ಕೊಡಗಿನ ಕುಟ್ಟಪ್ಪ ಸಾವು: ಆಕಸ್ಮಿಕವೋ, ಪೂರ್ವ ನಿಯೋಜಿತವೋ?
ಮಡಿಕೇರಿ, ನ. 10: ಮಡಿಕೇರಿ ವಿಶ್ವ ಹಿಂದೂ ಪರಿಷತ್ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪ ಅವರು ಸಾವು ಕೊಡಗಿನ ಶಾಂತಿ ಕದಡಿದೆ. ಟಿಪ್ಪು ಸುಲ್ತಾನ್ ಆಚರಣೆ ಪರ ಹಾಗೂ ವಿರುದ್ಧ ನಡೆದ ಪ್ರತಿಭಟನೆ, ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದೆ. ಪೊಲೀಸರ ಲಾಠಿ ಚಾರ್ಜ್, ಅಶ್ರುವಾಯು ಸಿಡಿತದ ನಡುವೆ ಇಬ್ಬರ ದುರ್ಮರಣವನ್ನು ಕಾವೇರಿ ನಾಡು ಕಂಡಿದೆ.
ಕೊಡಗಿನ ಕುಟ್ಟಪ್ಪ ಅವರ ಸಾವು ಆಕಸ್ಮಿಕವೋ, ಪೂರ್ವ ನಿಯೋಜಿತವೋ? ಎಂಬ ಪ್ರಶ್ನೆ ಕೇಳಿ ಬರುವ ವೇಳೆಗೆ ರಾಜು ಎಂಬಾತದ ಮರಣ ವಾರ್ತೆ ಬಂದಿದೆ. [ಕೊಡಗು: ಶಾಂತಿ ಕಾಪಾಡುವಂತೆ ಪರಮೇಶ್ವರ ಮನವಿ]
ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ವಿರೋಧಿಸಿ ಬಿಜೆಪಿ ಕೊಡಗು ಜಿಲ್ಲಾ ಬಂದ್ ಗೆ ಕರೆ ನೀಡಿತ್ತು. ಮಡಿಕೇರಿಯ ತಿಮ್ಮಪ್ಪ ಸರ್ಕಲ್ ನಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನಾ ಮೆರವಣಿಗೆ ನಡೆಸುವ ವೇಳೆಗೆ ಟಿಪ್ಪು ಪರ ಇರುವ ಗುಂಪುಗಳು ಅಲ್ಲಿಗೆ ಬಂದಿವೆ. [ಬೆಂಗಳೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಿ: ಕಾರ್ನಾಡ್]
ಎರಡು ಗುಂಪುಗಳ ನಡುವೆ ಘರ್ಷಣೆ ಶುರುವಾಗುತ್ತಿದ್ದಂತೆ ಪೊಲೀಸರು ತಮ್ಮ ಕರ್ತವ್ಯ ನಿರ್ವಹಣೆಗೆ ಮುಂದಾಗಿದ್ದಾರೆ. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಿದ್ದರೂ ಕುಶಾಲನಗರದಿಂದ ಬಂದ ಪ್ರತಿಭಟನಾ ಮೆರವಣಿಗೆ ಜತೆ ಇದ್ದ ವಿಶ್ವ ಹಿಂದೂ ಪರಿಷತ್ ನ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪ ಅವರು ಗಲಾಟೆಯಿಂದ ತಪ್ಪಿಸಿಕೊಳ್ಳಲು ಹೋಗಿ ಗೋಡೆಯಿಂದ ಕೆಳಗೆ ಬಿದ್ದು ತಲೆಗೆ ಪೆಟ್ಟು ತಿಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅದರೆ, ಇದೆಲ್ಲವೂ ಪೂರ್ವ ನಿಯೋಜಿತ ಕೃತ್ಯ ಎಂದು ಬಿಜೆಪಿ ಆರೋಪಿಸಿದೆ.

ಡಿಎಸ್ ಕುಟ್ಟಪ್ಪ ಅವರ ಸಾವು
ವಿಶ್ವ ಹಿಂದೂ ಪರಿಷತ್ ನ ಸಂಘಟನಾ ಕಾರ್ಯದರ್ಶಿ 62 ವರ್ಷ ವಯಸ್ಸಿನ ಡಿಎಸ್ ಕುಟ್ಟಪ್ಪ ಅವರು ಅಸಲಿಗೆ ಈ ಪ್ರತಿಭಟನೆಗಾಗಿ ಮಡಿಕೇರಿಗೆ ಬಂದಿರಲಿಲ್ಲ. ಕುಶಾಲನಗರದಿಂದ ಸಂಬಂಧಿಕರೊಬ್ಬರ ಮದುವೆ ಸಮಾರಂಭಕ್ಕೆ ಆಗಮಿಸಿದ್ದರು. ತಿಮ್ಮಪ್ಪ ಸರ್ಕಲ್ ನಲ್ಲಿ ನಡೆಯುತ್ತಿದ್ದ ಮೆರವಣಿಗೆಯನ್ನು ನೋಡಲು ಗೋಡೆ ಹತ್ತಿ ನಿಂತಿದ್ದರು. ಆಯ ತಪ್ಪಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಒಂದು ಕಥೆ ಹೇಳಲಾಗುತ್ತಿದೆ.

