Karnataka Rain: ಸಿಹಿ ಸುದ್ದಿ: ಮೇ.11ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವರುಣಾರ್ಭಟ: ಹವಾಮಾನ ವರದಿ
ಬೆಂಗಳೂರು, ಮೇ 07: ಅತೀವ ಬಿಸಿಲು ಎದುರಿಸಿರುವ ಕರ್ನಾಟಕ ರಾಜ್ಯದಲ್ಲಿ ಒಂದು ಕಡೆ ಮಳೆ ಬಂದರೆ, ಮತ್ತೊಂದು ಕಡೆ ವಿಪರೀತ ಬಿಸಿಲು, ಶಾಖದ ಅಲೆ ಉಂಟಾಗುತ್ತಿತ್ತು. ಇದೀಗ ಸಿಹಿ ಸುದ್ದಿ ನೀಡಿರುವ ಹವಾಮಾನ ಇಲಾಖೆ ಕರ್ನಾಟಕದಾದ್ಯಂತ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಭಾರೀ ಮಳೆ ಆರ್ಭಟಿಸಲಿದೆ ಎಂದು ಮುನ್ಸೂಚನೆ ನೀಡಿದೆ.
ಕರ್ನಾಟಕದ ಮಲೆನಾಡು ಭಾಗಗಳನ್ನು ಒಳಗೊಂಡಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಈ ವರ್ಷ ಉರಿಬಿಸಿಲು ಕಂಡು ಬಂದಿದ್ದು, ಗರಿಷ್ಠ ತಾಪಮಾನ 47 ಡಿಸೆ ವರೆಗೆ ತಲುಪಿತ್ತು. ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದೆ. ಮುಂದಿನ ಮೂರು ದಿನ ಅಂದರೆ ಮೇ 11ರವೆಗೂ ರಾಜ್ಯದಲ್ಲಿ ತಾಪಮಾನದ ಹಾವಳಿ ಕಂಡು ಬರಲಿದೆ.

ಮೇ 11ರ ನಂತರ ರಾಜ್ಯದ ಜನರಿಗೆ ನಿಟ್ಟುಸಿರುವ ಬಿಡುವ ಮಾಹಿತಿ ಲಭಿಸಿದೆ. ಅಂದಿನಿಂದ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಗೂ ವೇಗದ ಗಾಳಿ ಸಹಿತ ಸಾಧಾರಣದಿಂದ ಭಾರೀ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ವೈಪರಿತ್ಯ: ದಿಢೀರ್ ಮಳೆ
ಬಂಗಾಳಕೊಲ್ಲಿ ಸಮುದ್ರದ ಆಗ್ನೇಯ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗಿದೆ. ತೇವಭರಿತ ಈ ವೈಪರಿತ್ಯವು (ಸುಳಿ ಗಾಳಿ) ತನ್ನ ಮೂಲ ದಿಕ್ಕಿನಿಂತ ಪೂರ್ವದ ಕಡೆಗೆ ಬೀಸಿದೆ. ಹೀಗಾಗಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಈ ಮಳೆ, ಮೇ 11ರ ಶನಿವಾರದಿಂದ ರಾಜ್ಯಾದ್ಯಂತ ವಿಸ್ತರಣೆಗೊಳ್ಳುವ ಸಂಭವವಿದೆ.
ಮುಂದಿನ ಮೂರು ದಿನ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಬಳ್ಳಾರಿ, ಶಿವಮೊಗ್ಗ, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಸೇರಿದಂತೆ ಈ ಭಾಗದ ಜಿಲ್ಲೆಗಳು ಹಾಗೂ ಕರಾವಳಿ ಮೂರು ಜಿಲ್ಲೆಗಳಲ್ಲಿ ಹಾಲಿ ಸಾಧಾರಣ ಮಟ್ಟದ ಬಿಸಿಲಿನ ಉರಿ ಕಂಡು ಬರಲಿದೆ.

ಉತ್ತರ ಕರ್ನಾಟಕಕ್ಕೆ ಭಾರೀ ಬಿಸಿಲು, ಶಾಖದ ಅಲೆ
ಇದೇ ಅವಧಿಯಲ್ಲಿ ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೀದರ್, ಕೊಪ್ಪಳ, ಯಾದಗಿರಿ, ರಾಯಚೂರು, ಕಲಬುರಗಿ, ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಒಣಹವೇ, ತೀವ್ರ ಶಾಖದ ಅಲೆ ಮುಂದುವರಿಯಲಿದೆ.
