Karnataka Rain: ರಾಜ್ಯದ ಈ ಜಿಲ್ಲೆಗಳಲ್ಲಿ ಮಾತ್ರ ಇಂದು ಬಿರುಗಾಳಿ, ಗುಡುಗು ಸಹಿತ ಮಳೆ ಆರ್ಭಟ
ಕರ್ನಾಟಕ, ಜೂನ್, 12: ರಾಜ್ಯಕ್ಕೆ ಈಗಾಗಲೇ ಮುಂಗಾರು ಪ್ರವೇಶ ಮಾಡಿದ್ದು, ಇದರಿಂದ ಕೆಲವೇ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕೆಲವೆಡೆ ಮಾತ್ರ ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ಇನ್ನು ಹಲವೆಡೆ ಮಳೆಯೇ ಇಲ್ಲದಂತಾಗಿದೆ. ಭಾನುವಾರ (ಜೂನ್ 11) ಕರಾವಳಿ ಸೇರಿದಂತೆ ಹಲವೆಡೆ ಮಾತ್ರ ಮಳೆಯಾಗಿದೆ. ಇಂದು ಕೂಡ ರಾಜ್ಯದ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೂ ಬಿಸಿಲಿನ ವಾತಾವರಣವೇ ಮುಂದುವರೆದಿತ್ತು. ಬಳಿಕ ನಗರದ ಹಲವೆಡೆ ತುಂತುರು ಮಳೆಯಾದರೆ, ಮತ್ತೆ ಕೆಲವೆಡೆ ಮೋಡ ಕವಿದ ವಾತಾವರಣ ಅಷ್ಟೇ ಮುಂದುವರೆದಿತ್ತು. ಇಂದು (ಸೋಮವಾರ) ಬೆಳಗ್ಗೆಯಿಂದ ಬಿಸಿಲಿನ ವಾತಾವರಣ ಇದ್ದು, ಸಂಜೆ ವೇಳೆಗೆ ನಗರದ ಹಲವು ಭಾಗಗಳಲ್ಲಿ ವರುಣ ಆರ್ಭಟಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ರಾಜ್ಯಕ್ಕೆ ನೈಋತ್ಯ ಮುಂಗಾರು ಪ್ರವೇಶ ನಿಗದಿತ ಅವಧಿಗಿಂತ ವಿಳಂಬವಾಗಿದ್ದು, ಮುಂದಿನ 4 ದಿನಗಳ ಕಾಲ ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಕರಾವಳಿ ಸೇರಿದಂತೆ ಹಲವೆಡೆ ಭಾರೀ ಮಳೆ ಬೀಳುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಜೂನ್ 12ರಂದು ದಕ್ಷಿಣ ಒಳನಾಡು, ಕರಾವಳಿಯ ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳುವ ಸಂಭವ ಇದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ, ಹಾಸನ, ಶಿವಮೊಗ್ಗ, ಕೊಡಗು ಸೇರಿದಂತೆ ಬಹುತೇಕ ಜಿಲ್ಲೆಗಳು ಮತ್ತು ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಈ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಯೆಲ್ಲೋ ಅಲರ್ಟ್ ಸಹ ಘೋಷಣೆ ಮಾಡಲಾಗಿದೆ.
