Karnataka Tax: 'ನಮ್ಮ ತೆರಿಗೆ-ನಮ್ಮ ಹಕ್ಕು' ಹೋರಾಟಕ್ಕೆ ಖುದ್ದು ಸಿಎಂ ಸಿದ್ದರಾಮಯ್ಯ ಕರೆ
ಬೆಂಗಳೂರು, ಅಕ್ಟೋಬರ್ 14: ದೇಶದ ವಿವಿಧ ರಾಜ್ಯಗಳ ಪೈಕಿ ಕರ್ನಾಟಕ ಅತೀ ಹೆಚ್ಚು ತೆರಿಗೆ ಹಣ ಪಾವತಿಸುವ ರಾಜ್ಯವಾಗಿದೆ. ಹೀಗಿದ್ದರೂ ನಮ್ಮ ತೆರಿಗೆ ಪಾಲು ನೀಡದೇ ಆ ಹಣವನ್ನು ಉತ್ತರ ರಾಜ್ಯಗಳಿಗೆ ನೀಡಲಾಗುತ್ತದೆ ಎಂದು ಈ ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರ ಆರೋಪಿಸಿತ್ತು. ನಮ್ಮ ತೆರಿಗೆ ನಮ್ಮ ಹಕ್ಕು ಹೋರಾಟ ರೂಪಿಸಿತ್ತು. ಇದೀಗ ಮತ್ತೆ ಅದೇ ಹೋರಾಟಕ್ಕೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಕರೆ ನೀಡಿದ್ದಾರೆ.
ಹೌದು, ಮುಡಾ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರ ಹಗರಣ ಹೊರಗೆಳೆಯಲು ಮುಂದಾಗಿದ್ದರು. ಇದೀಗ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧವು ಸಮಯ ಸಾರುವ ಮುನ್ಸೂಚನೆ ಕೊಟ್ಟಿದ್ದಾರೆ. ಈ ಕುರಿತು ಸೋಮವಾರ ಟ್ವೀಟ್ ಮೂಲಕ ಕೇಂದ್ರವು ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆ ಎಂದು ಅವರು ಕುಟುಕಿದ್ದಾರೆ.

ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಆಗುತ್ತಿರುವ ಅನ್ಯಾಯವನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ನಮ್ಮ ತೆರಿಗೆ - ನಮ್ಮ ಹಕ್ಕು ಎಂಬ ನಮ್ಮ ಹೋರಾಟಕ್ಕೆ ಕನ್ನಡಿಗರೆಲ್ಲರೂ ಕೈಜೋಡಿಸಲು ಮುಂದೆ ಬರಬೇಕಾಗಿದೆ ಎಂದು ಅವರು ಕರೆ ಕೊಟ್ಟಿದ್ದಾರೆ.
ಕರ್ನಾಟಕ ರಾಜ್ಯದಿಂದ ಪ್ರತಿವರ್ಷ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಸುಮಾರು 4 ಲಕ್ಷ ಕೋಟಿ ರೂಪಾಯಿ ತೆರಿಗೆ ರೂಪದಲ್ಲಿ ಹಣ ಸಂದಾಯವಾಗುತ್ತದೆ. ಇದು ಪ್ರತಿಯೊಬ್ಬ ಕನ್ನಡಿಗನ ಬೆವರಿನ ಗಳಿಕೆ. ಆದರೆ ಕೇಂದ್ರ ಸರ್ಕಾರ ನಮಗೆ ನೀಡುತ್ತಿರುವ ತೆರಿಗೆ ಪಾಲು ಅಂದಾಜು 60,000 ಕೋಟಿ ರೂಪಾಯಿ ಮಾತ್ರ. ನಾವು ಕೊಡುವ ಒಂದು ರೂಪಾಯಿ ತೆರಿಗೆಗೆ ವಾಪಸು ನಮಗೆ ಸಿಗುತ್ತಿರುವುದು ಕೇವಲ 15 ಪೈಸೆ. ಈ ಅನ್ಯಾಯದ ವಿರುದ್ಧ ಕನ್ನಡಿಗರೆಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದರು.
