Karnataka Weather: ರಾಜ್ಯಾದ್ಯಂತ ಧಾರಾಕಾರ ಮಳೆ ಎಚ್ಚರಿಕೆ 24 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ನೆನ್ನೆ ಮಳೆಗೆ 3 ಸಾವು
Monsoon Rain 2026 alert: ಸಮುದ್ರ ಮಟ್ಟದಲ್ಲಿನ ಬದಲಾವಣೆ, ವೈಪರೀತ್ಯಗಳ ತೀವ್ರತೆ ಕಾರಣದಿಂದಾಗಿ ಪೂರ್ವ ಮುಂಗಾರು ಮಳೆ (Rain Alert) ರಾಜ್ಯಾದ್ಯಂತ ಅಬ್ಬರಿಸಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಭಾನುವಾರ ಧಾರಾಕಾರ ಮಳೆ ಆಗಿದೆ. ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಮುಂದಿನ 5 ದಿನ ಮೇ 22ರವರೆಗೆ ರಾಜ್ಯಾದ್ಯಂತ ಭಾರೀ ಮಳೆ ಆಗಲಿದ್ದು, "ಆರೆಂಜ್' ಮತ್ತು "ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
2 ದಿನ ಒಳನಾಡಿನ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಉತ್ತರ ಒಳನಾಡಿನಲ್ಲಿ ಗುಡುಗು, ಮಿಂಚು ಬಿರುಗಾಳಿ ಸಹಿತ ಮಳೆ ಆರ್ಭಟಿಸಲಿದೆ. ಸೋಮವಾರ ಮತ್ತು ಮಂಗಳವಾರ (ಮೇ 18,19) ಎರಡು ದಿನ ಶಿವಮೊಗ್ಗ, ಹಾವೇರಿ, ಕೊಪ್ಪಳ, ಗದಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕನಿಷ್ಠ 110ರಿಂದ ಗರಿಷ್ಠ 200 ಮಿಲಿ ಮೀಟರ್ ವರೆಗೆ ಮಳೆ ಸಂಭವವಿದ್ದು, ಈ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ನೀಡಲಾಗಿದೆ.

ಈ ಎರಡು ದಿನ ಒಳಗೊಂಡಂತೆ ಮುಂದಿನ ಮೇ 22ರವರೆಗೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ಬಿಟ್ಟು ರಾಜ್ಯಾದ್ಯಂತ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಸೇರಿ ಎಲ್ಲೆ ಜಿಲ್ಲೆಗಳಲ್ಲೂ ಭಾರೀ ಮಳೆ ಆಗಲಿದೆ. ಕನಿಷ್ಠ 75 ಮಿಲಿ ಮೀಟರ್ನಿಂದ 115 ಮಿಲಿ ಮೀಟರ್ ವರೆಗೆ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
24 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ವಿಜಯನಗರ, ಬಳ್ಳಾರಿ, ಧಾರವಾಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಗುಡುಗು, ಮಿಂಚು ಬಿರುಗಾಳಿ ಮಳೆಗೆ ಸಾಕ್ಷಿಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಿರುಗಾಳಿ ಮಳೆ ಬರುವ ಹಿನ್ನೆಲೆ ಮತ್ತಷ್ಟು ಹಾನಿಯ ಆತಂಕ ಶುರುವಾಗಿದೆ.
ಮುಂಗಾರು ಮಳೆ (Monsoon Rain 2026) ಆಗಮನ
ಮುಂದಿನ 2-3 ದಿನಗಳಲ್ಲಿ ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಬಂಗಾಳಕೊಲ್ಲಿಯ ಆಗ್ನೆಯ ಮತ್ತು ನೈಋತ್ಯ ಭಾಗ ಅಂಡಮಾನ್ ದ್ವೀಪಗಳು ಮತ್ತು ಅಂಡಮಾನ್ ಸಮುದ್ರದ ಸೇರಿದಂತೆ ಒಟ್ಟಾರೆ ಸಮುದ್ರ ಮಟ್ಟದಲ್ಲಿ ವೈಪರೀತ್ಯಗಳು ಸಂಭವಿಸಿದ್ದು, ಇದು ಮುಂಗಾರು ಮಳೆಯ ಅಧಿಕೃತ ಪ್ರವೇಶಕ್ಕೆ ಪೂರಕವಗಿವೆ. ಅವಧಿಗೂ (ಜೂನ್ 1) ನಾಲ್ಕು ದಿನ ಮುನ್ನವೇ ಮೇ 26ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶಿಸಲಿವೆ ಎಂದು ಐಎಂಡಿ ತಿಳಿಸಿದೆ.
