ವೇಣುಗೋಪಾಲ್, ಸುರ್ಜೇವಾಲಾ ಕರ್ನಾಟಕ ಭೇಟಿ ರಹಸ್ಯ ಬಯಲು!
ಬೆಂಗಳೂರು, ಅಕ್ಟೋಬರ್ 17: ಕರ್ನಾಟಕದ ಕಾಂಗ್ರೆಸ್ ಸರ್ಕಾರ 5 ರಾಜ್ಯಗಳ ವಿಧಾನಸಭೆ ಚುನಾವಣೆಗೆ ಹಣವನ್ನು ಸಂಗ್ರಹ ಮಾಡುತ್ತಿದೆ ಎಂದು ರಾಜ್ಯದ ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ. ಅದರಲ್ಲೂ ಬೆಂಗಳೂರಿನಲ್ಲಿ ಐಟಿ ದಾಳಿಯಲ್ಲಿ 42 ಕೋಟಿ ರೂ. ಪತ್ತೆಯಾದ ಬಳಿಕ ರಾಜಕೀಯ ಆರೋಪ ಪ್ರತ್ಯಾರೋಪಗಳು ಜೋರಾಗಿವೆ.
ಮಂಗಳವಾರ ಕರ್ನಾಟಕ ಬಿಜೆಪಿ ಟ್ವೀಟ್ವೊಂದನ್ನು ಮಾಡಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಏಕೆ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ? ಎಂಬ ರಹಸ್ಯವನ್ನು ಟ್ವೀಟ್ನಲ್ಲಿ ಹೇಳಿದೆ.

ಬಿಜೆಪಿ ತನ್ನ ಟ್ವೀಟ್ನಲ್ಲಿ, 'ಹೇಳಿದ ಸಮಯಕ್ಕೆ ಹೊರ ರಾಜ್ಯಗಳಿಗೆ ಇನ್ನೂ ಸಿದ್ದರಾಮಯ್ಯ ಅವರ #ATMSarkaraದ ಲೂಟಿ ಹಣ ತಲುಪದೆ ಇರುವ ಕಾರಣಕ್ಕೆ ಖುದ್ದು ಏಜೆಂಟರ್ಗಳೇ ರಾಜ್ಯದಲ್ಲಿ ಠಿಕಾಣಿ ಹೂಡಿದ್ದಾರೆ' ಎಂದು ಗಂಭೀರವಾದ ಆರೋಪವನ್ನು ಮಾಡಿದೆ.
ಬಿಜೆಪಿ ಟ್ವೀಟ್ ವಿವರ
ಬಿಜೆಪಿ ತನ್ನ ಟ್ವೀಟ್ನಲ್ಲಿ, 'ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಮತ್ತು ಕಮಿಷನ್ ಏಜೆಂಟ್ ಕೆ.ಸಿ. ವೇಣುಗೋಪಾಲ್ ಅವರು ಕರ್ನಾಟಕಕ್ಕೆ ದಿಢೀರ್ನೇ ಆಗಮಿಸಿರುವ ಕಾರಣಗಳು' ಎಂದು ಪಟ್ಟಿಯೊಂದನ್ನು ನೀಡಿದೆ.
* ₹1000 ಕೋಟಿ ಕಲೆಕ್ಷನ್ನ ಮೇಲ್ವಿಚಾರಣೆ ನಡೆಸುವುದು..!
* ನಿಗಮ ಮಂಡಳಿಗಳ ನೇಮಕಾತಿಗೆ ರೇಟ್ ಫಿಕ್ಸ್ ಮಾಡುವುದು..!
* ಪಂಚ ರಾಜ್ಯ ಚುನಾವಣೆಗೆ ಹಣ ಸಾಗಣೆಯ ಸ್ಥಿತಿಗತಿ ತಿಳಿಯುವುದು..!
* ಗುತ್ತಿಗೆದಾರರಿಗೆ ಹೆಚ್ಚುವರಿ ಪರ್ಸೆಂಟೇಜ್ ಫಿಕ್ಸ್ ಮಾಡುವುದು..!