ಇದು ಪೂರ್ವ ನಿಯೋಜಿತ ಕೊಲೆ
ಮಡಿಕೇರಿ ವಿಶ್ವ ಹಿಂದೂ ಪರಿಷತ್ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪ ಸಾವು ಖಂಡನೀಯ. ಇದು ಪೂರ್ವ ನಿಯೋಜಿತ ಕೊಲೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲ್ಲಲಾಗಿದೆ. ಕೇರಳದಿಂದ ಬಂದ ಗುಂಪು ಈ ಕೃತ್ಯ ಎಸಗಿದೆ. ಇದಕ್ಕೆ ತಕ್ಕ ಉತ್ತರ ಕೊಡುತ್ತೇವೆ ಎಂದ ಬಿಜೆಪಿ ಶಾಸಕ ಕೆಜಿ ಬೋಪಯ್ಯ ಪ್ರತಿಕ್ರಿಯಿಸಿದ್ದಾರೆ.

ಕುಟ್ಟಪ್ಪ ಅವರದ್ದು ಆಕಸ್ಮಿಕ ಸಾವು
ಕುಟ್ಟಪ್ಪ ಅವರು ಓಡುವಾಗ ಬಿದ್ದು ಸತ್ತಿರುವುದು. ಟಿಪ್ಪು ಜಯಂತಿ ದಿನವೇ ಬಂದ್ ಕರೆದಿರುವುದು ತಪ್ಪು, ಸರ್ಕಾರದ ತಪ್ಪಿಲ್ಲ. ಕೋಮುವಾದಿಗಳು ಪ್ರತಿಭಟನೆ ನಡೆಸುವ ಬಗ್ಗೆ ಗೊತ್ತಿತ್ತು.ಜವಾಬ್ದಾರಿಯನ್ನು ಬಂದ್ ಕರೆದವರೇ ಹೊತ್ತುಕೊಳ್ಳಬೇಕಾಗುತ್ತದೆ. ಕಾನೂನು ಉಲ್ಲಂಘನೆ ಮಾಡಿದವರು ಯಾರು, ಕೋಮು ಸಂಘರ್ಷೆಗೆ ಕಾರಣ ಯಾರು ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಎಚ್ ಡಿ ದೇವೇಗೌಡ ಹಾಗೂ ಜೆಡಿಎಸ್
ರಾಜಕೀಯ ಕಾರಣಕ್ಕಾಗಿ ಈ ಘಟನೆ ನಡೆದಿದೆ. ದೇಶದ ಪ್ರಗತಿಗೆ ಮಾರಕ. ನಾವು ಪ್ರತಿವರ್ಷ ಆಚರಣೆ ಮಾಡುತ್ತಾ ಬಂದಿದ್ದೇವೆ.ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದಾರೆ.
ವ್ಯಕ್ತಿಯ ಸಾವು ಬೇಸರದ ಸಂಗತಿ, ಅದರೆ, ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ತಪ್ಪಲ್ಲ, ಜೆಡಿಎಸ್ ಹಲವಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ. ಟಿಪ್ಪು ಬಗ್ಗೆ ಗೊತ್ತಿಲ್ಲದಿದ್ದರೆ ಇತಿಹಾಸದ ಪುಸ್ತಕ ತೆಗೆದು ಓದಲಿ.- ಜಮೀರ್ ಅಹ್ಮದ್.

ಮೃತರ ಕುಟುಂಬಕ್ಕೆ 25 ಲಕ್ಷ ರು
ಮಡಿಕೇರಿ ವಿಶ್ವ ಹಿಂದೂ ಪರಿಷತ್ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪ ಅವರ ಸಾವಿನ ಹೊಣೆಯನ್ನು ಸರ್ಕಾರ ಹೊತ್ತುಕೊಳ್ಳಬೇಕು. ಮೃತರ ಕುಟುಂಬಕ್ಕೆ 25 ಲಕ್ಷ ರು ಪರಿಹಾರ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.












Click it and Unblock the Notifications