ಸಚಿವ ಸ್ಥಾನಕ್ಕೆ ಎನ್.ಮಹೇಶ್ ರಾಜೀನಾಮೆ, ಮೈತ್ರಿ ಸರ್ಕಾರಕ್ಕೆ ಪೆಟ್ಟು
Recommended Video

ಬೆಂಗಳೂರು, ಅಕ್ಟೋಬರ್ 11: ಮೈತ್ರಿ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಎನ್.ಮಹೇಶ್ ಅವರು ಹಠಾತ್ತನೆ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಎಸ್ಪಿ ಪಕ್ಷದಿಂದ ಅವರು ಆರಿಸಿ ಬಂದಿದ್ದರು.
ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಇಂದು ಸಂಜೆ ರವಾನಿಸಿದ್ದಾರೆ. ನಾಲ್ಕು ತಿಂಗಳಿಂದ ಸಚಿವನಾಗಿ ಕೆಲಸ ಮಾಡಿದ್ದೇನೆ, ಇದರ ನಡುವೆ ಪಕ್ಷದ ಕೆಲಸ, ಕ್ಷೇತ್ರದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಹಾಗಾಗಿ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೆ ಮಾಯಾವತಿ ಅವರು ಕಾಂಗ್ರೆಸ್ ಜೊತೆ ಮೈತ್ರಿಯನ್ನು ನಿರಾಕರಿಸಿದ್ದರು. ಅಲ್ಲದೆ ಕಾಂಗ್ರೆಸ್ ಮೇಲೆ ವಾಗ್ದಾಳಿ ಸಹ ನಡೆಸಿದ್ದರು. ಅವರು ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಬಿಎಸ್ಪಿ ಪಕ್ಷದಿಂದ ಗೆದ್ದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮಂತ್ರಿ ಆಗಿದ್ದ ಮಹೇಶ್ ಅದೇ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೊಳ್ಳೆಗಾಲದಿಂದ ಆಯ್ಕೆ ಆಗಿದ್ದ ಅವರು, ಪ್ರಸ್ತುತ ಮಂತ್ರಿ ಸ್ಥಾನಕ್ಕೆ ಮಾತ್ರವೇ ರಾಜೀನಾಮೆ ನೀಡಿದ್ದೇನೆ. ಶಾಸಕ ಸ್ಥಾನಕ್ಕೆ ಅಲ್ಲ. ಸರ್ಕಾರಕ್ಕೆ ನನ್ನ ಬೆಂಬಲವನ್ನು ಮುಂದುವರೆಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜೀನಾಮೆಗೆ ಮುನ್ನಾ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವುದಾಗಿ ಹೇಳಿದ ಅವರು, ನಾನು ಕುಮಾರಸ್ವಾಮಿ ಅಥವಾ ಸರ್ಕಾರದ ವಿರೋಧಿ ಅಲ್ಲ. ಉಪಚುನಾವಣೆಯಲ್ಲಿಯೂ ಸಹ ಜೆಡಿಎಸ್ ಪರ ಪ್ರಚಾರ ಮಾಡಲು ಲಭ್ಯವಿರುತ್ತೇನೆ ಎಂದಿದ್ದಾರೆ.
ರಾಜ್ಯದಲ್ಲಿ ಬಿಎಸ್ಪಿ ಪಕ್ಷದ ಕೆಲಸಗಳು ಮೂಲೆಗುಂಪಾಗಿವೆ. ಲೋಕಸಭೆ ಚುನಾವಣೆ ಸನಿಹದಲ್ಲಿರುವ ಕಾರಣ ಪಕ್ಷವನ್ನು ಬಲಿಷ್ಠಪಡಿಸಬೇಕಿದೆ. ಅಲ್ಲದೆ ನನ್ನ ಕ್ಷೇತ್ರವಾದ ಕೊಳ್ಳೆಗಾಲಕ್ಕೂ ಹೆಚ್ಚು ಕಾಲಾವಕಾಶ ನೀಡಬೇಕಿದೆ ಹಾಗಾಗಿ ರಾಜೀನಾಮೆ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.












Click it and Unblock the Notifications