ಇನ್ನು ರಾಜ್ಯದ ಹಲವೆಡೆ ಮಳೆಯ ಜೊತೆ ಬಿರುಗಾಳಿ, ಗುಡುಗು ಮಿಂಚಿನ ಆರ್ಭಟ ಹೆಚ್ಚಿರಲಿದೆ. ಗಾಳಿಯ ವೇಗವು ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಇರಲಿದೆ. ಹಾಗೆಯೇ ಮಂಗಳವಾರವೂ ಕೂಡ ಗಾಳಿ ಇದೇ ರೀತಿಯ ವೇಗದಲ್ಲಿ ಇರಲಿದೆ. ಅಲ್ಲದೆ ರಾಜ್ಯದ ಕರಾವಳಿಯಲ್ಲಿ ಗಂಟೆಗೆ 40-45 ಮೀಟರ್ನಿಂದ 55 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ವಾತಾವರಣ ನಿರ್ಮಾಣವಾಗಲಿದೆ. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಹಾಗೆಯೇ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಮತ್ತೊಂದೆಡೆ ಈಗಾಗಲೇ ಭಾನುವಾರ (ಜೂನ್ 11) ಕರಾವಳಿಯ ಬಹುತೇಕ ಕಡೆಗಳಲ್ಲಿ, ದಕ್ಷಿಣ ಹಾಗೂ ಉತ್ತರ ಒಳನಾಡ ಕೆಲವು ಕಡೆಗಳಲ್ಲಿ ಭಾರೀ ಮಳೆ ಸುರಿದಿದೆ. ಇನ್ನು ಬಿಸಿಲು ನಾಡು ಅಂತಲೇ ಪ್ರಸಿದ್ಧಿ ಪಡೆಸಿರುವ ರಾಯೂಚರಿನ ಗಬ್ಬರಿನಲ್ಲಿ ಗರಿಷ್ಠ 7 ಸೆಂ.ಮೀ. ಮಳೆ ಆಗಿದೆ.
ಅಲ್ಲದೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಹೊನ್ನಾವರ ಹಾಗೂ ಅಂಕೋಲಾದಲ್ಲಿ ತಲಾ 6 ಸೆಂ.ಮೀ. ಮಳೆ ಬಿದ್ದಿದೆ. ಇನ್ನು ಕುಂದಾಪುರ, ಕೋಟ, ಮಂಕಿ ಹಾಗೂ ಭಾಲ್ಕಿಯಲ್ಲಿ 5, ಮಂಗಳೂರು, ಸಿದ್ದಾಪುರದಲ್ಲಿ 4, ಕ್ಯಾಸಲ್ ರಾಕ್, ಕದ್ರಾ, ಜಗಲಪೇಟ್, ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ, ಬೆಳ್ತಂಗಡಿ, ಕಾರ್ಕಳ, ಕುಷ್ಟಗಿ, ಸಂತಪುರ, ಭಾಗಮಂಡಲದಲ್ಲಿ 3 ಸೆಂ. ಮೀ. ಮಳೆ ಬಿದ್ದಿದೆ ಎಂದು ತಿಳಿಸಿದೆ.
ಜೂನ್ 8ರಂದು ಮುಂಗಾರು ಮಳೆ ಕೇರಳ ರಾಜ್ಯವನ್ನು ಪ್ರವೇಶ ಮಾಡಿತ್ತು. ಈ ಮೂಲಕ ದೇಶದಲ್ಲಿ ಮುಂಗಾರು ಆರಂಭ ಆಗಿದೆ. ಅಲ್ಲದೆ ಇದೀಗ ರಾಜ್ಯಕ್ಕೂ ಮುಂಗಾರು ಪ್ರವೆಶ ಕೊಟ್ಟಿರುವ ಹಿನ್ನೆಲೆ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಇನ್ನೂ ಕೆಲವೆಡೆ ಮಳೆಯೇ ಇಲ್ಲದೆ ಅನ್ನದಾತರು ಬೇಸಿಗೆ ಬೆಳೆಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಬಿಸಿಲ ನಾಡು ರಾಯಚೂರು ಜಿಲ್ಲೆಯಲ್ಲೇ ನಿನ್ನೆ ತುಂತುರು ಮಳೆಯಾಗಿದ್ದು, ಇದರಿಂದ ಇಲ್ಲಿನ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಕೆಲವು ಕಡೆ ಈಗಲೂ ಮಳೆ ಬಿದ್ದಿಲ್ಲ ಎಂದು ಜನರು ದೇವರ ಮೊರೆ ಹೋಗಿ ವಿಶೇಷ ಪೂಜೆಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ಮಳೆ ಬರಲಿ ಎಂದು ಕಪ್ಪೆಗಳು, ಕತ್ತೆಗಳ ಮದುವೆ ಸೇರಿದಂತೆ ಇನ್ನಿತರ ಪ್ರಾಣಿಗಳ ಮದುವೆಯನ್ನು ಮಾಡಿ ಗಮನ ಸೆಳೆದಿದ್ದಾರೆ.












Click it and Unblock the Notifications