ರಾಷ್ಟ್ರಮಟ್ಟದಲ್ಲಿ ಸದ್ದಾದ ಕರ್ನಾಟಕ ಕೈಗಾರಿಕೆ ಸಾಧನೆ: ದೆಹಲಿಯಲ್ಲಿ ಡಿಪಿಐಐಟಿ ಗೌರವ ಪ್ರದಾನ
ಬೆಂಗಳೂರು, ಸೆಪ್ಟಂಬರ್ 07: ಕೈಗಾರಿಕೆ ಉದ್ಯಮ ಸುಧಾರಣೆಯಲ್ಲಿ ಹಾಗೂ ನಾಗರಿಕ ಕೇಂದ್ರಿತ ಉಪಕ್ರಮಗಳನ್ನು ಜಾರಿಗೆ ತರುವಲ್ಲಿ ಮಾಡಿದ ಉತ್ತಮ ಸಾಧನೆಗೆ ಕರ್ನಾಟಕವು ದೇಶದಲ್ಲಿಯೇ ಉನ್ನತ ಸಾಧನೆ ಮಾಡಿದ ಹೆಗ್ಗಳಿಕೆ ಪಾತ್ರವಾಗಿದೆ. ಈ ಸಂಬಂಧ ರಾಷ್ಟ್ರ ರಾಜಧಾನಿಯಲ್ಲಿ ಗೌರವ, ಮನ್ನಣೆಗೆ ಪಾತ್ರವಾಗಿದೆ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನಾ ಇಲಾಖೆಯು (ಡಿಪಿಐಐಟಿ) ನವದೆಹಲಿಯಲ್ಲಿ ಏರ್ಪಡಿಸಿದ್ದ 'ಉದ್ಯೋಗ ಸಮಾಗಂ' ಕಾರ್ಯಕ್ರಮದಲ್ಲಿ ಕರ್ನಾಟಕಕ್ಕೆ ಈ ಗೌರವ ಪ್ರದಾನ ಮಾಡಲಾಗಿದೆ. ಉದ್ಯಮ ಸುಧಾರಣೆ ಕ್ರಿಯಾ ಯೋಜನೆ (ಬಿಆರ್ಎಪಿ) 2022' ಯಲ್ಲಿ ಕರ್ನಾಟಕದ ಸಾಧನೆ ಗುರುತಿಸಿ ಮನ್ನಣೆ ನೀಡಲಾಗಿದೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಉದ್ಯಮ ವಹಿವಾಟು ಉತ್ತೇಜಿಸಲು ಸುಲಲಿತ ವಾತಾವರಣ ಬಲಪಡಿಸುವ ಮತ್ತು ರಾಜ್ಯದಾದ್ಯಂತ ಸೇವಾ ವಿತರಣೆ ಹೆಚ್ಚಿಸುವ ಗುರಿ ಹೊಂದಿದೆ. ಈ ಸಂಬಂಧ 261 ಉದ್ಯಮ ಸುಧಾರಣೆಗಳು ಮತ್ತು 91 ನಾಗರಿಕ-ಕೇಂದ್ರಿತ ಉಪಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯದ ಅಸಾಧಾರಣ ಪ್ರಯತ್ನಗಳಿಗೆ ಈ ಪುರಸ್ಕಾರ ದೊರೆತಿದೆ ಎಂದರು.
ರಾಷ್ಟ್ರಮಟ್ಟದಲ್ಲಿ ಸದ್ದಾದ ಕರ್ನಾಟಕ ಕೈಗಾರಿಕೆ ಸಾಧನೆ
'ಉದ್ಯಮ ಸುಧಾರಣಾ ಕ್ರಿಯಾ ಯೋಜನೆ 2020' ರಲ್ಲಿನ "ಉನ್ನತ ಸಾಧನೆʼಯ ಯಶಸ್ಸನ್ನು ರಾಜ್ಯವು ಮುಂದುವರೆಸಿದೆ. ಕರ್ನಾಟಕದ ಈ ಸಾಧನೆಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಿರುವುದು ಸುಲಲಿತ ಉದ್ಯಮ ಸೌಲಭ್ಯ ಕಲ್ಪಿಸುವಲ್ಲಿನ ರಾಜ್ಯದ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅವರು ಪ್ರಶಂಸಿಸಿದರು.
ಉದ್ಯಮ ಸುಧಾರಣಾ ಕ್ರಮಗಳಿಗೆ ಚಾಲನೆ ನೀಡುವಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಗಮನಾರ್ಹ ಪ್ರಯತ್ನಗಳಿಗಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿದರು.
ಕೇಂದ್ರ ಸರ್ಕಾರದ 'ಡಿಪಿಐಐಟಿ'ಯ ಈ ಮನ್ನಣೆಯು ಉದ್ಯಮ ಸುಧಾರಣಾ ಕ್ರಮಗಳಿಗೆ ಕರ್ನಾಟಕ ಅನುಸರಿಸುತ್ತಿರುವ ಧೋರಣೆಗೆ ದೊರೆತ ಮಾನ್ಯತೆಯಾಗಿದೆ. ಸುಸ್ಥಿರ ಆರ್ಥಿಕ ಬೆಳವಣಿಗೆಗೆ ವೇದಿಕೆ ಕಲ್ಪಿಸಲಿದೆ. ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಅವರು ಗೌರವ ಪ್ರದಾನ ವೇಳೆ ಪಾಲ್ಗೊಂಡಿದ್ದರು.
ಉದ್ಯಮ ಸ್ನೇಹಿ ವಾತಾವರಣ
ಈಗಾಗಲೇ ರಾಜ್ಯ ಸರ್ಕಾರದ ನೇತೃತ್ವದಲ್ಲಿ ಹೊಸ ಕೈಗಾರಿಕೆ ನೀತಿ ಜಾರಿಗೆ ತರಲಾಗಿದೆ. ಸಚಿವ ವಿದೇಶ ಬಂಡವಾಳ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೋಟ್ಯಾಂತರ ರೂಪಾಯಿ ರಾಜ್ಯಕ್ಕೆ ಹರಿದು ಬರುತ್ತಿದೆ. ಹೊಸ ಹೊಸ ಕೈಗಾರಿಕೆ ಘಟಕ, ಕಾರ್ಖಾನೆಗಳು, ಇಂಡಸ್ಟ್ರಿಯಲ್ ಪಾರ್ಕ್, ವಾಹನ ಬಿಡಿಭಾಗಗಳ ತಯಾರಿಕೆ, ಇವಿ ಘಟಕಗಳು ನಿರ್ಮಾಣದ ಮೇಲೆ ಹೂಡಿಕೆ ಹಾಕಲಾಗುತ್ತಿದೆ.
ರಾಜ್ಯದಲ್ಲಿ ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಶ್ರಮಿಸಿತ್ತಿದೆ. ಈ ನಿಟ್ಟಿನಲ್ಲಿ ಕೈಗೊಂಡ ಸುಧಾರಣೆ ಕ್ರಮಗಳು, ಉಪಕ್ರಮಗಳಿಗೆ ಗೌರವ ಸಂದಿದೆ.












Click it and Unblock the Notifications