ ಯಂತ್ರ ಲಭಿಸಿದೆ. ಈ ಸಂಸ್ಥೆಗೆ ದುಡ್ಡಿಲ್ಲ ಎಂದ ಮೇಲೆ ನೋಟು ಏಣಿಕೆ ಯಂತ್ರ ಯಾಕೆ?
ನಾವು ಪೊಲೀಸ್ ಆಯುಕ್ತರಿಗೆ ಈ ವಿಚಾರವಾಗಿ ದೂರು ನೀಡಿದ್ದು, ಅವರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ನೋಡೋಣ. ಪೊಲೀಸರು ಈಗ ಒಂದಿಬ್ಬರು ನಕಲಿ ಬಿಎಲ್ಒ ಕಾರ್ಡ್ ದಾರರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಈ ಗುರುತಿನ ಚೀಟಿ ಕೊಟ್ಟವರು, ಚೆಕ್ ನೀಡಿರುವವರ ಮೇಲೆ, ಈ ನಕಲಿ ಗುರುತಿನ ಚೀಟಿ ಪಡೆದಿರುವವರ ಮೇಲೆ ಎಫ್ಐಆರ್ ದಾಖಲಿಸಬೇಕು.
ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ನಾವು ಈ ವಿಚಾರವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುತ್ತೇವೆ. ಜತೆಗೆ ರಾಜ್ಯದ ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ. ನಾನು ರಾಜ್ಯ ಹೈಕೋರ್ಟ್ ನ್ಯಾಯಾಧೀಶರಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಈ ವಿಚಾರದಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕು. ಆಕ್ಸಿಜನ್ ದುರಂತ ಪ್ರಕರಣದಲ್ಲಿ ಸುಮೋಟೋ ಪ್ರಕರಣ ದಾಖಲಿಸಿದಂತೆ ಈ ವಿಚಾರದಲ್ಲಿ ಸುಮೋಟೋ ಪ್ರಕರಣ ದಾಖಲಿಸಿ ನಿಮ್ಮ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು.
ನಿಮ್ಮ ವಿರುದ್ಧವೂ ಈಗ ದೂರು ನೀಡಲಾಗುತ್ತಿದೆ ಎಂದು ಕೇಳಿದ ಪ್ರಶ್ನೆಗೆ, 'ನಮ್ಮ ಕಾಲದಲ್ಲಿ ಮತದಾರರ ಮಾಹಿತಿ ದುರ್ಬಳಕೆ ಆಗಿದೆ ಎಂದು ದೂರು ನೀಡುವುದಾದರೆ ನೀಡಲಿ. ನಮ್ಮ ಕಾಲದಲ್ಲಿ ತಪ್ಪಾಗಿದೆ ಎಂದು ನೀವು ಅದೇ ತಪ್ಪು ಮಾಡುವುದು ಎಷ್ಟು ಸರಿ? ಈ ಸಂಸ್ಥೆ ಅಕ್ರಮ ಎಸಗಿದೆ ಎಂಬ ಕಾರಣಕ್ಕೆ ಬಿಬಿಎಂಪಿ ಆಯುಕ್ತರು ತಮ್ಮ ಆದೇಶ ಹಿಂಪಡೆದಿದ್ದಾರೆ. ಆದರೆ ಯಾವ ತಪ್ಪು ಮಾಡಿದ್ದಾರೆ ಎಂದು ತಿಳಿಸಿಲ್ಲ. ನಮ್ಮ ವಿರುದ್ಧ ತನಿಖೆ ನಡೆಸಿದರೂ ನಾವು ಅದನ್ನು ಸ್ವಾಗತಿಸುತ್ತೇವೆ. ಈ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಬೇಕು. ಇದು ವ್ಯಕ್ತಿಗಳ ವಿಚಾರವಲ್ಲ. ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಪೈಕಿ ಯಾರು ಎಷ್ಟು ಜನರಿಗೆ ಬಿಎಲ್ಒ ಗುರುತಿನ ಚೀಟಿ ವಿತರಿಸಿದ್ದಾರೆಯೋ ಅವರೆಲ್ಲರನ್ನು ಬಂಧಿಸಬೇಕು. ಕ್ರಿಮಿನಲ್ ಪ್ರಕರಣ ದಾಖಲಿಸಬೇಕು' ಎಂದರು.
ಈ ವಿಚಾರದಲ್ಲಿ ಕುಮಾರಸ್ವಾಮಿ ಅವರು ಮೃದು ಧೋರಣೆ ಅನುಸರಿಸುತ್ತಿದ್ದಾರೆಯೇ ಎಂಬ ವಿಚಾರವಾಗಿ ಮಾತನಾಡಿ, 'ಕುಮಾರಸ್ವಾಮಿ ಅಥವಾ ಬೇರೆ ಪಕ್ಷದವರು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ. ಪಕ್ಷದ ಅಧ್ಯಕ್ಷನಾಗಿ ಹಾಗೂ ಜನಪ್ರತಿನಿಧಿಯಾಗಿ ನಾನು ಮಾತನಾಡುತ್ತಿದ್ದೇನೆ. ಬೇರೆ ನಾಯಕರ ಮಾತಿಗೆ ನಾನು ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ' ಎಂದರು.
ಜನಪ್ರತಿನಿಧಿ ಕಾಯ್ದೆ ಪ್ರಕಾರ ಈ ಪ್ರಕರಣ ಕ್ರಿಮಿನಲ್ ಅಪರಾಧವಾಗಿದ್ದು, ಇದನ್ನು ಹೇಗೆ ಪರಿಗಣಿಸುತ್ತೀರಾ ಎಂದು ಕೇಳಿದಾಗ, 'ಇದು ಮತದಾನದ ಹಕ್ಕನ್ನು ಕಸಿದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವಂತಹ ಅಪರಾಧವಾಗಿದೆ' ಎಂದರು.