ಅಕ್ಕಿ ಬದಲು ಹಣ ಕೊಡಲು ಸರ್ಕಾರ ನಿರ್ಧಾರ; 340 ರೂಪಾಯಿ ಕೊಡಿ,170 ರೂಪಾಯಿ ಅಲ್ಲ: ಎಸ್.ಮುನಿಸ್ವಾಮಿ
ಕೋಲಾರ,ಜೂನ್ 29: ಕಾಂಗ್ರೆಸ್ ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆಯಲ್ಲಿ ಮೋದಿ ಅವರ ಮೇಲೆ ಗೂಬೆ ಕೂಸಿರಿ ಇವರ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ ಎಂದು ಕೋಲಾರ ಸಂಸದ ಎಸ್ ಮುನಿಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕೋಲಾರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಕ್ಕಿ ವಿತರಣೆ ಬದಲು ಹಣ ಕೊಡಲು ಸರ್ಕಾರ ನಿರ್ಧರಿಸಿದ್ದು, 340 ರೂಪಾಯಿ ಹಾಕಬೇಕು 170 ರೂಪಾಯಿ ಅಲ್ಲ.
ಅದು ಕೊಡೊವರೆಗು ನಾವು ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಈ ಹಿಂದೆಯೂ ಮುಖ್ಯಮಂತ್ರಿಗಳಾಗಿದ್ರು, ಈಗಲೂ ಮುಖ್ಯಮಂತ್ರಿಗಳಾಗಿದ್ದಾರೆ. ಅವರು ತುಂಬ ಬುದ್ದಿವಂತರು ಎಂದು ನಾನು ತಿಳಿದಿದ್ದೆ. ಕಾಂಗ್ರೆಸ್ ನ ಪ್ರಣಾಳಿಕೆಗಳನ್ನ ಕಾಂಗ್ರೆಸ್ ಮಾಡಬೇಕು, ಬಿಜೆಪಿ ಅವರು ಅಲ್ಲ. ಸೋನಿಯಾ ಗಾಂಧಿ , ರಾಹುಲ್ ಗಾಂಧಿ, ಸುರ್ಜೇವಾಲಾ ಅವರನ್ನ ಕೇಳಿ ಮಾತು ಕೊಟ್ಟಿದ್ದು, ಅವರನ್ನ ಹೋಗಿ ಕೇಳಬೇಕು. ಮೋದಿ ಅವರನ್ನ ಕೇಳುವುದು ಅಲ್ಲ, ಮೋದಿ ಅವರನ್ನ ಕೇಳಿ ಮಾತು ಕೊಟ್ಟಿದ್ರಾ ಎಂದು ಸಿದ್ದರಾಮಯ್ಯ ಅವರನ್ನ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರು ಬಿಟ್ಟಿ ಭಾಗ್ಯಗಳು ಹೇಳಿ ಜನರನ್ನ ದಾರಿ ತಪ್ಪಿಸುತ್ತಿದ್ದಾರೆ. ಮೋದಿ ಅವರ ಮೇಲೆ ಗೂಬೆ ಕೂಸಿರಿ ಇವರ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ. ತಮಿಳುನಾಡು, ಆಂದ್ರ ಸೇರಿದಂತೆ ಕೆಲ ಸರ್ಕಾರಗಳು ಉಚಿತ ಎಂದು ಕೊಟ್ಟು ಅಧೋಗತಿಗೆ ಹೋಗಿದೆ. ನಿಮ್ಮ ಆಸ್ತಿ ಎಷ್ಟಿತ್ತೊ ಅಷ್ಟೆ ಕಾಲು ಚಾಚಬೇಕಿತ್ತು ಎಂದು ಹೇಳಿದರು.
