ಕನ್ನಡಿಗರಿಗೆ ಉದ್ಯೋಗ, ಅದೇ ನಿಜವಾದ ರಾಜ್ಯೋತ್ಸವ
ಕರ್ನಾಟಕ ಸರಕಾರದಿಂದ ಭೂಮಿಯಿಂದ ಹಿಡಿದು ಎಲ್ಲ ಸವಲತ್ತುಗಳನ್ನು ಪಡೆದುಕೊಂಡಿರುವ, ಪಡೆದುಕೊಳ್ಳುತ್ತಿರುವ ಎಷ್ಟು ಖಾಸಗಿ ಕಂಪನಿಗಳು ಇಂದು ಕನ್ನಡಿಗರಿಗೆ ಕೆಲಸ ನೀಡಿವೆ? ಕೇಂದ್ರದ ಅಧೀನದಲ್ಲಿರುವ ಎಷ್ಟು ಉದ್ಯಮಗಳು ಕನ್ನಡ ಮಣ್ಣಿನ ಋಣ ತೀರಿಸಿವೆ? ಎಷ್ಟು ಜನ ಅರ್ಹ ಕನ್ನಡಿಗರು ತಮ್ಮ ಉದ್ಯೋಗದ ಹಕ್ಕನ್ನು ಪಡೆದುಕೊಂಡಿದ್ದಾರೆ?
ಈ ಪ್ರಶ್ನೆಗಳಿಗೆ ಉತ್ತರ ಎಲ್ಲರಿಗೂ ಗೊತ್ತಿದ್ದಂಥ ವಿಚಾರ. ಕನ್ನಡಿಗ ಇಂದು ಕನ್ನಡ ನಾಡಿನಲ್ಲಿಯೇ ಕೆಲಸಕ್ಕಾಗಿ ಕೈಬೇಡುವಂತಾಗಿದೆ, ಕೆಲಸವಿದ್ದರೂ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಮಲತಾಯಿ ಧೋರಣೆ ಅನುಭವಿಸುವಂತಾಗಿದೆ. ಕನ್ನಡಿಗರಿಗೆ ಕೆಲಸ ಕೊಡುವುದಿರಲಿ, ಪರಭಾಷೆಯವರ ದಬ್ಬಾಳಿಕೆಗೆ ಕನ್ನಡಿಗರೇ ಕನ್ನಡ ನೆಲದಲ್ಲಿ ನಲುಗುವಂತಾಗಿದೆ.
ರಾಜ್ಯದ ಎಲ್ಲ ವಲಯದ ಉದ್ಯಮಗಳಲ್ಲಿ ಕನ್ನಡಿಗರಿಗೆ ಶೇ.80ರಷ್ಟು ಮತ್ತು ಕೇಂದ್ರದ ಅಧೀನದಲ್ಲಿರುವ ಸಂಸ್ಥೆಗಳಲ್ಲಿ ಶೇ.65ರಷ್ಟು ಕೆಲಸ ನೀಡಬೇಕೆಂದು ಶಿಫಾರಸು ಮಾಡಿ, 1983ರಲ್ಲಿಯೇ ಡಾ. ಸರೋಜಿನಿ ಮಹಿಷಿ ಸಲ್ಲಿಸಿದ ವರದಿ, ರಾಜಕಾರಣಿಗಳ, ಕನ್ನಡದ ಕೆಲಸಕ್ಕಾಗಿ ಹುಟ್ಟುಹಾಕಿರುವ ಪ್ರಾಧಿಕಾರಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇನ್ನೂ ಜಾರಿಗೆ ಬಂದಿಲ್ಲ.
ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಬಂದೇ ಬರುತ್ತದೆ, ಇಂಥ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ, ಕನ್ನಡಿಗನಿಗೆ ಮಾತ್ರ ಕೆಲಸ ಮರೀಚಿಕೆಯಾಗಿದೆ. ಕನ್ನಡ ಬಾವುಟ ಹಾರಿಸಿ, ಕನ್ನಡ ಪ್ರೇಮ ಸಾರುವ ವೃಂದಗಾನಗಳನ್ನು ಹಾಡಿ, ಭಾಷಣ ಬಿಗಿದು ಈ ವರ್ಷದ ಕೆಲಸ ಮುಗಿಯಿತು ಎಂದುಕೊಂಡರೆ ಆಗುವುದಿಲ್ಲ. ಕನ್ನಡಿಗನ ನಿರುದ್ಯೋಗವನ್ನು ನೀಗಿದಾಗ ಮಾತ್ರ ಅದು ನಿಜವಾದ ಕನ್ನಡ ರಾಜ್ಯೋತ್ಸವ. ಇಲ್ಲದಿದ್ದರೆ, ಕನ್ನಡಿಗನ ಕೆಲಸವನ್ನು ಕಿತ್ತುಕೊಂಡರೆ ಅದು ಕನ್ನಡಿಗನಿಗೆ, ಕನ್ನಡ ಮಾತೆಗೆ ಬಗೆದ ದ್ರೋಹದಂತೆ.
ಈ ನಿಟ್ಟಿನಲ್ಲಿ ಸರಕಾರದಿಂದ ರಚಿತವಾದ ಎಷ್ಟು ಇಲಾಖೆಗಳು, ಪ್ರಾಧಿಕಾರಗಳು, ಎಷ್ಟು ಸಂಘಟನೆಗಳು ನಿರಂತರವಾಗಿ ಹೋರಾಟಕ್ಕಿಳಿದಿವೆ ಎಂದು ತಿರುಗಿ ನೋಡಿದಾಗ, 1999ರಲ್ಲಿ 'ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು' ಎಂಬ ಘೋಷವಾಕ್ಯದೊಂದಿಗೆ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಇಂದು ತಕ್ಕಮಟ್ಟಿಗೆ ಹೋರಾಟದ ಹಾದಿಯಲ್ಲಿ ನಿರಂತರವಾಗಿ ಸಾಗಿದೆ.
ಕರವೇಯ ಚುಕ್ಕಾಣಿ ಹಿಡಿದಿರುವ, ಕನ್ನಡಕ್ಕಾಗಿ ಯಾವತ್ತೂ ಹೋರಾಡಲು ಸಿದ್ಧರಾಗಿರುವ, ಕನ್ನಡಕ್ಕಾಗಿ ಹಲವಾರು ಆಸೆಗಳನ್ನು ಕಣ್ಣಲ್ಲಿ ಕಟ್ಟಿಕೊಂಡಿರುವ ಕರವೇ ಸಂಸ್ಥಾಪಕರಲ್ಲೊಬ್ಬರಾದ ಟಿ.ಎ. ನಾರಾಯಣ ಗೌಡರು ಇಟ್ಟ ಹೆಜ್ಜೆಯನ್ನು ಹಿಂದಿಟ್ಟಿಲ್ಲ. ಎಷ್ಟೇ ಅಡೆತಡೆಗಳು, ಎಷ್ಟೇ ಟೀಕೆಟಿಪ್ಪಣಿಗಳು, ಅವರ ನಿಷ್ಠೆಯ ಬಗ್ಗೆ ಎಷ್ಟೇ ಅನುಮಾನಗಳು ಎದುರಾದರೂ 50 ಲಕ್ಷ ಕಾರ್ಯಕರ್ತರ ಸೈನ್ಯ ಕಟ್ಟಿಕೊಂಡು ಕನ್ನಡ ನಾಡಲ್ಲಿ ಇಂದು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾರೆ. 58ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಒನ್ಇಂಡಿಯಾ ಜೊತೆ ಅವರು ತಮ್ಮ ಕನಸು, ಕನವರಿಕೆಗಳನ್ನು ಹರವಿಕೊಂಡಿದ್ದಾರೆ. ಸಂದರ್ಶನದ ವಿವರಗಳು ಮುಂದಿವೆ.