ಕೊರೊನಾ ರೌದ್ರಾವತಾರದ ನಡುವೆ ಬಿಜೆಪಿ ವಿರುದ್ದ ಡಿ.ಕೆ.ಶಿವಕುಮಾರ್ ಸಿಂಹ ಘರ್ಜನೆ
ಕೆಪಿಸಿಸಿ ಅಧ್ಯಕ್ಷರಾಗಿ ನಿಯೋಜಿತರಾದ ಮೇಲೆ, ಪೂರ್ಣ ಪ್ರಮಾಣದಲ್ಲಿ ಡಿ.ಕೆ.ಶಿವಕುಮಾರ್ ಗೆ ಪಕ್ಷ ಸಂಘಟಿಸುವ ಕೆಲಸವನ್ನು ಮಾಡಲು ಸಾಧ್ಯವಾಗಿಲ್ಲ. ಅಧಿಕೃತವಾಗಿ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಡಿಕೆಶಿ ಇನ್ನು ಏರಬೇಕಷ್ಟೇ.
ಜೈಲು ಶಿಕ್ಷೆ ಅನುಭವಿಸಿ ಬಂದ ನಂತರ, ಸಮಯ ಸಂದರ್ಭ ಬಂದಾಗ, ಎಲ್ಲವನ್ನೂ ಇಂಚಿಂಚಾಗಿ ಬಿಚ್ಚಿಡುವೆ ಎಂದು ಹೇಳುತ್ತಲೇ ಬರುತ್ತಿರುವ ಡಿಕೆಶಿ, ಬಿಜೆಪಿ ಮುಖಂಡರು ಮತ್ತು ಸರಕಾರದ ವಿರುದ್ದ ಕಿಡಿಕಾರಿದ್ದಾರೆ.
ಕೊರೊನಾ ವಿಚಾರ ನಿಭಾಯಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲಗೊಂಡಿದೆ ಎಂದು ಹೇಳಿರುವ ಡಿಕೆಶಿ, ರಾಜಕೀಯ ಮಾಡಲು ಇದು ಸಮಯವಲ್ಲ ಎಂದಿದ್ದಾರೆ. ಎಲ್ಲವನ್ನೂ ಸಹಿಸಿಕೊಂಡು ಮೌನವಾಗಿ ಇರಬೇಕಾದ ಸಮಯವಿದು ಎಂದು ಹೇಳುತ್ತಲೇ ಬಿಜೆಪಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಕೊರೊನಾ ನಿಭಾಯಿಸುವಲ್ಲಿ ಯಡಿಯೂರಪ್ಪನವರ ಸರಕಾರ ಎಡವಿದೆ ಎಂದು ಹೇಳಿರುವ ಡಿಕೆಶಿ, ಕೆಪಿಸಿಸಿಯಿಂದ ಟಾಸ್ಕ್ ಫೋರ್ಸ್ ರಚನೆಯನ್ನು ಮಾಡಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದಲ್ಲಿ ವರದಿಯನ್ನು ಈಗಾಗಲೇ ಡಿಕೆಶಿ ಪಡೆದುಕೊಂಡಿದ್ದಾರೆ. ಬಿಜಿಪಿಗೆ ಮುಂದೈತೆ ಮಾರಿಹಬ್ಬ ಎಂದ ಡಿಕೆಶಿ:

ಕರ್ನಾಟಕ ಕಾಂಗ್ರೆಸ್, ರಿಲೀಫ್ ಫಂಡ್ ಆರಂಭಿಸುತ್ತಿದೆ
ರಾಷ್ಟ್ರೀಯ ಸ್ವಯಂಸೇವಕ ಸಂಘ ದೇಣಿಗೆ ಸಂಗ್ರಹಿಸುವ ಮತ್ತು ಕಾರ್ಯಕರ್ತರು ಊಟ ವಿತರಿಸುತ್ತಿರುವ ಬಗ್ಗೆ ಕಿಡಿಕಾರಿದ್ದ ಡಿಕೆಶಿ, "ಕರ್ನಾಟಕ ಕಾಂಗ್ರೆಸ್, ರಿಲೀಫ್ ಫಂಡ್ ಆರಂಭಿಸುತ್ತಿದೆ. ನಮ್ಮ ಪಕ್ಷದ ಎಲ್ಲಾ ಶಾಸಕರಿಗೆ ಒಂದು ಸೂಚನೆಯನ್ನು ನೀಡಲಾಗಿದೆ. ಕನಿಷ್ಠ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಲು ಸೂಚಿಸಿದ್ದೇವೆ. ಕಾರ್ಯಕರ್ತರೂ ಇದಕ್ಕೆ ದೇಣಿಗೆ ನೀಡಬಹುದು" ಎಂದು ಹೇಳಿದ್ದರು.

