ಸರ್ಕಾರದ ನೂತನ ಕೈಗಾರಿಕಾ ನೀತಿಯಲ್ಲೇನಿದೆ?
ಬೆಂಗಳೂರು, ಸೆ.12 : ಕರ್ನಾಟಕ ಸರ್ಕಾರ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತರಲು ಮುಂದಾಗಿದ್ದು, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅಂತಿಮ ಒಪ್ಪಿಗೆಯನ್ನು ಪಡೆದಿದೆ. 5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಗುರಿಯನ್ನು ನೂತನ ಕೈಗಾರಿಕಾ ನೀತಿ ಹೊಂದಿದೆ.
ಗುರುವಾರ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಅವರು ಕರ್ನಾಟಕ ಕೈಗಾರಿಕಾ ನೀತಿ 2014-2019ರ ಬಗ್ಗೆ ಮಾಹಿತಿ ನೀಡಿದರು. 15 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ನೂತನ ಕೈಗಾರಿಕಾ ನೀತಿ ಹೊಂದಿದೆ ಎಂದು ತಿಳಿಸಿದರು.

ಎರಡು ವಾರಗಳಲ್ಲಿ ಕೈಗಾರಿಕಾ ನೀತಿಯ ಕರಡನ್ನು ಸಿದ್ಧಪಡಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಹೊಸ ನೀತಿಯ ಅನುಷ್ಠಾನದಿಂದ ನಿವ್ವಳ ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಶೇ 20 ರಷ್ಟು ಹೆಚ್ಚಳ ಸಾಧಿಸುವ ಗುರಿ ಇದೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪ ಸಂಖ್ಯಾತ ಸಮುದಾಯದ ಜನರಿಗೂ ಕೈಗಾರಿಕೆ ಸ್ಥಾಪಿಸಲು ಉತ್ತೇಜನ ನೀಡಲಾಗುತ್ತದೆ. [ಕೈಗಾರಿಕಾ ನೀತಿಗೆ ಅಸ್ತು ಎಂದ ಸಚಿವ ಸಂಪುಟ]
ಹೊಸ ನೀತಿಯಲ್ಲಿ ಹೈದರಾಬಾದ್-ಕರ್ನಾಟಕ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕೈಗಾರಿಕಾ ಅಭಿವೃದ್ಧಿಯ ಸದ್ಯದ ಸ್ಥಿತಿ ಆಧರಿಸಿ ತಾಲೂಕುಗಳನ್ನು ಆರು ವಲಯಗಳಾಗಿ ವಿಂಗಡಿಸಲಾಗುತ್ತದೆ ಎಂದು ಸಚಿವರ ಜಯಚಂದ್ರ ಅವರು ಹೇಳಿದ್ದಾರೆ. ನೂತನ ಕೈಗಾರಿಕಾ ನೀತಿಯಲ್ಲಿ ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಲ್ಲಿನ ಹೂಡಿಕೆ ಪ್ರಮಾಣವನ್ನು ಶೇ 50ರಿಂದ ಶೇ 100ರವರೆಗೆ ಹೆಚ್ಚಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಸಚಿವರು ವಿವರಣೆ ನೀಡಿದ್ದಾರೆ.
ಜಮೀನು ಕಳೆದುಕೊಂಡವರಿಗೆ ಪರಿಹಾರ : ಕೈಗಾರಿಕೆಗಳಿಗೆ ಭೂಮಿ ನೀಡುವ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವಂತೆ ಹೂಡಿಕೆದಾರರ ಮನವೊಲಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಸ್ಥಾಪನೆಯಾಗುವ ಎಲ್ಲಾ ಉದ್ದಿಮೆಗಳಲ್ಲಿ ಸಿ ಮತ್ತು ಡಿ ಗುಂಪಿನ ಉದ್ಯೋಗಳನ್ನು ಸ್ಥಳೀಯರಿಗೆ ನೀಡುವಂತೆ ಷರತ್ತು ವಿಧಿಸುವ ಯೋಚನೆಯೂ ರಾಜ್ಯ ಸರ್ಕಾರದ ಮುಂದಿದೆ ಎಂದು ಜಯಚಂದ್ರ ಹೇಳಿದ್ದಾರೆ.
ಮಹಿಳೆಯರಿಗೆ ಕೈಗಾರಿಕಾ ಪ್ರದೇಶ ಮೀಸಲು : ನೂತನ ಕೈಗಾರಿಕಾ ನೀತಿ ಅನ್ವಯ ಹಾರೋಹಳ್ಳಿ ಮತ್ತು ಹುಬ್ಬಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಮಹಿಳಾ ಉದ್ದಿಮೆಗಳಿಗೆ ಭೂಮಿ ನೀಡುವ ಪ್ರಸ್ತಾವನೆಯೂ ಇದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಭೂ ಬ್ಯಾಂಕ್ನಲ್ಲಿರುವ ಭೂಮಿಯನ್ನು ಸರ್ಕಾರ ಇದಕ್ಕಾಗಿ ಬಳಸಿಕೊಳ್ಳಲಿದೆ.
ಅನಿವಾಸಿ ಕನ್ನಡಿಗರಿಗೆ ಉತ್ತೇಜನ : ಅನಿವಾಸಿ ಕನ್ನಡಿಗರು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದರೆ 7ರಿಂದ 14 ವರ್ಷದವರೆಗೆ ಅವರಿಗೆ ಮೌಲ್ಯವರ್ಧಿತ ತೆರಿಗೆ ಮತ್ತು ಕೇಂದ್ರ ಮಾರಾಟ ತೆರಿಗೆ ಮೊತ್ತವನ್ನು ಬಡ್ಡಿ ರಹಿತ ಸಾಲವಾಗಿ ನೀಡಲಾಗುವುದು ಎಂದು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.












Click it and Unblock the Notifications