40% ಕಮಿಷನ್ ತನಿಖೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ವಾಚ್ ಕೊಟ್ಟದ್ದು, ವಿಧಾನ ಸೌಧದಲ್ಲಿ ಹಣ ಸಿಕ್ಕಿದ್ದು, ಅರ್ಕಾವತಿ ಹಗರಣ ಎಲ್ಲವನ್ನ ತನಿಖೆ ಮಾಡಲಿ. ಭ್ರಷ್ಟಾಚಾರದ ಪಿತಾಮಹ ಎಂದರೆ ಅದು ಕಾಂಗ್ರೆಸ್ ಪಕ್ಷ. 60% ಕಮಿಷನ್ ಕಾಂಗ್ರೇಸ್ ಆಗಿದೆ ಎಂದು ಕಾಂಟ್ರಾಕ್ಟರ್ ಗಳೇ ಹೇಳುತ್ತಿದ್ದಾರೆ. 60% ಕಮಿಷನ್ ತೆಗೆದುಕೊಳ್ಳೋದಕ್ಕೆ ಸುರ್ಜೇವಾಲ ಕರೆದು ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದಾರೆ. ನೀವು ಸತ್ಯ ಹರಿಶ್ಚಂದ್ರರ ತುಂಡಲ್ಲ ಎಂದರು.
ಕಾಂಗ್ರೆಸ್ ನಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಮಾತನಾಡಿ, ಕೋಲಾರದಲ್ಲಿ ನಿಷ್ಟಾವಂತರಾಗಿ ಡಿಸಿ, ಸಿಇಓ ಕೆಲಸ ಮಾಡ್ತಿದ್ರು.
ಅವರೆಲ್ಲರನ್ನ ವರ್ಗಾವಣೆ ಮಾಡಿದ್ದಾರೆ. ಒಂದು ಸ್ಥಾನಕ್ಕೆ ನಾಲ್ಕು ಜನರ ಹೆಸರನ್ನ ಪ್ರಸ್ತಾಪಿಸುತ್ತಿದ್ದಾರೆ. ಈ ಮೂಲಕ ಪೋಸ್ಟಿಂಗ್ ಗೆ ಡಿಮ್ಯಾಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ಪ್ರತಿಯೊಂದು ಇಲಾಖೆಯಲ್ಲೂ ವರ್ಗಾವಣೆ ಮಾಡಿ ಅವರಿಂದ ದುಡ್ಡು ಮಾಡಿಕೊಳ್ಳಲು ಮುಂದಾಗಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಆಯಸ್ಸು ಇಲ್ಲ, ಜನ ಕಾಂಗ್ರೆಸ್ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಒಂದು ದೇಶ ಒಂದು ಕಾನೂನು ವಿಚಾರವಾಗಿ ಮಾತನಾಡಿ, ಇಸ್ಲಾಮಿಕ್ ಸಂಘಟನೆಯನ್ನ ಹಾಗೂ ಕಾಂಗ್ರೆಸ್ ಪಕ್ಷವನ್ನ ಕೇಳಿಕೊಂಡು ಕಾನೂನು ತರುವ ಸ್ಥಿತಿಯಲ್ಲಿ ನಾವಿಲ್ಲ. ದೇಶಕ್ಕೆ ಒಳ್ಳೆಯದಾಗುವ ನಿಟ್ಟಿನಲ್ಲಿ ಅವರವರ ಪ್ರತಿಕ್ರಿಯೆ ತಿಳಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರವರ ಅನಿಸಿಕೆಗಳನ್ನ ತಿಳಿಸುವುದಕ್ಕೆ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಜನರ ಸಲಹೆಗಳನ್ನ ನೋಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಕಾಂಗ್ರೇಸ್ ಪಕ್ಷ, ಇಸ್ಲಾಮಿಕ್ ಸಂಘಟನೆಗಳನ್ನ ಕೇಳುವಂತಹ ಪರಿಸ್ಥಿತಿ ನಮಗೆ ಇಲ್ಲ ಎಂದರು.












Click it and Unblock the Notifications