ಸಿನಿಮಾಗಳಲ್ಲಿ ಕೌಟುಂಬಿಕ ಮೌಲ್ಯ ಸಾರಿದ ನಿರ್ದೇಶಕನ ಮನೆಯಲ್ಲೇ ಬಿರುಕು? ಭಾರತಿರಾಜಾ ಸಾವಿನ ಸುತ್ತ ಸಾಲು ಸಾಲು ಪ್ರಶ್ನೆ
ತಮಿಳು ಚಿತ್ರರಂಗಕ್ಕೆ ಗ್ರಾಮೀಣ ಸೊಗಡನ್ನು ಪರಿಚಯಿಸಿ ಖ್ಯಾತರಾಗಿದ್ದ ಹಿರಿಯ ನಿರ್ದೇಶಕ ಭಾರತಿಯಾಜ ಅವರು ಇತ್ತೀಚೆಗೆ ಇಹಲೋಕ ತ್ಯಜಿಸಿದ್ದರೂ, ಅವರ ಕುಟುಂಬದ ಸುತ್ತಲಿನ ವಿವಾದಗಳು ಮತ್ತು ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಇನ್ನೂ ನಿಂತಿಲ್ಲ. ವಿಶೇಷವಾಗಿ ಅವರ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಯ ಸಂದರ್ಭದಲ್ಲಿ ನಡೆದ ಕೆಲವು ಘಟನೆಗಳು ಈಗ ತಮಿಳುನಾಡಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಕೊನೆಗಾಲದಲ್ಲಿ ಕಾಡಿತ್ತಾ ಒಂಟಿತನ?
ಭಾರತಿರಾಜಾ ಅವರ ಪುತ್ರ ಮನೋಜ್ ಕೆಲವು ತಿಂಗಳುಗಳ ಹಿಂದಷ್ಟೇ ನಿಧನರಾಗಿದ್ದರು. ಮಗನ ಅಕಾಲಿಕ ಸಾವು ಹಿರಿಯ ನಿರ್ದೇಶಕರಿಗೆ ತೀವ್ರ ಮಾನಸಿಕ ಆಘಾತವನ್ನು ಉಂಟುಮಾಡಿತ್ತು ಎನ್ನಲಾಗಿದೆ. ಮಗನ ಅಗಲಿಕೆಯ ನಂತರ ಅವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ತೀವ್ರವಾಗಿ ಬಳಲಿದ್ದರು. ಅವರ ಪತ್ನಿ ತೇನಿಯಲ್ಲಿ ವಾಸಿಸುತ್ತಿದ್ದರೆ, ಮಗಳು ಜನನಿ ಮಲೇಷ್ಯಾದಲ್ಲಿ ನೆಲೆಸಿದ್ದರು. ಇತ್ತ ಸೊಸೆ ನಂದನಾ ಕೂಡ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಭಾರತಿರಾಜಾ ಅವರ ಕೊನೆಯ ದಿನಗಳಲ್ಲಿ ಅವರನ್ನು ನೇರವಾಗಿ ನೋಡಿಕೊಂಡಿದ್ದು ಕೇವಲ ನರ್ಸ್ಗಳು ಹಾಗೂ ಸಹಾಯಕರು ಮಾತ್ರ ಎಂಬ ಮಾತುಗಳು ಕೇಳಿಬಂದಿವೆ.

ಅಂತ್ಯಕ್ರಿಯೆ ವೇಳೆ ನಡೆದಿದ್ದೇನು?
