ತಮಿಳುನಾಡಿಗೆ ಕಾವೇರಿ ನೀರು: ಅಣೆಕಟ್ಟುಗಳಲ್ಲಿ ಸಂಗ್ರಹ ಕಡಿಮೆ ಎಂದ ಕರ್ನಾಟಕ
ಬೆಂಗಳೂರು, ಜೂನ್ 17: ಕರ್ನಾಟಕವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (ಸಿಡಬ್ಲ್ಯುಎಂಎ) ತನ್ನ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಕಡಿಮೆ ಇರುವ ಕಾರಣದಿಂದ ತಮಿಳುನಾಡಿಗೆ ಜೂನ್ ತಿಂಗಳ ಕಾವೇರಿ ನೀರನ್ನು ಬಿಡುಗಡೆ ಮಾಡುವ ಸ್ಥಿತಿಯಲ್ಲಿಲ್ಲ ಎಂದು ತಿಳಿಸಿದೆ.
ಸಿಡಬ್ಲ್ಯುಎಂಎ ಸಭೆಯಲ್ಲಿ ಅದರ ಅಧ್ಯಕ್ಷ ಸೌಮಿತ್ರ ಕುಮಾರ್ ಹಲ್ದಾರ್ ಅವರು, ಕರ್ನಾಟಕವು ರಾಜ್ಯಕ್ಕೆ ಮುಂಗಾರು ಮಳೆ ಬಂದರೆ ಮಾತ್ರ ನೀರು ಬಿಡುವ ಬಗ್ಗೆ ಪರಿಗಣಿಸಬಹುದು. ಪ್ರಸ್ತುತ, ಕಾವೇರಿ ಜಲಾನಯನ ಜಲಾಶಯಗಳಲ್ಲಿ ನೀರು ಸಂಗ್ರಹಣೆ ಕಡಿಮೆಯಾಗಿದೆ. ಒಳಹರಿವು ತುಂಬಾ ಕುಸಿತವಾಗಿದೆ ಎಂದು ತಿಳಿಸಿದ್ದಾರೆ.

ಈ ವರ್ಷ, ರಾಜ್ಯದಲ್ಲಿ ಇದುವರೆಗೆ ಮುಂಗಾರು ಮಳೆಯಲ್ಲಿ 50% ಕ್ಕಿಂತ ಹೆಚ್ಚು ಕೊರತೆ ದಾಖಲಾಗಿದೆ. ಸಭೆಯಲ್ಲಿ ತಮಿಳುನಾಡು ಯಾವುದೇ ವಿಳಂಬ ಮಾಡದೆ ಕರ್ನಾಟಕವು ಜೂನ್ ತಿಂಗಳ ಕೋಟಾ 9.19 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿತು ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಕರ್ನಾಟಕವು ಕಳೆದ ವರ್ಷ ಬಿಡುಗಡೆ ಮಾಡಿದ ಹೆಚ್ಚಿನ ಹೆಚ್ಚುವರಿ ನೀರಿನಿಂದ ಪ್ರಸ್ತುತ ತಮಿಳುನಾಡು ತನ್ನ ಮೆಟ್ಟೂರು ಜಲಾಶಯದಲ್ಲಿ ಜೂನ್ 1, 2023 ರಂತೆ 71 ಟಿಎಂಸಿ ಅಡಿ ನೀರು ಸಂಗ್ರಹಣೆಯೊಂದಿಗೆ ಸಾಕಷ್ಟು ಆರಾಮದಾಯಕ ಸ್ಥಿತಿಯಲ್ಲಿದೆ ಎಂದು ಹೇಳಿದೆ. ಈ ನೀರು ತಮಿಳುನಾಡಿಗೆ ಆಗಸ್ಟ್ ಮಧ್ಯದವರೆಗೆ ಸಾಕಾಗುತ್ತದೆ ಎಂದು ಕರ್ನಾಟಕ ಸಭೆಯಲ್ಲಿ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.
ತಮಿಳುನಾಡಿಗೆ ಅದರ ಪಾಲಿನ ನೀರು ಬಿಡುವಂತೆ ಪ್ರಾಧಿಕಾರದ ಅಧ್ಯಕ್ಷರು ಕರ್ನಾಟಕಕ್ಕೆ ಸೂಚಿಸಿದ್ದರೂ ಅವರು ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಕೊರತೆ ಮಳೆಯ ವರ್ಷದಲ್ಲಿ ನದಿಯ ಮೇಲ್ಭಾಗದ ರಾಜ್ಯದಿಂದ ಕೆಳಗಿನ ನದಿಯ ರಾಜ್ಯಕ್ಕೆ ನೀರು ಬಿಡುವ ಕುರಿತು ಸಂಕಷ್ಟ ಸೂತ್ರವನ್ನು ರೂಪಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಆದರೆ, ಪ್ರಸ್ತಾವಿತ ಮೇಕೆದಾಟು ಜಲಾಶಯದ ವಿಷಯ ಸಭೆಯಲ್ಲಿ ಪ್ರಸ್ತಾಪವಾಗಲಿಲ್ಲ.
ಇದೇ ಫೆಬ್ರವರಿಯಲ್ಲಿ ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ಹೆಚ್ಚುವರಿ ಅರ್ಜಿ ಸಲ್ಲಿಸಿತ್ತು. ಬೆಂಗಳೂರು ಮಹಾನಗರ ಪಾಲಿಕೆ ಯೋಜನೆಗೆ ಕಾವೇರಿ ನೀರು ಹರಿಸುವುದನ್ನು ಕರ್ನಾಟಕ ಸರ್ಕಾರ ನಿಷೇಧಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿತ್ತು.
ಕರ್ನಾಟಕದಿಂದ ತಮಿಳುನಾಡಿನ ಬಿಳಿಗುಂಡ್ಲುವಿಗೆ 667.24 ಟಿಎಂಸಿ ನೀರು ಹರಿದು ಹೋಗಿದೆ ಎಂದು ವರದಿಗಳು ಇತ್ತೀಚೆಗೆ ತಿಳಿಸಿದ್ದವು. ಜೂನ್ 1, 2022 ರಿಂದ ಮೇ 31, 2023 ರವರೆಗೆ 667.24 ಟಿಎಂಸಿ ಅಡಿ ಕಾವೇರಿ ನೀರು ತಮಿಳುನಾಡಿನ ಬಿಳಿಗುಂಡ್ಲು (ಬಿಳಿಗುಂಡಲ) ಸಂಗ್ರಹ ಕೇಂದ್ರವನ್ನು ತಲುಪಿದೆ. ಇದುವರೆಗೆ ಬಿಳಿಗುಂಡ್ಲುವಿಗೆ ಬಂದಿರುವ ಅತಿ ಹೆಚ್ಚು ನೀರು ಇದಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿದ್ದವು.











Click it and Unblock the Notifications