ಪ್ಲ್ಯಾನ್ ಇದೆ... ಏನು ಎಂದು ಆಮೇಲೆ ಹೇಳ್ತೀವಿ: ಡಿಕೆ ಶಿವಕುಮಾರ್
ಬೆಂಗಳೂರು, ಮೇ 16: ಸರ್ಕಾರ ರಚನೆಗೆ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ಮುಂದಾಗುತ್ತಿರುವಂತೆಯೇ ಅವರನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಕೂಡ ಕಸರತ್ತು ನಡೆಸಿದೆ.
'ಖಂಡಿತವಾಗಿ ನಮ್ಮ ಬಳಿ ಉಪಾಯವಿದೆ. ನಾವು ನಮ್ಮ ಶಾಸಕರನ್ನು ಉಳಿಸಿಕೊಳ್ಳಬೇಕಿದೆ. ಆ ಪ್ಲ್ಯಾನ್ ಏನು ಎಂಬುದನ್ನು ಮುಂದೆ ಹೇಳ್ತೀವಿ' ಎಂದು ಡಿಕೆ ಶಿವಕುಮಾರ್ ಅವರು ತಮ್ಮ ಮುಂದಿನ ಯೋಜನೆಯ ಗುಟ್ಟುಬಿಡಲು ನಿರಾಕರಿಸಿದ್ದಾರೆ.
ಬಿಜೆಪಿಯವರು ನಮ್ಮ ಶಾಸಕರಿಗೆ ಗಾಳ ಹಾಕುತ್ತಿದ್ದಾರೆ. ಅದು ನಮಗೆ ಗೊತ್ತಿದೆ. ನಮ್ಮ ಎಲ್ಲ ಶಾಸಕರಿಗೂ ಬಿಜೆಪಿಯವರಿಂದ ಕರೆ ಬಂದಿದೆ. ಅವರಾರೂ ಅಲ್ಲಿಗೆ ಹೋಗುವುದಿಲ್ಲ. ಹೋಗಲು ವೋಟ್ ಹಾಕಿರುವ ಜನರು ಬಿಡುವುದೂ ಇಲ್ಲ.

ಬಿಜೆಪಿಯವರಿಂದ ಬಂದಿರುವ ಕರೆಗಳ ಪಟ್ಟಿಯನ್ನು ಬೇಕಾದರೆ ನೀಡುತ್ತೇವೆ. ನಮ್ಮ ಮೇಲೆ ತೀವ್ರವಾದ ಒತ್ತಡ ಇದೆ. ಆದರೆ, ನಮಗೂ ರಾಜಕಾರಣ ಗೊತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸರ್ಕಾರ ರಚನೆಗೆ ಬೇಕಿರುವ ಎಂಟು ಶಾಸಕರನ್ನು ಸೆಳೆದುಕೊಳ್ಳಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಹೀಗಾಗಿ ಆಪರೇಷನ್ ಕಮಲದ ಭಯದಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನು ಉಳಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿದ್ದಾರೆ.
ಬಿಜೆಪಿಯವರು ಫೋನ್ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸೆಳೆದುಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಯಾವ ಶಾಸಕರೂ ನೇರವಾಗಿ ಅವರ ಸಂಪರ್ಕಕ್ಕೆ ಸಿಗದಂತೆ ನೋಡಿಕೊಳ್ಳಲು ಪಕ್ಷದ ನಾಯಕರು ತಂತ್ರಗಳನ್ನು ರೂಪಿಸುತ್ತಿದ್ದಾರೆ.












Click it and Unblock the Notifications