ಕರ್ನಾಟಕ ಪಠ್ಯ ಪುಸ್ತಕ ಹೊಸ ವಿವಾದ: ಡಾ. ರಾಜ್ಕುಮಾರ್ ಗದ್ಯ ಕೈಬಿಟ್ಟ ಶಿಕ್ಷಣ ಇಲಾಖೆ
ಬೆಂಗಳೂರು, ಸೆಪ್ಟೆಂಬರ್ 23: ಕರ್ನಾಟಕದಲ್ಲಿ ಪಠ್ಯಪುಸ್ತಕ ವಿವಾದಗಳು ಮುಗಿಯಿತು ಎನ್ನುವಾಗಲೇ ಶಿಕ್ಷಣ ಇಲಾಖೆ ಮತ್ತೊಂದು ಎಡವಟ್ಟು ಮಾಡಿದೆ. ಕೆಲವು ದಲಿತ ಕವಿಗಳು ಮತ್ತು ವಿಚಾರ ವಾದದ ಚಿಂತನೆಯಲ್ಲಿದ್ದ ಕೆಲವು ಲೇಖನ, ಗದ್ಯ , ಪದ್ಯಗಳನ್ನು ಮೌಲ್ಯ ಮಾಪನಕ್ಕೆ ಪರಿಗಣಿಸದಂತೆ ಆದೇಶವನ್ನು ಮಾಡಲಾಗಿದೆ.
ಶಿಕ್ಷಣ ಇಲಾಖೆಗೆ ಕೆಲವು ಕವಿಗಳು ಬರೆದಿದ್ದ ಪತ್ರಗಳು ಕಾರಣವಾಗಿವೆ. ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಎನ್ನುವಂತೆ ವಿವಾದದ ಹಿನ್ನೆಲೆಯಲ್ಲಿ ವಿರೋಧಿಸಿದ್ದ ಕವಿಗಳ ಗದ್ಯ ಪದ್ಯಗಳು ಪಠ್ಯದಲ್ಲಿ ಮುದ್ರಣವಾಗಿದ್ದರಿಂದ ಮನವೊಲಿಸುವ ಕೆಲಸವನ್ನು ಮಾಡದೇ ಶಿಕ್ಷಣ ಇಲಾಖೆ ಕೆಲವು ಲೇಖಕರು ಬರೆದಿದ್ದ ಪತ್ರವನ್ನೇ ಮಾನದಂಡವಾಗಿಟ್ಟುಕೊಂಡು ಅವರು ಬರೆದಿದ್ದ ಗದ್ಯ ಪದ್ಯಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಆದೇಶವನ್ನು ಮಾಡಿದೆ.
ಭಾರತೀಯ ಶಿಕ್ಷಣ ವ್ಯವಸ್ಥೆ ಪ್ರಾರಂಭಿಸುವ ಅಗತ್ಯವಿದೆ: ಅರವಿಂದ್ ಕೇಜ್ರಿವಾಲ್
ಕರ್ನಾಟಕದಲ್ಲಿ ಪಠ್ಯಪುಸ್ತಕ ವಿವಾದ ಸಾಕಷ್ಟು ಗದ್ದಲಕ್ಕೆ ಎಡೆ ಮಾಡಿಕೊಟ್ಟಿತ್ತು. ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಮಾಡಿದ್ದ ಎಡವಟ್ಟುಗಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಪಠ್ಯದ ಕೇಸರಿಕರಣದ ಆರೋಪವೂ ಕೇಳಿಬಂದಿತ್ತು. ಈ ನಡುವೆ ದೇವನೂರು ಮಹದೇವರಂತ ಹಿರಿಯ ಸಾಹಿತಿಗಳು ತಮ್ಮ ಗದ್ಯವನ್ನು ಕೈಬಿಡುವಂತೆ ಆಗ್ರಹಿಸಿದ್ದರು. ಇದೀಗ ಶಿಕ್ಷಣ ಇಲಾಖೆ ಕೆಲವು ಗದ್ಯ ಪದ್ಯವನ್ನು ಮೌಲ್ಯಮಾಪನದಿಂದ ಕೈಬಿಡಲು ತೀರ್ಮಾನಿಸಿದೆ.