ನಂತರ ಈ ಮೇಲಿನ ಎಲ್ಲ ಜಿಲ್ಲೆಗಳಲ್ಲಿ ಅಂದರೆ ಬಹುತೇಕ ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆ ಸಕ್ರಿಯಗೊಳ್ಳಲಿದೆ. ಇದರಿಂದ ಬಿಸಿಲಿಗೆ ಕಂಗೆಟ್ಟಿದ್ದ ಜನರಿಗೆ ವರುಣ ನೆಮ್ಮದಿ ತರಲಿದ್ದಾರೆ. ಕಾದ ಭೂಮಿಯು ತಂಪಾಗಲಿದೆ. ವಾತಾವರಣ ತೇವಭರಿತವಾಗಿ ಕೂಡಿರಲಿದೆ. ವಯೋವೃದ್ಧರು, ಮಕ್ಕಳು, ಮಹಿಳೆಯರು, ಉಸಿರಾಟದಂತಹ ತೊಂದರೆ ಇರುವ ಅನಾರೋಗ್ಯ ಪೀಡಿತರು ಕೆಲವು ದಿನಗಳ ಕಾಲ ಈ ಶಾಖದ ಅಲೆಯಿಂದ ಮುಕ್ತರಾಗಲಿದ್ದಾರೆ.
ನೆನ್ನೆ ಎಲ್ಲೆಲ್ಲಿ ಎಷ್ಟು ಮಳೆ ಆಗಿದೆ?: ತಾಪಮಾನದ ವಿವರ
ಕಳೆದ 24ಗಂಟೆಗಳಲ್ಲಿ ರಾಜ್ಯದ ಮೈಸೂರಿನಲ್ಲಿ 07 ಸೆಂಟಿ ಮೀಟರ್ ಮಳೆ ದಾಖಲಾಗಿದೆ. ಇನ್ನುಳಿದಂತೆ ಮಂಡ್ಯ ಜಿಲ್ಲೆಯ ಕೆಆರ್ಎಸ್ ಪ್ರದೇಶದಲ್ಲಿ 05 ಸೆಂ.ಮೀ, ಚಾಮರಾಜನಗರ, ಹೊನಕೆರೆ ತಲಾ 3 ಸೆಂ.ಮೀ, ತುಮಕೂರಿನ ಮಿಡಿಗೇಶಿ, ಗುಬ್ಬಿ, ಕೋಲಾರ, ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ತಲಾ 2 ಸೆಂ.ಮೀ ಮಳೆ ದಾಖಲಾಗಿದೆ.
Storms building up along Western ghats #KarnatakaRains pic.twitter.com/j6o8h283fw
— ರವಿ ಕೀರ್ತಿ ಗೌಡ (@ravikeerthi22) May 7, 2024
ಗದಗ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅತ್ಯಧಿಕ ತಾಪಮಾನ 44.5 ಡಿಸೆ ಕಲಬುರಗಿಯಲ್ಲಿ ಕಂಡು ಬಂದಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (IMD) ದೈನಂದಿನ ವರದಿ ಮಾಹಿತಿ ನೀಡಿದೆ.
ಬೆಂಗಳೂರಿಗೆ 3 ದಿನ ಜೋರು ಮಳೆ ಸಾಧ್ಯತೆ
ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳ ವರೆಗೆ (ಮೇ 10) ಸೋಮವಾರದಂತೆಯೇ ದಿಢೀರ್ ಜೋರು ಮಳೆ ಮುಂದುವರಿಯಲಿದೆ. ಬೆಳಗ್ಗೆಯಿಂದ ವಾತಾವರಣದಲ್ಲಿ ತುಸು ಬಿಸಿಲು ಕಂಡು ಬರಲಿದ್ದು, ಸಂಜೆ ನಂತರ ದಿಢೀರ್ ವರುಣ ಪ್ರತ್ಯಕ್ಷವಾಗಲಿದ್ದಾನೆ. ಬಿಸಿಲಿಗೆ ಬಳಲಿದ ಜನರಿಗೆ, ಕಾದ ಭೂಮಿಗೆ ಮಳೆರಾಯ ತೆಂಪೆರೆಯಲಿದ್ದಾನೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ಮುನ್ಸೂಚನಾ ವರದಿ ತಿಳಿಸಿದೆ.
ಬೆಂಗಳೂರಿನಲ್ಲಿ ಇಂದು ಬುಧವಾರ ಬೆಳ್ಳಂಬೆಳಗ್ಗೆಯೇ ಮಳೆ ಶುರುವಾಗಿದೆ. ಅಲ್ಲಲ್ಲಿ ಉತ್ತಮ ಮಳೆ ಬರುತ್ತಿದೆ. ಇಂದು ಇಡೀ ದಿನ ತಂಪು ವಾತಾವರಣ ಕಂಡು ಬರುವ ಸಾಧ್ಯತೆ ಇದೆ. ಸಂಜೆ ಜೋರು ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications