ಚುನಾವಣಾ ಸಂದರ್ಭದಲ್ಲಿ 'ಟೊಮ್ಯಾಟೋ' ಸಾರು ಪ್ರಿಯರ ಜೇಬಿಗೆ ಕತ್ತರಿ!
ಬೆಂಗಳೂರು, ಮೇ 02: ಅಲ್ಪಾಯುಷಿ ತರಕಾರಿ ಟೊಮ್ಯಾಟೋಗೆ ಈಗ ಎಲ್ಲಿಲ್ಲದ ಬೇಡಿಕೆ ಹುಟ್ಟಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಫ್ತಾಗುವ ತರಕಾರಿಗಳ ಬೆಲೆ ನಿಯಂತ್ರಣದಲ್ಲಿರಲಿದೆ ಎಂಬ ನಂಬಿಕೆ ಹುಸಿಯಾಗಿದೆ. ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಬೆಲೆ ಏರಿಕೆ ಕಂಡು ಬಂದಿದೆ.
ಟೊಮ್ಯಾಟೊ ಬೆಲೆ ಗಗನಕ್ಕೇರಿದ್ದು, ಮಾರುಕಟ್ಟೆಯಲ್ಲಿ ಒಂದು ಕೆ.ಜಿಗೆ ನೂರರ ಗಡಿ ದಾಟಿದ್ದ ಸಂದರ್ಭದಲ್ಲಿ ಅಂಗಡಿಗಳನ್ನು ಕಾಯಲು ಸಿಸಿಟಿವಿ, ಭದ್ರತಾ ಸಿಬ್ಬಂದಿಗಳನ್ನು ಕೆಲವೆಡೆಗಳನ್ನು ಬಳಸಿದ್ದ ಉದಾಹರಣೆ ನೆನಪಿಗೆ ಬರುತ್ತದೆ. ಪಾಕಿಸ್ತಾನ ಕೂಡಾ ಆಗ ಭಾರತದಿಂದ ರಫ್ತಾಗುವ ಟೊಮ್ಯಾಟೋ ಬೇಡ ಎಂದು ಬಿಟ್ಟಿತ್ತು.
ಈರುಳ್ಳಿಗೆ ಹೋಲಿಸಿದರೆ ಟೊಮ್ಯಾಟೊಗೆ ಆಯಸ್ಸು ಕಮ್ಮಿ. ಚಟ್ನಿ, ಸಾರು, ಜಾಮ್, ಗೊಜ್ಜು ಹೀಗೆ ಮಾರುಕಟ್ಟೆಯಿಂದ ತಂದ ದಿನವೇ ಬಳಸುವುದು ಮಾಮೂಲಿ. ಹೀಗಾಗಿ ಕಳೆದ ವಾರದ ಟೊಮ್ಯಾಟೊ ಯಾರು ಇಟ್ಟುಕೊಳ್ಳುವುದಿಲ್ಲ. ಹೀಗಾಗಿ ಮಾರಾಟಗಾರರು ಹಾಗೂ ಗ್ರಾಹಕರಿಬ್ಬರಿಗೂ ಆತಂಕ ಸಹಜವಾಗಿತ್ತು.

ಆದರೆ, ಸದ್ಯಕ್ಕೆ ಮೇ 02ರಂದು ಕರ್ನಾಟಕದಲ್ಲಿ ಕೆಜಿ ಟೊಮ್ಯಾಟೊ ಬೆಲೆ 50 ರಿಂದ 60 ಪ್ರತಿ ಕೆಜಿಯಂತೆ ಮಾರಾಟವಾಗುತ್ತಿದೆ. ಕಳೆದ ವಾರ 10 ರಿಂದ 15 ರು ಗೆ ಸಿಗುತ್ತಿತ್ತು.
ಸರಿಯಾದ ಪೂರೈಕೆ ಇಲ್ಲದ ಕಾರಣ, ಮಾರುಕಟ್ಟೆಯಲ್ಲಿ ದಿಢೀರ್ ಆಗಿ ಬೆಲೆ ವ್ಯತ್ಯಾಸ ಕಂಡು ಬಂದಿದೆ. ಇನ್ನು ಹರ್ಯಾಣ, ಪಂಜಾಬ್ ಸೇರಿದಂತೆ ಹಲವೆಡೆ ಅಕಾಲಿಕ ಮಳೆಗೆ ಟೊಮ್ಯಾಟೊ ಬೆಳೆ ಹಾಳಾಗಿದೆ. ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬೆಂಗಾಲ ಹಾಗೂ ಒಡಿಶಾ ರಾಜ್ಯಗಳು ದೇಶದಲ್ಲಿ ಹೆಚ್ಚು ಟೊಮ್ಯಾಟೊ ಉತ್ಪಾದಿಸುವ ರಾಜ್ಯಗಳಾಗಿವೆ.
ಆದರೆ, ಕರ್ನಾಟಕದಿಂದ ಉತ್ಪಾದನೆ ಸ್ಥಗಿತಗೊಂಡಿದ್ದರಿಂದ ನಾಸಿಕ್ ನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಉತ್ತಮ ಗುಣಮಟ್ಟದ ಟೊಮ್ಯಾಟೋ ಕೂಡಾ ಸಿಗುತ್ತಿಲ್ಲ. ಗ್ರಾಹಕರಿಂದ ನಾವು ಬೈಗುಳ ತಿನ್ನಬೇಕಾಗಿದೆ ಎಂದು ವಾಸೀಂ ತಮ್ಮ ಅಳಲು ತೋಡಿಕೊಂಡಿದ್ದಾರೆ.












Click it and Unblock the Notifications