ಯಾರೂ ಲಂಚ ಕೊಡಬೇಡಿ, ನನ್ನ ಗಮನಕ್ಕೆ ತನ್ನಿ: ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಿಎಂ ಡಿಕೆಶಿ ಕರೆ
ಬೆಂಗಳೂರು: ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಾಣ ಮಾಡುವುದು ನಮ್ಮ ಸರ್ಕಾರದ ಮುಖ್ಯ ಗುರಿ. ತಳಮಟ್ಟದಿಂದ ವಿಧಾನಸೌಧದವರೆಗೆ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ಕಿತ್ತೊಗೆದು 'ಶೂನ್ಯ ಪರ್ಸೆಂಟ್' (0%) ಕಮಿಷನ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಶನಿವಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು (DC), ಎಸ್ಪಿ (SP), ಜಿಲ್ಲಾ ಪಂಚಾಯತ್ ಸಿಇಒ, ಡಿಎಫ್ಒ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಬರೋಬ್ಬರಿ 7 ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಿದ ಬಳಿಕ ಅವರು ಈ ಮಾಹಿತಿ ನೀಡಿದರು. ನಾವೆಲ್ಲರೂ 'ಟೀಮ್ ಕರ್ನಾಟಕ'ವಾಗಿ ಕೆಲಸ ಮಾಡೋಣ. ಸಮಸ್ಯೆ ಇರದಿದ್ದರೆ ಜನ ಕಚೇರಿಗೆ ಬರುವುದಿಲ್ಲ. ಸಮಸ್ಯೆಯೊಂದಿಗೆ ಬರುವ ಸಾರ್ವಜನಿಕರಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಚೇರಿ ಸಮಯಕ್ಕೆ ಹಾಜರಾತಿ ಕಡ್ಡಾಯ
ಎಲ್ಲ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಿಗ್ಗೆ 10 ಗಂಟೆಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕು. ಜಿಲ್ಲಾ ಕಚೇರಿಗಳಲ್ಲಿ ಅಧಿಕಾರಿಗಳು ಹಾಜರಾದ ಕೂಡಲೇ ಅವರ ಬಯೋಮೆಟ್ರಿಕ್ ಮೆಸೇಜ್ ನೇರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರವಾನೆಯಾಗುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಗ್ರಾಮ ಲೆಕ್ಕಿಗರಿಂದ ಹಿಡಿದು ಜಿಲ್ಲಾಧಿಕಾರಿಗಳವರೆಗೆ ಎಲ್ಲರೂ ತಮ್ಮ ಕೇಂದ್ರ ಕಚೇರಿಯಲ್ಲೇ ಇರಬೇಕು. ಅವರ ವಿಳಾಸ ಮತ್ತು ದೂರವಾಣಿ ಸಂಖ್ಯೆ ವೆಬ್ಸೈಟ್ಗಳಲ್ಲಿ ಸಾರ್ವಜನಿಕರಿಗೆ ಲಭ್ಯವಿರಬೇಕು ಎಂದರು.
ಯಾರೂ ಲಂಚ ಕೊಡಬೇಡಿ
ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಯಾವುದೇ ಕಚೇರಿಗಳಲ್ಲಿ ಸಾರ್ವಜನಿಕರು 10 ರೂಪಾಯಿಯನ್ನೂ ಲಂಚ ನೀಡಬಾರದು. ಇದರ ವಿರುದ್ಧ ದೂರು ನೀಡಲು ಪ್ರತಿ ಕಚೇರಿಯಲ್ಲೂ ಸಹಾಯವಾಣಿ ಸಂಖ್ಯೆಯನ್ನು ಪ್ರದರ್ಶಿಸಲಾಗುತ್ತದೆ. ನಾನೇ ಆಗಲಿ, ಸಚಿವರಾಗಲಿ ಅಥವಾ ಶಾಸಕರಾಗಲಿ ಕಾನೂನು ಬಾಹಿರ ಕೆಲಸ ಮಾಡಲು ಒತ್ತಡ ಹೇರಿದರೆ ಮಾತು ಕೇಳಬೇಡಿ, ಕೂಡಲೇ ನನಗೆ ಮಾಹಿತಿ ನೀಡಿ ಎಂದು ಸಿಎಂ ಖಡಕ್ ಸೂಚನೆ ನೀಡಿದರು.
ರಾಜ್ಯದ ಎಲ್ಲ ತಾಲೂಕು ಹಾಗೂ ಜಿಲ್ಲಾ ಕೇಂದ್ರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಈಗಿನಿಂದಲೇ ವರ್ತುಲ ರಸ್ತೆ (Ring Road) ಯೋಜನೆ ರೂಪಿಸಲು ಸೂಚಿಸಲಾಗಿದೆ. ಕೂಡಲೇ ರಸ್ತೆ ನಿರ್ಮಾಣ ಸಾಧ್ಯವಾಗದಿದ್ದರೂ, ಭವಿಷ್ಯದ ದೃಷ್ಟಿಯಿಂದ ಇದಕ್ಕಾಗಿ 'ರಸ್ತೆ ಗ್ರಿಡ್' ರೂಪಿಸಲು ನಿರ್ದೇಶನ ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಸದ್ಯ 964 ಶೂನ್ಯ ದಾಖಲಾತಿ ಶಾಲೆಗಳಿದ್ದು, 1ರಿಂದ 5 ಮಕ್ಕಳಿರುವ 3,542 ಶಾಲೆಗಳಿವೆ. ಈ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ತೀರ್ಮಾನ ಕೈಗೊಳ್ಳಲಾಗುವುದು. ಇದರೊಂದಿಗೆ ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ ಮುಂದಿನ ಒಂದು ತಿಂಗಳೊಳಗೆ ಎಲ್ಲ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ಹಾಗೂ ಪಠ್ಯಪುಸ್ತಕಗಳನ್ನು ಕಡ್ಡಾಯವಾಗಿ ವಿತರಿಸಲು ಗಡುವು ನೀಡಲಾಗಿದೆ ಎಂದು ಹೇಳಿದರು.
ಮಳೆ ಕೊರತೆ ಎದುರಿಸಲು ಮುಂಜಾಗ್ರತೆ
ರಾಜ್ಯದಲ್ಲಿ ಪ್ರಸ್ತುತ ಶೇ. 30ರಷ್ಟು ಮಳೆ ಕೊರತೆಯಾಗಿದ್ದು, 'ಎಲ್ ನಿನೋ' ಪ್ರಭಾವದ ಮುನ್ಸೂಚನೆ ಇದೆ. ಹೀಗಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆಯಾಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ರಸಗೊಬ್ಬರ ಪೂರೈಕೆಗಾಗಿ ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ರೈತರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಮೇವಿನ ಪೂರೈಕೆ ಹಾಗೂ ಹಾಸ್ಟೆಲ್ಗಳ ಆಹಾರ ಗುಣಮಟ್ಟ ತಪಾಸಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಡ್ರಗ್ಸ್ ಜಾಲ-ರೌಡಿಸಂ ನಿಗ್ರಹ
ಗಾಂಜಾ ಮತ್ತು ಡ್ರಗ್ಸ್ ಪೆಡ್ಲರ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ. ಪ್ರತಿ ಪೊಲೀಸ್ ಠಾಣೆಯಲ್ಲೂ 5 ಪೊಲೀಸರ ಪ್ರತ್ಯೇಕ ತಂಡ ರಚಿಸಿ ರೌಡಿಗಳ ನಿಗ್ರಹಕ್ಕೆ ಮತ್ತು ಸೈಬರ್ ಅಪರಾಧ ತಡೆಗೆ ಸೂಚಿಸಲಾಗಿದೆ. ನಕಲಿ ಫೈನಾನ್ಸ್ ಸ್ಕೀಂಗಳ ವಿರುದ್ಧ ಕಟ್ಟುನಿಟ್ಟಿನ ನಿಗಾ ಇಡಲು ಎಸ್ಪಿ ಹಾಗೂ ಡಿಸಿಗಳಿಗೆ ಗುಪ್ತಚರ ವಿಭಾಗ ಬಳಸಿಕೊಳ್ಳಲು ನಿರ್ದೇಶನ ನೀಡಲಾಗಿದೆ ಎಂದರು.
ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಪರಿಷ್ಕರಣೆ
ಗೃಹಲಕ್ಷ್ಮಿ ಯೋಜನೆಯಲ್ಲಿ ಕೆಲವರು ನಿಧನರಾಗಿದ್ದರೂ ಅವರ ಹೆಸರಿನಲ್ಲಿ ಬೇರೆಯವರು 100 ಕೋಟಿಗೂ ಅಧಿಕ ಹಣ ಪಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಒಂದೇ ಮನೆಯಲ್ಲಿ ಮೂರ್ನಾಲ್ಕು ಜನ ಯಜಮಾನಿಯರ ಹೆಸರಿರುವ ಪ್ರಕರಣಗಳೂ ಇವೆ. ಹೀಗಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಹಾಗೂ ನಕಲಿ ವಹಿವಾಟು ತಡೆಯಲು ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಶೀಘ್ರದಲ್ಲೇ ತರಲಾಗುವುದು. ಯಾರ ಯೋಜನೆಯನ್ನೂ ನಿಲ್ಲಿಸುವ ಉದ್ದೇಶ ಸರ್ಕಾರಕ್ಕಿಲ್ಲ, ಅರ್ಹರಿಗೆ ಮಾತ್ರ ತಲುಪಿಸುವುದು ನಮ್ಮ ಗುರಿ ಎಂದು ಸಿಎಂ ಸ್ಪಷ್ಟಪಡಿಸಿದರು.













Click it and Unblock the Notifications