* ಅಧಿಕಾರಿಗಳಿಂದ ವಸೂಲಿಯ ವಾಸ್ತವ ಸ್ಥಿತಿ ಅರಿಯುವುದು..! ಎಂದು ದೂರಿದೆ.
ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಮಧ್ಯ ಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್ ಗಢ ಮತ್ತು ಮಿಜೋರಾಂ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡಿದೆ. ನವೆಂಬರ್ ತಿಂಗಳಿನಲ್ಲಿ ಚುನಾವಣೆಗಳು ನಡೆಯಲಿದ್ದು, ಡಿಸೆಂಬರ್ 3ರಂದು 5 ರಾಜ್ಯಗಳ ಮತ ಎಣಿಕೆ ನಡೆಯಲಿದೆ.
ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಮತ್ತು ಕಮಿಷನ್ ಏಜೆಂಟ್ ಕೆ.ಸಿ. ವೇಣುಗೋಪಾಲ್ ಅವರು ಕರ್ನಾಟಕಕ್ಕೆ ದಿಢೀರ್ನೇ ಆಗಮಿಸಿರುವ ಕಾರಣಗಳು:
— BJP Karnataka (@BJP4Karnataka) October 17, 2023
✔️ ₹1000 ಕೋಟಿ ಕಲೆಕ್ಷನ್ನ ಮೇಲ್ವಿಚಾರಣೆ ನಡೆಸುವುದು..!
✔️ ನಿಗಮ ಮಂಡಳಿಗಳ ನೇಮಕಾತಿಗೆ ರೇಟ್ ಫಿಕ್ಸ್ ಮಾಡುವುದು..!
✔️ ಪಂಚ ರಾಜ್ಯ ಚುನಾವಣೆಗೆ ಹಣ ಸಾಗಣೆಯ ಸ್ಥಿತಿಗತಿ ತಿಳಿಯುವುದು..!
✔️…
ಬಿಜೆಪಿ ಮತ್ತೊಂದು ಟ್ವೀಟ್ನಲ್ಲಿ, 'ಕಾಂಗ್ರೆಸ್ ಬಂದಿದೆ-ಕಲೆಕ್ಷನ್ ಜೋರಾಗಿದೆ. ರಾಜ್ಯವನ್ನು ದೋಚುವ ಸ್ಪರ್ಧೆ ತೀವ್ರವಾಗಿದೆ!!. ಕನ್ನಡಿಗರ ಹಣ ಪಂಚ ರಾಜ್ಯಗಳ ಪಾಲಾಗುತ್ತಿದೆ. ಕನ್ನಡಿಗರ ಬದುಕು ಪಂಚರ್ ಆಗಿದೆ!!' ಎಂದು ಆರೋಪ ಮಾಡಿದೆ.
'ಸಮಗ್ರ ಭ್ರಷ್ಟಾಚಾರಕ್ಕಾಗಿ ವಿಧಾನಸೌಧವನ್ನು ಭ್ರಷ್ಟಾಚಾರದ ಹೆಡ್ ಆಫೀಸ್ ಮಾಡಿಕೊಂಡು ಪಂಚರಾಜ್ಯ ಚುನಾವಣೆಗೆ ಭರಪೂರ ಫಂಡಿಂಗ್ ಮಾಡುವ ಹೊಣೆ ಹೊತ್ತಿರುವ ಕರ್ನಾಟಕದ ಕಲೆಕ್ಷನ್ ಮಾಸ್ಟರ್ಸ್ ಇವರೇ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಒಟ್ಟಿಗಿರುವ ಫೋಟೋವನ್ನು ಹಾಕಿ ಕಲೆಕ್ಷನ್ ಮಾಸ್ಟರ್ಸ್ ಎಂದು ಟೀಕೆ ಮಾಡಿತ್ತು.
'ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಉಳಿದ ರಾಜ್ಯಗಳಲ್ಲಿನ ಚುನಾವಣೆಗೆ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ. ಕಾಂಗ್ರೆಸ್ ಕೃಪಾಪೋಷಿತ ಗುತ್ತಿಗೆದಾರರು, ಬಿಲ್ಡರ್ಗಳ ಬಳಿ ಕಾಂಗ್ರೆಸ್ ಇಟ್ಟಿರುವ ಠೇವಣಿಯ ಪ್ರತಿಯೊಂದು ಉಗ್ರಾಣವೂ #ATMSarkara ದ ಕರಾಳ ಕಲೆಕ್ಷನ್ ದಂಧೆಯ ಪ್ರತಿಬಿಂಬ. ಸಿದ್ದರಾಮಯ್ಯ ಅವರದ್ದು ಕರ್ನಾಟಕ ಕಂಡ ಅತಿಭ್ರಷ್ಟ ಸರ್ಕಾರ ಎಂಬುದನ್ನು ಈಗ ಸಿಕ್ಕಿರುವ ಸರಾಸರಿ ₹40 ಕೋಟಿಯ ಪ್ರತಿ ನೋಟುಗಳೂ ಕೂಗಿ ಹೇಳುತ್ತಿವೆ' ಎಂದು ಬಿಜೆಪಿ ದೂರಿದೆ.
ಸೋಮವಾರ ಟ್ವೀಟ್ ಮಾಡಿದ್ದ ಬಿಜೆಪಿ, 'ಈ ದೇಶದಲ್ಲಿ ಒಂದು ರೂಪಾಯಿ ಬಿಡುಗಡೆಯಾದರೆ, ಅದರಲ್ಲಿ ಬಡವರಿಗೆ ತಲುಪುವುದು ಕೇವಲ 15 ಪೈಸೆ ಎಂದು ಹೇಳಿದ್ದ ರಾಜೀವ್ ಗಾಂಧಿಯವರ ಮಾತನ್ನು ಅಕ್ಷರಶಃ ಪಾಲಿಸುತ್ತಿರುವ ಕಾಂಗ್ರೆಸ್, ವಿಧಾನಸೌಧದಲ್ಲಿ ಬಿಡುಗಡೆಯಾಗುವ ಪ್ರತಿ ಒಂದು ರೂಪಾಯಿಯಲ್ಲಿ, 80 ಪೈಸೆಯನ್ನು ತಮ್ಮ ಹೈಕಮಾಂಡ್ ಹಾಗೂ ಪಂಚ ರಾಜ್ಯಗಳ ಚುನಾವಣಾ ಫಂಡಿಂಗ್ಗೆ ಎತ್ತಿಡುತ್ತಿದೆ' ಎಂದು ಆರೋಪಿಸಿತ್ತು.
'ಪ್ರಸ್ತುತ ಸಿದ್ದರಾಮಯ್ಯ ಅವರು ಹಾಗೂ ಡಿ. ಕೆ. ಶಿವಕುಮಾರ್ ಅವರು ವಾರ್ಷಿಕ 3-4 ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡುವುದಾಗಿ ಹೈಕಮಾಂಡ್ಗೆ ಮಾತು ಕೊಟ್ಟು ಅಧಿಕಾರದ ಗದ್ದುಗೆಯಲ್ಲಿ ಕೂತಿದ್ದಾರೆ' ಎಂದು ಹೇಳಿತ್ತು.
ಮೊದಲ ಹಂತದ ಸಾವಿರ ಕೋಟಿ ರೂಪಾಯಿಯನ್ನು ಹೈಕಮಾಂಡ್ಗೆ ಸಲ್ಲಿಸುವ ಸಮಯದಲ್ಲಿಯೇ, ಐ.ಟಿ ಇಲಾಖೆ ದಾಳಿ ಮಾಡಿದ ಕಾರಣ, ಕಾಂಗ್ರೆಸ್ನ ಕಲೆಕ್ಷನ್ ಕಳ್ಳಾಟ ಬಯಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ದಿವಾಳಿ ಮಾಡಿ ಕಾಂಗ್ರೆಸ್ಸಿಗರು ಮಾತ್ರ ದಿವಾನರಾಗಲಿರುವುದನ್ನು ಕರ್ನಾಟಕ ಕಾಣಬೇಕಿರುವುದು ಕನ್ನಡಿಗರ ಪಾಲಿನ ದುರಾದೃಷ್ಟ' ಎಂದು ಬಿಜೆಪಿ ಟ್ವೀಟ್ ಮಾಡಿತ್ತು.












Click it and Unblock the Notifications