ಭಾರತಿರಾಜಾ ಅವರ ಪಾರ್ಥಿವ ಶರೀರಕ್ಕೆ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಹಾಗೂ ಸಾವಿರಾರು ಅಭಿಮಾನಿಗಳು ಅಂತಿಮ ನಮನ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ, ಕುಟುಂಬ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆದಿದೆ ಎಂಬ ವದಂತಿ ಹಬ್ಬಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಕೆಲವು ವೀಡಿಯೊ ತುಣುಕುಗಳ ಪ್ರಕಾರ, ಭಾರತಿರಾಜಾ ಅವರ ಮಗಳು ಜನನಿ, ಅಣ್ಣನ ಪತ್ನಿ (ಸೊಸೆ) ನಂದನಾ ಕುಳಿತಿದ್ದ ಜಾಗಕ್ಕೆ ಬಂದು ತೀವ್ರ ವಾಗ್ವಾದಕ್ಕಿಳಿದಿದ್ದಾರೆ ಎನ್ನಲಾಗಿದೆ. ನಂದನಾ ಅವರನ್ನು ಅಲ್ಲಿಂದ ಎದ್ದು ಹೋಗುವಂತೆ ಜನನಿ ಒತ್ತಾಯಿಸಿದರು ಎನ್ನಲಾಗಿದ್ದು, ಈ ವೇಳೆ ಇಬ್ಬರ ನಡುವಿನ ಮನಸ್ತಾಪ ಸಾರ್ವಜನಿಕವಾಗಿ ಬಹಿರಂಗವಾಗಿದೆ.
ಕೈಮುಗಿದು ಬೇಡಿಕೊಂಡ ನಟಿ ರಾಧಿಕಾ ಶರತ್ಕುಮಾರ್
ಅಲ್ಲಿಯೇ ಇದ್ದ ಹಿರಿಯ ನಟಿ ರಾಧಿಕಾ ಶರತ್ಕುಮಾರ್ ಪರಿಸ್ಥಿತಿಯನ್ನು ತಿಳಿಗೊಳಿಸಲು ತಕ್ಷಣ ಮುಂದಾದರು ಎನ್ನಲಾಗಿದೆ. ವಿಷಯ ದೊಡ್ಡದಾಗುವುದನ್ನು ತಪ್ಪಿಸಲು ಅವರು ಕೈಮುಗಿದು ವಿನಂತಿಸಿಕೊಂಡು, ಜಗಳವನ್ನು ಶಾಂತಗೊಳಿಸಲು ಪ್ರಯತ್ನಿಸಿದರು ಎಂದು ಅಲ್ಲಿ ನೆರೆದಿದ್ದವರು ತಿಳಿಸಿದ್ದಾರೆ. ಈ ವಿಡಿಯೋ ಇಂಟರ್ನೆಟ್ನಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.
ಆಸ್ತಿ ವಿವಾದದ ಶಂಕೆ
ದೊಡ್ಡವರ ನಡುವಿನ ಈ ಗಲಾಟೆಯನ್ನು ನೋಡಿ ಮನೋಜ್-ನಂದನಾ ದಂಪತಿಯ ಇಬ್ಬರು ಹೆಣ್ಣುಮಕ್ಕಳು (ಭಾರತಿರಾಜಾ ಅವರ ಮೊಮ್ಮಕ್ಕಳು) ಜೋರಾಗಿ ಅಳಲು ಪ್ರಾರಂಭಿಸಿದರು ಎನ್ನಲಾಗಿದೆ. ನಂತರ ನಂದನಾ ಅವರು ತಮ್ಮ ಮಕ್ಕಳನ್ನು ಕರೆದುಕೊಂಡು ಅಲ್ಲಿಂದ ಹೊರಟುಹೋದರು ಎಂಬ ಮಾಹಿತಿ ಇದೆ. ಭಾರತಿರಾಜಾ ಅವರ ಹೆಸರಿನಲ್ಲಿದ್ದ ಕೆಲವು ಆಸ್ತಿಗಳು, ವಿಶೇಷವಾಗಿ ಅವರು ಉಡುಗೊರೆಯಾಗಿ ನೀಡಿದ್ದ ಅಪಾರ್ಟ್ಮೆಂಟ್ ಮತ್ತು ಮಗನ ಕುಟುಂಬಕ್ಕೆ ಆಸ್ತಿಯಲ್ಲಿ ಹಕ್ಕು ನೀಡುವ ವಿಷಯವಾಗಿ ಕುಟುಂಬದಲ್ಲಿ ಮೊದಲೇ ಭಿನ್ನಾಭಿಪ್ರಾಯಗಳಿದ್ದವು ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಇದೇ ಕಾರಣಕ್ಕೆ ಅಂತ್ಯಕ್ರಿಯೆಯಲ್ಲೂ ಇಂತಹ ಘಟನೆ ನಡೆಯಿತೇ ಎಂಬ ಪ್ರಶ್ನೆ ಎದ್ದಿದೆ.

ಭಾರತಿರಾಜಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಂದಿದ್ದ ಖ್ಯಾತ ಸಂಗೀತ ನಿರ್ದೇಶಕ ಗಂಗೈ ಅಮರನ್ ಭಾವುಕರಾಗಿ ಆಡಿದ ಮಾತುಗಳು ಈಗ ಗಮನ ಸೆಳೆಯುತ್ತಿವೆ. "ಕೊನೆಯ ದಿನಗಳಲ್ಲಿ ಅವರನ್ನು ಹೀಗೆ ಒಂಟಿಯಾಗಿ ಬಿಟ್ಟುಬಿಟ್ಟಿರಲ್ಲಾ..." ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಭಾರತಿರಾಜಾ ಅವರು ಕೊನೆಗಾಲದಲ್ಲಿ ತೀವ್ರ ಮಾನಸಿಕ ಒತ್ತಡದಲ್ಲಿದ್ದರೇ ಮತ್ತು ಆ ಕಾರಣದಿಂದಲೇ ತಮ್ಮ ಹೃದಯ ಸಂಬಂಧಿ ಕಾಯಿಲೆಯ ಚಿಕಿತ್ಸೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರೇ ಎಂಬ ಚರ್ಚೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ, ಅಭಿಮಾನಿಯೊಬ್ಬರು ಬರೆದ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. "ಜಗತ್ತಿಗೆ ಪ್ರೀತಿ, ಹೆಣ್ಣಿನ ಹಕ್ಕುಗಳು ಮತ್ತು ಮಾನವೀಯತೆಯ ಪಾಠ ಹೇಳಿಕೊಟ್ಟ ಅನೇಕರ ಕುಟುಂಬಗಳಲ್ಲೂ ಕೊನೆಗೆ ಉಳಿಯುವುದು ಇಂತಹ ಕಹಿ ಘಟನೆಗಳೇ. ಒಬ್ಬ ಮನುಷ್ಯ ಕೋಟ್ಯಂತರ ರೂಪಾಯಿ ಸಂಪಾದಿಸಿರಬಹುದು, ತಲೆಮಾರು ನೆನಪಿಡುವ ಹೆಸರು ಮಾಡಿರಬಹುದು. ಆದರೆ ಅವರು ತೀರಿಕೊಂಡ ಮೇಲೆ ಕುಟುಂಬ ನೆಮ್ಮದಿಯಾಗಿ ಇರಲು ಅದು ಗ್ಯಾರಂಟಿ ನೀಡುವುದಿಲ್ಲ. ಅವರು ಹೋದ ಮೇಲೆ ಮಕ್ಕಳು ಒಬ್ಬರನ್ನೊಬ್ಬರು ಅಪ್ಪಿಕೊಂಡರಾ ಅಥವಾ ಆಸ್ತಿಗಾಗಿ ಕಿತ್ತಾಡಿದರಾ ಎನ್ನುವುದೇ ಮುಖ್ಯವಾಗುತ್ತದೆ" ಎಂದು ಬರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಗಳು ಎಷ್ಟು ನಿಜವೋ ಗೊತ್ತಿಲ್ಲ, ಆದರೆ ಸಿನಿಮಾಗಳ ಮೂಲಕ ಕೌಟುಂಬಿಕ ಮೌಲ್ಯಗಳು ಮತ್ತು ಬಾಂಧವ್ಯದ ಮಹತ್ವವನ್ನು ಸಾರಿದ ಮಹಾನ್ ನಿರ್ದೇಶಕ ಭಾರತಿರಾಜಾ ಅವರ ಅಂತಿಮ ಪಯಣದ ಸುತ್ತ ಇಂತಹ ವಿವಾದಗಳು ಕೇಳಿಬರುತ್ತಿರುವುದು ಅವರ ಲಕ್ಷಾಂತರ ಅಭಿಮಾನಿಗಳಿಗೆ ತೀವ್ರ ಬೇಸರ ತಂದಿದೆ.













Click it and Unblock the Notifications