Kiran More: ವೈಭವ್ ಸೂರ್ಯವಂಶಿ ಭಾರತೀಯ ಕ್ರಿಕೆಟ್ಗಾಗಿ ದೇವರ ಸೃಷ್ಟಿ: ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್
Vaibhav Sooryavanshi: ಐಪಿಎಲ್ 2026ರಲ್ಲಿ 15 ವರ್ಷದ ವೈಭವ್ ಸೂರ್ಯಸೂರ್ಯವಂಶಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿದ್ದಾರೆ. ಎದುರಾಳಿ ಬೌಲರ್ಗಳು ಯಾರೇ ಆಗಿರಲಿ ಅವರನ್ನು ಮನಬಂದಂತೆ ದಂಡಿಸಿ ರನ್ಗಳ ಮಳೆ ಹರಿಸುವ ಸಾಮರ್ಥ್ಯ ಹೊಂದಿರುವ ಉದಯೋನ್ಮುಖ ಪ್ರತಿಭೆ ಇವರು. ಇದೀಗ ವೈಭವ್ ಅಮೋಘ ಪ್ರದರ್ಶನದ ಕುರಿತು ಭಾರತದ ಮಾಜಿ ಕ್ರಿಕೆಟಿಗ ಕಿರಣ್ ಮೋರೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದು ಇದೀಗ ಎಲ್ಲಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದಲ್ಲದೆ, ಚರ್ಚೆಗೂ ಕಾರಣವಾಗಿದೆ.
ಕಿರಣ್ ಮೋರೆ ಅವರು ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಅಬ್ಬರಿಸುತ್ತಿರುವ ವೈಭವ್ ಸೂರ್ಯವಂಶಿ ಅವರನ್ನು ಸಚಿನ್ ತೆಂಡೂಲ್ಕರ್ಗೆ ಹೋಲಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡವು ಪ್ಲೇಆಫ್ ಹಂತಕ್ಕೆ ತಲುಪಲು ಇವರ ಪ್ರದರ್ಶನವೇ ಪ್ರಮುಖ ಕಾರಣವಾಗಿದೆ ಅಂದ್ರೆ ತಪ್ಪಾಗಲಾರದು. ಈ ಬಾರಿಯ ಐಪಿಎಲ್ನ ಒಟ್ಟು 13 ಇನಿಂಗ್ಸ್ಗಳಿಂದ 579 ರನ್ಗಳನ್ನು ಕಲೆಹಾಕಿದ್ದಾರೆ. ಸದ್ಯ 236.32 ಸ್ಟ್ರೈಕ್ ರೇಟ್ ಹೊಂದಿದ್ದು, ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಜೊತೆಗೆ ಆರೆಂಜ್ ಕ್ಯಾಪ್ ರೇಸ್ನಲ್ಲಿ ಕೂಡ ಇದ್ದಾರೆ.

ಸ್ಟಾರ್ ಬೌಲರ್ಗಳ ವಿರುದ್ಧ ದಂಡಯಾತ್ರೆ
ವೈಭವ್ ಸೂರ್ಯವಂಶಿ ಅವರು ಈ ಋತುವಿನ ಐಪಿಎಲ್ನ ಅತ್ಯಂತ ಪ್ರಭವಶಾಲಿ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಅನುಭವಿ ಮತ್ತು ವಿಶ್ವದರ್ಜೆಯ ಬೌಲರ್ಗಳನ್ನು ಲೀಲಾಜಾಲವಾಗಿ ಎದುರಿಸುತ್ತಿರುವ ವೈಭವ್ ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈಯುತ್ತಿದ್ದಾರೆ. ಎಂತಹ ಘಟಾನುಘಟಿ ಬೌಲರ್ಗಳಿದ್ದರೂ ಎದೆಗುಂದದೆ ಬ್ಯಾಟ್ ಬೀಸುತ್ತಿರುವ ಈ 15 ವರ್ಷದ ಬಾಲಕನ ಆಟ ಕ್ರಿಕೆಟ್ ದಿಗ್ಗಜರು ಹಾಗೂ ಕ್ರೀಡಾಭಿಮಾನಿಗಳನ್ನು ಬೆರಗುಗೊಳಿಸಿದೆ.
