ರಾಜ್ಯಸಭಾ ಚುನಾವಣೆ: ಜೆಡಿಎಸ್, ಕಾಂಗ್ರೆಸ್ಸಿಗೆ ಮುಖಭಂಗ, ಡಿಕೆಶಿ ಬೇಸರದ ಪ್ರತಿಕ್ರಿಯೆ
ಬೆಂಗಳೂರು, ಜೂನ್ 10: ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ರಾಜ್ಯಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಮೂರು ಸ್ಥಾನ ಗೆದ್ದರೆ, ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದಿದೆ. ಆ ಮೂಲಕ, ಜೆಡಿಎಸ್-ಕಾಂಗ್ರೆಸ್ಸಿನ ಜಿದ್ದಿನ ಲಾಭವನ್ನು ಬಿಜೆಪಿ ಪಡೆದುಕೊಂಡಿದೆ.
ಹಲವು ಕುತೂಹಲಕ್ಕೆ ಕಾರಣವಾಗಿದ್ದ ಈ ಚುನಾವಣೆಯಲ್ಲಿ ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಲೆಹರ್ ಸಿಂಗ್ ಮತ್ತು ಕಾಂಗ್ರೆಸ್ಸಿನಿಂದ ಜೈರಾಂ ರಮೇಶ್ ಜಯಗಳಿಸಿದ್ದಾರೆ. ಜೆಡಿಎಸ್ಸಿನಿಂದ ಕುಪೇಂದ್ರ ರೆಡ್ಡಿ ಮತ್ತು ಕಾಂಗ್ರೆಸ್ಸಿನಿಂದ ಎರಡನೇ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮನ್ಸೂರ್ ಆಲಿ ಖಾನ್ ಸೋಲುಂಡಿದ್ದಾರೆ.
ಈ ಬಗ್ಗೆ ಬೇಸರದ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, "ನನಗೆ ಜಾತ್ಯಾತೀತ ಶಕ್ತಿಗಳೆಲ್ಲಾ ಒಂದಾಗುತ್ತದೆ ಎನ್ನುವ ವಿಶ್ವಾಸವಿತ್ತು. ಜೆಡಿಎಸ್ ನವರು ನಮಗೆ ಬೆಂಬಲ ಕೊಡಬಹುದು ಎಂದು ನಿರೀಕ್ಷಿಸಿದ್ದೆವು, ಅದೇ ರೀತಿಯಲ್ಲಿ ಅವರಿಗೆ ನಾವು ಬೆಂಬಲ ಕೊಡಬಹುದು ಎನ್ನುವ ನಿರೀಕ್ಷೆಯಲ್ಲಿ ಅವರಿದ್ದರು, ಆದರೆ ಅದು ಆಗಲಿಲ್ಲ"ಎಂದು ಬೇಸರ ವ್ಯಕ್ತ ಪಡಿಸಿದರು.

" ಈ ಸೋಲಿನ ಬಗ್ಗೆ ನೋವಿದೆ, ಹೊಂದಾಣಿಕೆಯಾಗಲಿಲ್ಲ. ಬಿಜೆಪಿಯವರು ಆಪರೇಶನ್ ಕಮಲದ ಮೂಲಕ ನಮ್ಮ ಶಾಸಕರು ಸೆಳೆದುಕೊಂಡರು. ಇಲ್ಲದಿದ್ದರೆ ಅವರಿಗೆ ಒಂದು ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಾಗುತ್ತಿತ್ತು"ಎಂದು ಡಿಕೆಶಿ ಹೇಳಿದರು.
"ಎಲ್ಲರಿಗೂ ಸ್ವಾಭಿಮಾನ ಎನ್ನುವುದು ಇರುತ್ತದೆ, ಈಗ ಅದನ್ನೆಲ್ಲಾ ಚಿಂತಿಸಿ ಪ್ರಯೋಜನವಿಲ್ಲ. ಈ ಹಿಂದಿನ ಚುನಾವಣೆಯಲ್ಲೂ ಹೊಂದಾಣಿಕೆಯ ಕೊರತೆಯಾಗಿತ್ತು. ಈ ಬಗ್ಗೆ ಮಾತನಾಡಿ ಹೆಚ್ಚಿನ ಪ್ರಯೋಜನವಾಗುವುದಿಲ್ಲ"ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

"ಬಿಜೆಪಿ ಗೆಲುವಿಗೆ ಸಿದ್ದರಾಮಯ್ಯನವರ ಮೇಲೆ ಆರೋಪ ಹೊರಿಸಿದರೆ ಪ್ರಯೋಜನವಿಲ್ಲ. ಎಲ್ಲರೂ ಅವರವರ ಸಂಖ್ಯೆಯ ಆಧಾರದ ಮೇಲೆ ಚುನಾವಣೆ ಗೆದ್ದಿದ್ದಾರೆ"ಎನ್ನುವ ಮೂಲಕ ಎಚ್.ಡಿ.ಕುಮಾರಸ್ವಾಮಿಯವರ ಆರೋಪಕ್ಕೆ ಹುರುಳಿಲ್ಲ ಎಂದು ಹೇಳಿದರು.












Click it and Unblock the Notifications