'ಎದೆಗೆ ಬಿದ್ದ ಅಕ್ಷರ' ಮೌಲ್ಯಮಾಪನಕ್ಕಿಲ್ಲ
ದಲಿತ ಕವಿ ದೇವನೂರು ಮಹದೇವರವರ ಎದೆಗೆ ಬಿದ್ದ ಅಕ್ಷರ ಎಂಬ ಗದ್ಯವನ್ನು ಹತ್ತನೇ ತರಗತಿಯ ಪ್ರಥಮ ಭಾಷೆಯ ಪಠ್ಯಪುಸ್ತಕದಿಂದ ಕೈಬಿಡದೇ ಉಳಿಸಿಕೊಳ್ಳಲಾಗಿತ್ತು. ಪಠ್ಯಪುಸ್ತಕ ವಿವಾದದಿಂದ ಬೇಸತ್ತಿದ್ದ ದೇವನೂರು ಮಹಾದೇವರವರು ತಮ್ಮ ಗದ್ಯವನ್ನು ಕೈಬಿಡುವಂತೆ ಆಗ್ರಹಿಸಿದ್ದಲ್ಲದೇ ಪಠ್ಯಪುಸ್ತಕ ಸಮಿತಿಗೆ ನೀಡಿದ್ದ ಹಕ್ಕನ್ನು ಹಿಂಪಡೆದಿದ್ದೇನೆ ಎಂದಿದ್ದರು. ಆದರೆ ಪಠ್ಯ ಪುಸ್ತಕ ಮುದ್ರಣವಾಗಿದೆ ಎಂದು ಶಿಕ್ಷಣ ಸಚಿವರು ಹೇಳಿದ್ದರು. ಇವೆಲ್ಲದರ ನಡುವೆ ಪಠ್ಯಪುಸ್ತಕದಲ್ಲಿನ ಕೆಲವು ಲೋಪದೋಷ ಸರಿಪಡಿಸುವುದಾಗಿ ಹೇಳಿದ ಬಳಿಕ ಸಣ್ಣಪುಟ್ಟ ಬದಲಾವಣೆಯ ಬಳಿಕ ಪಠ್ಯಪುಸ್ತಕ ವಿವಾದ ತಣ್ಣಗಾಗಿತ್ತು. ಇದೀಗ ದಲಿತ ಕವಿ ದೇವನೂರು ಮಹಾದೇವರವರ ಎದೆಗೆ ಬಿದ್ದ ಅಕ್ಷರ ಗದ್ಯವನ್ನು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಶಿಕ್ಷಣ ಇಲಾಖೆ ಆದೇಶಿಸಿದೆ.
ಡಾ. ಜಿ ರಾಮಕೃಷ್ಣರ ಭಗತ್ ಸಿಂಗ್ ಪಾಠಕ್ಕೆ ಕತ್ತರಿ
ಹತ್ತನೇ ತರಗತಿಯ ಪ್ರಥಮ ಭಾಷೆ ಕನ್ನಡದ ಪೂರಕ ಪಾಠದಲ್ಲಿ ಬ್ರಾಹ್ಮಣ ಸಮುದಾಯದ ವಿಚಾರವಾದಿ ಚಿಂತನೆಯುಳ್ಳ ಡಾ. ಜಿ ರಾಮಕೃಷ್ಣರವರು ಬರೆದಿದ್ದ ಭಗತ್ ಸಿಂಗ್ ಎಂಬ ಪಾಠ ಮೊದಲಿನಿಂದಲೂ ಇತ್ತು. ಆದರೆ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಬರೆದಿರುವ ಭಾರತಿಯ ಅಮರ ಪುತ್ರರು ಎಂಬ ಪೂರಕ ಗದ್ಯವನ್ನು ಸೇರಿಸಲಾಗಿತ್ತು. ಈ ಪಾಠವೂ ಭಗತ್ ಸಿಂಗ್ ಜೀವನ ಬಗ್ಗೆಯೇ ಇತ್ತು. ಇದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗುತ್ತಿತ್ತು. ಇದೀಗ ಭಗತ್ ಸಿಂಗ್ ಎಂಬ ಪೂರಕ ಗದ್ಯವನ್ನು ಮೌಲ್ಯ ಮಾಪನಕ್ಕೆ ಪರಿಗಣಿಸದಂತೆ ಶಿಕ್ಷಣ ಇಲಾಖೆ ಆದೇಶಿಸಿದೆ.
ಹೀಗೊಂದು ಟಾಪ್ ಪ್ರಯಾಣ ಮೌಲ್ಯಕ್ಕೆ ಬ್ರೇಕ್
9ನೇ ತರಗತಿಯ ತೃತೀಯ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿರುವ ರೂಪ ಹಾಸನರವವರು ಬರೆದಿರುವ ಅಮ್ಮನಾಗುವುದೆಂದರೆ ಎಂಬ ಪದ್ಯವನನ್ನುಕೈಬಿಡಲಾಗಿದೆ. ಹತ್ತನೇ ತರಗತಿಯ ತೃತೀಯ ಭಾಷೆ ಕನ್ನಡದಲ್ಲಿನ ಈರಪ್ಪ ಎಂ ಕಂಬಳಿ ಬರೆದಿರುವ ಹೀಗೊಂದು ಟಾಪ್ ಪ್ರಯಾಣ ಎಂಬ ಗದ್ಯವನ್ನು ಮತ್ತು ಸತೀಶ್ ಕುಲಕರ್ಣಿ ಬರೆದಿರುವ ಕಟ್ಟತೇವ ನಾವು ಎಂಬ ಪದ್ಯವನ್ನು ಮೌಲ್ಯಮಾಪನಕ್ಕೆ ಪರಿಗಣಿಸುವಂತಿಲ್ಲ. ಇನ್ನು 10ನೇ ತರಗತಿಯ ದ್ವಿತೀಯ ಭಾಷೆ ಕನ್ನಡದ ಸುಕನ್ಯ ಮಾರುತಿ ಬರೆದಿರುವ ಏಣಿ ಎಂಬ ಪದ್ಯವನ್ನು ಕೈಬಿಡಲಾಗಿದೆ.
ಮೇರುನಟನ ಬಗ್ಗೆ ಯಾಕೀ ನಿರ್ಲಕ್ಷ್ಯ?
6ನೇ ತರಗತಿಯ ಪ್ರಥಮ ಭಾಷೆ ಕನ್ನಡದಲ್ಲಿ ಡಾ. ರಾಜ್ ಕುಮಾರ್ ಜೀವನ ಚರಿತ್ರೆಯನ್ನುಯ ಆಯ್ದಭಾಗವನ್ನು ಪಠ್ಯದಲ್ಲಿ ಅಳವಡಿಸಲಾಗಿತ್ತು. ದೊಡ್ಡಹುಲ್ಲೂರು ರುಕ್ಕೋಜಿ ರಾವ್ ಬರೆದಿದ್ದ ಡಾ. ರಾಜ್ ಕುಮಾರ್ ಎಂಬ ಗದ್ಯವನ್ನು ಸಹ ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಶಿಕ್ಷಣ ಇಲಾಖೆ ಆದೇಶಿಸಿದೆ. ಆ ಮೂಲಕ ಮೇರುನಟ ಡಾ. ರಾಜ್ ಕುಮಾರ್ ಜೀವನದ ಬಗ್ಗೆ ಮಕ್ಕಳು ತಿಳಿದುಕೊಳ್ಳಲು ಇದ್ದ ಗದ್ಯ ಮೌಲ್ಯಮಾಪನಕ್ಕೆ ಪರಿಗಣಿಸುತ್ತಿಲ್ಲ.