'ನಮಗೆ ವೈಭವ್ ಸಿಕ್ಕಿರುವುದು ಅದೃಷ್ಟ'
'ಭಾರತ ತಂಡಕ್ಕೆ ಬಂದ ಆರಂಭದಲ್ಲೇ ಸಚಿನ್ ತೆಂಡೂಲ್ಕರ್ ಅವರು ಶ್ರೇಷ್ಠ ಬೌಲರ್ಗಳ ವಿರುದ್ಧ ಬ್ಯಾಟಿಂಗ್ ಮಾಡುವುದನ್ನು ಮೊದಲು ನೋಡಿದಾಗಲೇ ಅವರು ಏನೋ ಒಂದು ವಿಶೇಷತೆ ಹೊಂದಿದ್ದಾರೆಂದು ತಕ್ಷಣವೇ ಅರ್ಥವಾಗಿತ್ತು. ಈಗ ವೈಭವ್ ಸೂರ್ಯವಂಶಿ ವಿಷಯದಲ್ಲೂ ನನಗೆ ಹಾಗೆಯೇ ಅನಿಸುತ್ತಿದೆ. ಅವರು ಅದ್ಭುತ, ವಿಶೇಷವಾದ ಪ್ರತಿಭೆ. ನಮಗೆ ಅಂತಹ ಒಬ್ಬ ಆಟಗಾರ ಸಿಕ್ಕಿರುವುದು ಸಂತೋಷದ ಸಂಗತಿ. ಅವರು ದೇಶಕ್ಕೆ ದೊಡ್ಡ ಕೀರ್ತಿಯನ್ನು ತರಲಿದ್ದಾರೆ. ಅವರ ಮೇಲೆ ಒತ್ತಡ ಹೇರಬೇಡಿ, ಸ್ವತಂತ್ರವಾಗಿ ಆಡಲು ಬಿಡಿ. ಈ ಕ್ರೀಡೆಗಾಗಿ ದೇವರು ಅವರನ್ನು ಬಹಳ ಚೆನ್ನಾಗಿ ಸಿದ್ಧಪಡಿಸಿ ಕಳುಹಿಸಿದ್ದಾನೆ,' ಎಂದು ಹೇಳಿದ್ದಾರೆ.
ಭಾರತ 'ಎ' ತಂಡದಲ್ಲಿ ಸ್ಥಾನ ಪಡೆದ ವೈಭವ್
ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಸರಣಿಗಾಗಿ ಭಾರತ 'ಎ' ತಂಡವನ್ನು ಘೋಷಿಸಲಾಗಿದ್ದು, ಅದರಲ್ಲಿ ವೈಭವ್ ಸೂರ್ಯವಂಶಿ ಸ್ಥಾನ ಪಡೆದಿದ್ದಾರೆ. ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು, ಸೂರ್ಯವಂಶಿ ಅವರ ಪ್ರದರ್ಶನವನ್ನು ಶ್ಲಾಘಿಸಿದರು. ಆದರೆ ತಂಡದ ಆಯ್ಕೆಯ ಆದ್ಯತೆಯ ಕ್ರಮದಲ್ಲಿ ಯಶಸ್ವಿ ಜೈಸ್ವಾಲ್ ಅವರಿಗಿಂತ ಸೂರ್ಯವಂಶಿ ಸ್ವಲ್ಪ ಕೆಳಗಿದ್ದಾರೆ ಎಂಬ ಸುಳಿವನ್ನು ನೀಡಿದರು. 'ಅನುಭವ ಮತ್ತು ಪ್ರಸ್ತುತ ಫಾರ್ಮ್ ಆಧಾರದ ಮೇಲೆ ಯಶಸ್ವಿ ಜೈಸ್ವಾಲ್ ಅವರಿಗೆ ಮೊದಲ ಆದ್ಯತೆ ನೀಡಲಾಗುವುದು. ಸೂರ್ಯವಂಶಿ ಅವರಿಗೆ ಇದು ಕಲಿಕೆಗೆ ದೊಡ್ಡ ವೇದಿಕೆಯಾಗಲಿದೆ,' ಎಂದು ಹೇಳಿದ್ಧಾರೆ.
ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ
ಈ ಬಾರಿಯ ಐಪಿಎಲ್ ಸೀಸನ್ನಲ್ಲಿ ವೈಭವ್ ಸೂರ್ಯವಂಶಿ ಈಗಾಗಲೇ ಒಂದು ಶತಕ ಮತ್ತು ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ಒಂದೇ ಸೀಸನ್ನಲ್ಲಿ ಅವರು ಬರೋಬ್ಬರಿ 53 ಸಿಕ್ಸರ್ಗಳನ್ನು ಬಾರಿಸುವ ಮೂಲಕ ಐಪಿಎಲ್ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಆಟಗಾರ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಸೂರ್ಯವಂಶಿ ಸಾಧನೆ
* ಒಟ್ಟು ಪಂದ್ಯಗಳು: 31
* ಒಟ್ಟು ರನ್ಗಳು: 1280
* ಬ್ಯಾಟಿಂಗ್ ಸರಾಸರಿ: 42.66
* ಸ್ಟ್ರೈಕ್ ರೇಟ್: 217.68
* ಶತಕ: 04
* ಅರ್ಧಶತಕ: 04












Click it and Unblock the Notifications