ಪಾಸ್ ಯಾವ ರೀತಿ ದುರ್ಬಳಕೆಯಾಗುತ್ತಿದೆ
"ಈಗಿನ ಸಂಕಷ್ಟವೆಲ್ಲಾ ಬಗೆಹರಿಯಲಿ, ಮಾನವೀಯತೆಗೆ ಬೆಲೆಕೊಡ ಬೇಕಾದ ಸಮಯವಿದು. ಕೊರೊನಾ ವಿಚಾರದಲ್ಲಿ ಸರಕಾರ ನಡೆದುಕೊಂಡ ರೀತಿಯನ್ನು ಇಂಚಿಂಚಾಗಿ ಬಯಲೆಗೆಳೆಯುವೆ. ಪೊಲೀಸರು ಏನು ಮಾಡಿದರು, ಪಾಸ್ ಯಾವ ರೀತಿ ದುರ್ಬಳಕೆಯಾಗುತ್ತಿದೆ ಎನ್ನುವುದನ್ನು ಜನರ ಮುಂದಿಡುವೆ" ಎಂದು ಡಿಕೆಶಿ ಹೇಳಿದ್ದಾರೆ.

ಪಡಿತರ ವಸ್ತುಗಳಿಗೆ ಬಿಜೆಪಿ ಮುಖಂಡರ ಭಾವಚಿತ್ರ
"ಸರಕಾರದ ಪ್ರಾಯೋಜಿತ ಪಡಿತರ ವಸ್ತುಗಳಿಗೆ ಬಿಜೆಪಿ ಮುಖಂಡರು ತಮ್ಮ ಭಾವಚಿತ್ರವನ್ನು ಅಳವಡಿಸಿಕೊಂಡು, ಇಂತಹ ಸಮಯದಲ್ಲೂ ರಾಜಕೀಯ ಮಾಡಿದರು. ಮಾತೆತ್ತಿದರೆ, ಮೋದಿಯ ಹಣ, ನಿರ್ಮಲಾ ಸೀತರಾಮನ್ ಹಣ ಎಂದು ಜನರಿಗೆ ಮಂಕುಬೂದಿ ಎರಚಿರುವ ಬಗ್ಗೆ ಎಲ್ಲಾ ದಾಖಲೆಗಳು ನಮ್ಮಲ್ಲಿವೆ" ಎಂದು ಡಿಕೆಶಿ ಗುಡುಗಿದ್ದಾರೆ.

ಬಿಜೆಪಿ ಮುಖಂಡರ ಬೇಜವಾಬ್ದಾರಿಯುತ ನಡೆ
"ಸರಕಾರ ತೆಗೆದುಕೊಂಡ ಕ್ರಮದ ಬಗ್ಗೆ ನನಗೆ ಅಸಮಾಧಾನವಿದೆ. ಹೈಟೆಕ್ ಯುಗವಿದು, ಆದರೂ ಕೇಂದ್ರ ಮತ್ತು ರಾಜ್ಯ ಸರಕಾರ ವಿಫಲಗೊಂಡಿದೆ. ಕೊಟ್ಟ ಮಾತಿನಂತೆ, ಸರಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ. ರಾಜ್ಯಾ ಮುಖ್ಯ ಕಾರ್ಯದರ್ಶಿಗಳಿಗೆ ಬಿಜೆಪಿ ಮುಖಂಡರ ಬೇಜವಾಬ್ದಾರಿಯುತ ನಡೆಯ ಬಗ್ಗೆ ವಿವರಿಸಿದ್ದೇನೆ" ಎಂದು ಡಿಕೆಶಿ ಹೇಳಿದ್ದಾರೆ.












Click it and Unblock the Notifications