ತಮಿಳುನಾಡಿನ ಕರಾವಳಿ ಸಮೀಪ ವಾಯು ಚಂಡಮಾರುತದ ಪ್ರಸರಣ ಉಂಟಾಗಿದೆ. ಇದು ಸಮುದ್ರ ಮಟ್ಟದಿಂದ 1.5 ಕಿ.ಮೀ. ಎತ್ತರದಲ್ಲಿದೆ. ಕೊಮೊರಿನ್ ಪ್ರದೇಶ ವ್ಯಾಪ್ತಿಯಲ್ಲೊಂದು ವಾಯು ಚಂಡಮಾರುತದ ಪರಿಚಲನೆ ಸೃಷ್ಟಿಯಾಗಿದ್ದು ಇದು ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದಲ್ಲಿದೆ. ಇವುಗಳು ಕಳೆದೊಂದು ವಾರದಿಂದ ತೀವ್ರಗೊಳ್ಳುತ್ತಿವೆ. ಈ ಕಾರಣದಿಂದ ರಾಜ್ಯದಾದ್ಯಂತ ವ್ಯಾಪಕ ಮಳೆ ವಾತಾವರಣ ನಿರ್ಮಾಣವಾಗಿದೆ.
ಬೆಂಗಳೂರಿಗೆ ಯೆಲ್ಲೋ ಅಲರ್ಟ್
ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲಿನ ಆರ್ಭಟಕ್ಕೆ ಕೊನೆ ಆಗಲಿದೆ. ನಗರಾದ್ಯಂತ ಗುಡುಗ ಮಿಂಚು ಸಹಿತ ಜೋರು ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ಕಳೆದ ಎರಡು ದಿನಗಳಿಂದ ಗರಿಷ್ಠ ತಾಪಮಾನದಲ್ಲಿ ಕೊಂಚ ಇಳಿಕೆ ಆಗಿದೆ. ತಾಪಮಾನವು ಕನಿಷ್ಠ 24, ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾನುವಾರದ ಮಳೆಗೆ ಮೂರು ಸಾವು
ಭಾನುವಾರು ಸುಮಾರು 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಲೆ ಆಗಿದೆ. ಅಪಾರ ಬೆಳೆ ನಾಶವಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಧಾರವಾಡದ ಕವಲಗೆರೆಯಲ್ಲಿ ಸಿಡಿಲು ಬಡಿದು ಹನುಮಂತಪ್ಪ ಶಿರಸಂಗಿ (36), ಹೊನ್ನಾವರದ ಅಪ್ಸರಕೊಂಡದಲ್ಲಿ ಮೀನುಗಾರಿಕೆಗೆ ತೆರಳಿದ್ದ ವಿನಾಯಕ ಖಾರ್ವಿ (35) ಮತ್ತು ರಾಯಚೂರಿನ ಕೋಮಲಾಪುರದಲ್ಲಿ ಜಮೀನಿನಲ್ಲಿ ಸಿಡಿಲಬ್ಬರಕ್ಕೆ ಕರಿಯಪ್ಪ ಗೆನ್ನಾಕಿಹಾಳ್ (45) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ನೆನ್ನೆ ಕಲಬುರಗಿಯಲ್ಲಿ 42 ಡಿಗ್ರಿ ಸೆಲ್ಸಿಯಸ್, ಬೀದರ್ 41 ಡಿಗ್ರಿ ಸೆಲ್ಸಿಯಸ್, ವಿಜಯಪುರ ಮತ್ತು ರಾಯಚೂರಿನಲ್ಲಿ ತಲಾ 40 ಡಿಗ್ರಿ ಸೆಲ್ಸಿಯಸ್, ಗದಗ, ಧಾರವಾಡದಲ್ಲಿ ತಲಾ 37 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಮುಂದಿನ 7 ದಿನಗಳ #ಹವಾಮಾನ #ಮುನ್ಸೂಚನೆ ಮತ್ತು #ಎಚ್ಚರಿಕೆಗಳು: (ಮೂಲ: IMD) #ಕರ್ನಾಟಕ ರಾಜ್ಯದಾದ್ಯಂತ ಒಣ ಹವೆ ಹಾಗೂ ಬಿಸಿಲಿನ ವಾತಾವರಣ ಮುಂದುವರಿಯುವ ಸಾಧ್ಯತೆಯಿದ್ದು, ಮಧ್ಯಾಹ್ನ ನಂತರ, ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರುವ ಸಾಧ್ಯತೆಯಿದೆ, ಹಾಗೂ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ pic.twitter.com/sXowMnsNhd
— Karnataka State Natural Disaster Monitoring Centre (@KarnatakaSNDMC) May 18, 2026














Click it and Unblock the Notifications