ರಾಜ್ಯಗಳಿಗೆ ಹಂಚಿಕೆಯಾದ ಪಾಲಿನ ಲೆಕ್ಕ ಕೊಟ್ಟ ಸಿಎಂ
ಕೇಂದ್ರದ ಎನ್ಡಿಎ ಸರ್ಕಾರ ಇತ್ತೀಚೆಗೆ ದೇಶದ 28 ರಾಜ್ಯಗಳಿಗೆ ಒಟ್ಟು ₹1,78,193 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ ನೀಡಿರುವುದು ಕೇವಲ ರೂ.6,498 ಕೋಟಿ. ಇದರಲ್ಲಿ ಕೇಂದ್ರದ ಆಡಳಿತ ಇರುವ ರಾಜ್ಯಗಳಾದ ಉತ್ತರಪ್ರದೇಶಕ್ಕೆ ರೂ.31,962 ಕೋಟಿ, ಬಿಹಾರಕ್ಕೆ ರೂ.17,921 ಕೋಟಿ, ಮಧ್ಯಪ್ರದೇಶಕ್ಕೆ ರೂ.13,987 ಕೋಟಿ ಮತ್ತು ರಾಜಸ್ಥಾನಕ್ಕೆ ರೂ.10,737 ಕೋಟಿಗಳಷ್ಟು ತೆರಿಗೆ ಪಾಲನ್ನು ನೀಡಲಾಗುತ್ತದೆ. ಇದು ನ್ಯಾಯವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಇದು ಪ್ರಗತಿ ವಿರೋಧಿ ಧೋರಣೆ
ರಾಜ್ಯಗಳಿಂದ ಸಂಗ್ರಹಿಸುವ ತೆರಿಗೆ ಹಣದಲ್ಲಿ ಉತ್ತರ ಪ್ರದೇಶಕ್ಕೆ ಶೇ.17.93, ಬಿಹಾರಕ್ಕೆ 10.05, ರಾಜಸ್ಥಾನಕ್ಕೆ 6.02 ಮತ್ತು ಮಧ್ಯಪ್ರದೇಶಕ್ಕೆ 7.85ರಷ್ಟು ಪಾಲು ನೀಡಿದರೆ, ಕರ್ನಾಟಕಕ್ಕೆ ನೀಡುತ್ತಿರುವ ತೆರಿಗೆ ಪಾಲು ಶೇ.3.64 ಮಾತ್ರ. ಹಂಚಿಕೆಗಾಗಿ ನಿಗದಿಯಾಗಿದೆ ಪಡಿಸಲಾಗಿದೆ ತೆರಿಗೆಯಲ್ಲಿಯೇ ಕೇಂದ್ರ ಸರ್ಕಾರದ ಪ್ರಗತಿ ವಿರೋಧಿ ಧೋರಣೆ ಸ್ಪಷ್ಟವಾಗಿದೆ.
ಕಳೆದ ಲೋಕಸಭೆಯಲ್ಲಿ ಬಿಜೆಪಿಗೆ ಸೇರಿದ್ದ 25 ಮಂದಿ ಸದಸ್ಯರು. ಇವರಲ್ಲಿ ಯಾರೊಬ್ಬರಾದರೂ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದಾರೆಯೇ? ಈ ಬಾರಿ ಕರ್ನಾಟಕ ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಸೇರಿರುವ 19 ಸಂಸದರು, ಇವರು ಒಂದು ದಿನವಾದರೂ ಲೋಕಸಭೆಯಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಪ್ರಸ್ತಾಪಿಸಿದ್ದಾರೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
SCSP/TSP ಕಾಯ್ದೆ ಜಾರಿಗೆ ತನ್ನಿ: ಸಿಎಂ ಸವಾಲು
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಅವರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ನಲ್ಲಿ ಹಣ ಮೀಸಲಿಡುವ ಐತಿಹಾಸಿಕ ಎಸ್ಸಿಎಸ್ಪಿ/ಟಿಎಸ್ಪಿ ಕಾಯ್ದೆಯನ್ನು ಜಾರಿಗೆ ತಂದಿರುವುದು ನಮ್ಮ ಸರ್ಕಾರ. ಪ್ರಸಕ್ತ ಸಾಲಿನ ನಮ್ಮ ಸರ್ಕಾರದ ಬಜೆಟ್ ಗಾತ್ರ ರೂ.3,71,383 ಕೋಟಿ, ಅದರಲ್ಲಿ ರೂ. 39,121 ಕೋಟಿಯನ್ನು ಎಸ್ಸಿಎಸ್ಪಿ/ಟಿಎಸ್ಪಿ ಯೋಜನೆಗೆ ಮೀಸಲಿಟ್ಟಿದ್ದೇವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಕೇಂದ್ರ ಸರ್ಕಾರದ ನಾಯಕರು ನಾವು ದಲಿತರ ಪರ ಎಂದು ಭಾಷಣ ಮಾಡುತ್ತಾರೆ.
ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆಯಲ್ಲಿ ಕರುನಾಡಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಕನ್ನಡಿಗರೆಲ್ಲರೂ ಒಗ್ಗೂಡಿ ಧ್ವನಿಯೆತ್ತಬೇಕಿದೆ.
— CM of Karnataka (@CMofKarnataka) October 14, 2024
ಇನ್ನೆಷ್ಟು ಕಾಲ ಈ ಅನ್ಯಾಯವನ್ನು ಸಹಿಸಿಕೊಂಡಿರಲು ಸಾಧ್ಯ?
- ಮುಖ್ಯಮಂತ್ರಿ @siddaramaiah#ನನ್ನತೆರಿಗೆ_ನನ್ನಹಕ್ಕು #OurTax_OurRight pic.twitter.com/5rAOTlo4yW
ಹಾಗಿದ್ದರೆ ಇಡೀ ರಾಷ್ಟ್ರಮಟ್ಟದಲ್ಲಿ ಎಸ್ಸಿಎಸ್ಪಿ/ಟಿಎಸ್ಪಿ ಕಾಯ್ದೆಯನ್ನು ಯಾಕೆ ಜಾರಿಗೆ ತರುತ್ತಿಲ್ಲ? ಇದಕ್ಕೆ ನರೇಂದ್ರ ಮೋದಿ, ಅಮಿತ್ ಶಾ, ಆರ್.ಅಶೋಕ್, ವಿಜಯೇಂದ್ರ ಮೊದಲಾದ ಬಿಜೆಪಿ ನಾಯಕರು ನಾಯಕರು ಏನು ಹೇಳುತ್ತಾರೆ?
ತೆರಿಗೆ ಕಟ್ಟುವುದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಆದರೆ ಕೇಂದ್ರದಿಂದ ನಮ್ಮ ಪಾಲು ವಾಪಾಸ್ ಪಡೆಯುವುದರಲ್ಲಿ ಕೊನೆಯ ಸ್ಥಾನದಲ್ಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಈ.ತುಕಾರಾಮ್ ಅವರು ಈ ಬಾರಿ ಶಾಸಕರಾದ ಬಳಿಕ ₹1,200 ಕೋಟಿ ಅನುದಾನವನ್ನು ಸಂಡೂರು ಜನತೆಗಾಗಿ ತಂದಿದ್ದಾರೆ. ಅಭಿವೃದ್ಧಿ ಎಂದರೆ ತುಕಾರಾಮ್. ತುಕಾರಾಮ್ ಎಂದರೆ ಅಭಿವೃದ್ಧಿ. ಈ.ತುಕಾರಾಮ್ ಅವರು ನನ್ನ ಬಲವಂತಕ್ಕೆ, ಪಕ್ಷದ ಮಾತಿಗೆ ಬೆಲೆ ಕೊಟ್ಟು ಲೋಕಸಭೆಗೆ ಸ್ಪರ್ಧಿಸಿದರು. ಈ.ತುಕರಾಮ್ ಅವರು ಸಂಡೂರು ಜನತೆಯ ಮೇಲೆ ಬಹಳ ಪ್ರೀತಿ, ವಿಶ್ವಾಸ ಇಟ್ಟುಕೊಂಡಿದ್ದಾರೆ ಎಂದು ಬಣ್ಣಿಸಿದರು.












Click it and Unblock the Notifications