Rain Alert: ಕರ್ನಾಟಕದ 06 ಜಿಲ್ಲೆಗಳಿಗೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಮುನ್ಸೂಚನೆ
ಬೆಂಗಳೂರು, ಸೆಪ್ಟಂಬರ್ 10: ಕರ್ನಾಟಕ ರಾಜ್ಯದಲ್ಲಿ ಇನ್ನೂ ಕೆಲವು ದಿನಗಳ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೆಪ್ಟಂಬರ್ 13ರವರೆಗೆ ರಾಜ್ಯದ ಸುಮಾರು ಆರು ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ. ಗರಿಷ್ಠ 11ಸೆಂಟಿ ಮೀಟರ್ನಷ್ಟು ಮಳೆ ಆಗಬಹುದು ಎಂದು ಮುನ್ಸೂಚನಾ ವರದಿಯಲ್ಲಿ ತಿಳಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳ ಮೇಲೆ ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿನ ಹವಾಮಾನ ವೈಪರಿತ್ಯಗಳ ಪ್ರಭಾವ ಮುಂದುವರಿದಿದೆ. ಇದರಿಂದಾಗಿ ಮುಂದಿನ ಮೂರು ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಜೋರು ಗಾಳಿ ಸಹಿತ ಸಾಧಾರಣದಿಂದ ಭಾರೀ ಮಳೆ ಆಗಲಿದೆ.

ಹವಾಮಾನ ವರದಿ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಹಾಗೂ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಎರಡರಿಂದ ಮೂರು ದಿನ ಭಾರೀ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂಗಾರು ಆರಂಭವಾದಾಗಿನಿಂದ ಅಂದರೆ ಜೂನ್ ಅಂತ್ಯದಿಂದ ಈವರೆಗೆ ಈ ಎರಡು ಭಾಗಗಳಲ್ಲಿ ಹೆಚ್ಚಿನ ಮಳೆ ದಾಖಲಾಗಿದೆ.
ಒಳನಾಡು ಜಿಲ್ಲೆಗಳಲ್ಲಿ ಏನಿದೆ ಮಳೆ ಎಚ್ಚರಿಕೆ
ಒಳನಾಡು ಜಿಲ್ಲೆಗಳಾದ ಬಾಗಲಕೋಟೆ, ಧಾರವಾಡ, ವಿಜಯಪುರ, ಹಾವೇರಿ, ಕೊಪ್ಪಳ, ಗದಗ, ರಾಯಚೂರು, ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಷ್ಟಾಗಿ ಜೋರು ಮಳೆ ಪ್ರಭಾವ ಇಲ್ಲದಿದ್ದರೂ, ಆಗೊಮ್ಮೆ ಈಗೊಮ್ಮೆ ತುಂತುರು ಮಳೆಯ ದರ್ಶನವಾಗಲಿದೆ.

ಅದೇ ರೀತಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಹಾಸನ, ತುಮಕೂರು, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಲಘು ಮಳೆ, ಕೆಲವೊಮ್ಮೆ ವ್ಯಾಪಕ ಮಳೆ ಕಂಡು ಬರುವ ಸಾಧ್ಯತೆ ಇದೆ.
ನೆನ್ನೆ ಮಲೆನಾಡಿನಲ್ಲಿ ಜೋರು ಮಳೆ
ಕಳೆದ 24 ಗಂಟೆಯಲ್ಲಿ ರಾಜ್ಯದ ತಲಕಾವೇರಿಯಲ್ಲಿ 65.6ಮಿ.ಮೀ, ಭಾಗಮಂಡಲ 60ಮಿ.ಮೀ, ಮಡಿಕೇರಿ 55.4ಮಿ.ಮೀ, ಶಾಂತಳ್ಳಿ 48ಮಿ.ಮೀ, ಶ್ರೀಮಂಗಲ 45 ಮಿ.ಮೀ, ಪೊನಂಪೇಟೆ 36ಮಿ.ಮೀ, ನಾಪೋಕ್ಲು 34.4ಮಿ.ಮೀ, ಸಂಪಾಜೆ 34ಮಿ.ಮೀ, ಶನಿವಾರಸಂತೆ 24ಮಿ.ಮೀ, ಹುದಿಕೆರೆ 23.6ಮಿ.ಮೀ, ಅಮ್ಮತ್ತಿ 22ಮಿ.ಮೀ, ಸುಂಟಿಕೊಪ್ಪ 20ಮಿ.ಮೀ, ವಿರಾಜಪೇಟೆ 19.8ಮಿ.ಮೀ ಮತ್ತು ಸೋಮವಾರಪೇಟೆಯಲ್ಲಿ 16.8ಮಿ.ಮೀ ಆಗಿದೆ. ಇದೆಲ್ಲ ನೋಡಿದರೆ ಮಲೆನಾಡಿನ ಭಾಗದಲ್ಲಿ ಅತ್ಯಧಿಕ ಮಳೆ ಆಗುತ್ತಿರುವುದು ಗೊತ್ತಾಗುತ್ತದೆ.












Click it and Unblock the Notifications