ನ್ಯಾಷನಲ್ ಹೆರಾಲ್ಡ್ ಪ್ರಕರಣ: ಮತ್ತೆ ಇ.ಡಿ ವಿಚಾರಣೆಗೆ ಹಾಜರಾದ ಡಿ.ಕೆ. ಶಿವಕುಮಾರ್
ನವದೆಹಲಿ, ನವೆಂಬರ್ 14: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಸಮ್ಮನ್ಸ್ ನೀಡಿದ ಹಿನ್ನಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೋಮವಾರ ನವದೆಹಲಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
ಸೆಪ್ಟೆಂಬರ್ 19ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಡಿಕೆ ಶಿವಕುಮಾರ್ಗೆ ಸಮನ್ಸ್ ನೀಡಿತ್ತು. ಆದರೆ ಆ ಸಂದರ್ಭದಲ್ಲಿ ರಾಜ್ಯದಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದರಿಂದ ಅವರು ವಿಚಾರಣೆಗೆ ತೆರಳಿರಲಿಲ್ಲ. ಇದೀಗ ಸೋಮವಾರ ವಿಚಾರಣೆಗೆ ಹಾಜರಾಗಿದ್ದರು.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ, ನಾನು ಮೂರು ವಾರಗಳ ಸಮಯ ಕೇಳಿದ್ದೆ. ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ. ಇಂದೇ ಬರಬೇಕು ಎಂದು ಹೇಳಿದ್ದರಿಂದ ಉಜ್ಜಯನಿ ಮಹಾಕಾಲೇಶ್ವರ ದೇವಾಲಯದಿಂದ ನೇರವಾಗಿ ಇಲ್ಲಿಗೆ ಬಂದಿದ್ದೇನೆ. ಸಮನ್ಸ್ ಮತ್ತು ಜಾರಿ ನಿರ್ದೇಶಯನಾಲಯವನ್ನು ನಾವು ಗೌರವಿಸಬೇಕು. ವಿಚಾರಣೆಯಲ್ಲಿ ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದು ತಿಳಿಸಿದ್ದರು.

ಯಂಗ್ ಇಂಡಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಇಡಿ ನನಗೆ ಸಮನ್ಸ್ ನೀಡಿತ್ತು. ನಾನು ಅವರಿಗೆ ಕೆಲವು ದಾಖಲೆಗಳನ್ನು ಕಳುಹಿಸಿದ್ದೆ, ಆದರೆ ಅವರು ಅಷ್ಟಕ್ಕೆ ತೃಪ್ತರಾಗಿಲ್ಲ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಮತ್ತೊಮ್ಮೆ ಸಮನ್ಸ್ ನೀಡಿದ್ದರು ಆದರೆ ಅಂದು ನನಗೆ ಸಾಕಷ್ಟು ಕಾರ್ಯಕ್ರಗಳಿದ್ದರಿಂದ ನಾನು ವಿಚಾರಣೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಇಂದು ಮತ್ತೆ ಕರೆದಿದ್ದರು ಹಾಗಾಗಿ ಆಗಮಿಸಿದ್ದೇನೆ ಎಂದರು.
ಇನ್ನೂ ಟ್ರಸ್ಟ್ಗೆ ದೇಣಿಗೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದರಲ್ಲಿ ಮುಚ್ಚಿಡುವಂತದ್ದೇನಿಲ್ಲ, ಚಾರಿಟಬಲ್ ಟ್ರಸ್ಟ್ಗೆ ನಮ್ಮ ಕೈಲಾದಷ್ಟನ್ನು ದೇಣಿಗೆ ನೀಡಿದ್ದೇವೆ. ನಾನು ಸಾರ್ವಜನಿಕ ಜೀವನದಲ್ಲಿರುವುದರಿಂದ ಇದರಲ್ಲಿ ತಪ್ಪೇನಿಲ್ಲ ಎಂದು ಭಾವಿಸುತ್ತೇನೆ. ಆದರೆ ಇದಕ್ಕೆ ನಾನೊಬ್ಬನೆ ದೇಣಿಗೆ ನೀಡಿಲ್ಲ, ನನ್ನಂತೆ ಯಂಗ್ ಇಂಡಿಯಾಗೆ ಶ್ರೇಯಸ್ಸು ಬಯಸುವ ಅನೇಕ ಮಂದಿ ನೀಡಿದ್ದಾರೆ ಎಂದರು.
ಯಂಗ್ ಇಂಡಿಯಾ ಸಂಸ್ಥೆಗೆ ಡಿಕೆ ಶಿವಕುಮಾರ್ 25 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಬಗ್ಗೆ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇವರಷ್ಟೇ ಅಲ್ಲದೆ ಕಾಂಗ್ರೆಸ್ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನು ಕೂಡ ಇತ್ತೀಚೆಗೆ ವಿಚಾರಣೆ ನಡೆಸಿತ್ತು.

ಬೇಸರ ಹೊರ ಹಾಕಿದ್ದ ಡಿಕೆಶಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ದಾಖಲೆ ಒದಗಿಸಿದರೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪದೇ ಪದೇ ಯಾಕೆ ಕರೆದು ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ ನಾನು ನಮ್ಮ ರಾಷ್ಟ್ರೀಯ ಅಧ್ಯಕ್ಷರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದೇನೆ, ವಿಚಾರಣೆಗೆ ಹಾಜರಾಗುವ ಬಗ್ಗೆ ಯೋಚಿಸುತ್ತೇನೆ ಎಂದಿದ್ದ ಅವರು, ಈಗ ವಿಚಾರಣೆಗೆ ಹೋಗುವುದಿಲ್ಲ ಎಂದು ಹೇಳಿದ್ದರು.
ಅವರು ಕೇಳಿದ ಕೆಲವು ದಾಖಲಾತಿಗಳನ್ನು ಅವರಿಗೆ ಕಳಿಸುತ್ತೇವೆ. ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಒಂದೇ ವಿಚಾರಕ್ಕೆ ಎರಡು ಪ್ರತ್ಯೇಕ ಪ್ರಕರಣ ದಾಖಲು ಮಾಡಿದ್ದಾರೆ. ಆ ರೀತಿ ಮಾಡಲು ಬರುವುದಿಲ್ಲ. ಈ ಬಗ್ಗೆ ಆಕ್ಷೇಪಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದೇನೆ. ನಾನು ಕಾನೂನು ಹೋರಾಟವನ್ನು ಮುಂದುವರಿಸುತ್ತಿದ್ದೇನೆ. ಪದೇ ಪದೇ ಸಮನ್ಸ್ ನೀಡಿ ನನ್ನನ್ನು ಏಕೆ ಹಿಂಸಿಸುತ್ತಿದ್ದಾರೆಂದು ನನಗೆ ತಿಳಿದಿಲ್ಲ ಎಂದು ನವೆಂಬರ್ 7 ರಂದು ಬೆಂಗಳೂರಿನಲ್ಲಿ ಆಕ್ರೋಶ ಹೊರ ಹಾಕಿದ್ದರು.












Click it and Unblock the Notifications