Karnataka Rains: ಹವಾಮಾನ ವೈಪರೀತ್ಯ, ರಾಜ್ಯದ 20 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ, ಆರೆಂಜ್-ಯೆಲ್ಲೋ ಅಲರ್ಟ್
ಬೆಂಗಳೂರು: ಕರ್ನಾಟಕದಲ್ಲಿ ಬಿಸಿಲ ಧಗೆ ತಕ್ಕಮಟ್ಟಿಗೆ ಕಡಿಮೆ ಆಗುವ ಲಕ್ಷಣಗಳು ಇವೆ. ಅಂದರೆ ರಾಜ್ಯದಲ್ಲಿ ಮೈಸುಡುವ ಬಿಸಿಲ ಮಧ್ಯೆ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಗುಡುಗು, ಮಿಂಚು ಮತ್ತು ಆಲಿಕಲ್ಲು ಸಹಿತ ಮಳೆ ಆಗಲಿದೆ. ಈ ಸಂಬಂಧ 05 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ವಿವಿಧ ಪ್ರದೇಶಗಳಲ್ಲಿ ಒಣಹವೆ, ಬಿಸಿಲ ಧಗೆ ಮುಂದುವರಿಯಲಿದೆ. ರಾಜ್ಯ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಇಲ್ಲಿದೆ.
ತಮಿಳುನಾಡು ಹಾಗೂ ಇನ್ನಿತರ ಭಾಗಗಳಲ್ಲಿ ಸಮುದ್ರ ಮೇಲ್ಮೈನಲ್ಲಿ ಉಂಟಾಗಿರುವ ವಾಯು ಚಂಡಮಾರುತ ಪರಿಚಲನೆ, ಇನ್ನಿತರ ಬದಲಾವಣೆಗಳ ಕಾರಣದಿಂದ ರಾಜ್ಯದಲ್ಲಿ ಮಳೆ ಸಕ್ರಿಯವಾಗಿದೆ. ಪೂರ್ವ ಮುಂಗಾರು ಮುಂದಿನ 5 ದಿನಗಳ ಪೈಕಿ ಮೊದಲ ಎರಡು ದಿನ ಇಂದು ಮತ್ತು ನಾಳೆ ಅಬ್ಬರಿಸಲಿದೆ. ಹವಾಮಾನ ವೈಫರೀತ್ಯಗಳ ಅಪ್ಡೇಟ್ ಮುಂದಿದೆ.

20 ಜಿಲ್ಲೆಗಳಿಗೆ ವ್ಯಾಪಕ ಮಳೆ, ಆರೆಂಜ್-ಯೆಲ್ಲೋ ಅಲರ್ಟ್
ರಾಜ್ಯದ ಉತ್ತರ ಒಳನಾಡಿನಲ್ಲಿ ಅತೀವ ಬಿಸಿಲಿನ ಶಾಖ, ತೀವ್ರ ಸೆಖೆ ಉಂಟಾಗಿತ್ತು. ಇದೀಗ ಇದೇ ಭಾಗದ ಕೆಲವು ಕಡೆಗಳಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರಿಸಲಿದೆ. ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ಗಾಳಿ, ಆಲಿಕಲ್ಲು ಮತ್ತು ಗುಡುಗು ಸಹಿತ ಜೋರು ಮಳೆ ಆಗಲಿದೆ. ಈ ಸಂಬಂಧ ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಿಗೆ ಮುಂದಿನ ಎರಡು ದಿನ (ಏಪ್ರಿಲ್ 23, 24) ಆರೆಂಜ್ ಅಲರ್ಟ್ ನೀಡಲಾಗಿದೆ. ಈ ಭಾಗದಲ್ಲಿ ಮಳೆ ಇಳೆಗೆ ತಂಪೆರೆಯಲಿದ್ದು, ಮುಂಗಾರು ಬಿತ್ತನೆಗೆ ರೈತರು ತಯಾರಿ ಮಾಡಿಕೊಳ್ಳಲಿದ್ದಾರೆ.
15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಇನ್ನೂ ಉತ್ತರ ಒಳನಾಡಿನ ಬೀದರ್, ಗದಗ, ಹಾವೇರಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ, ದಾವಣಗೆರೆ, ಬಳ್ಳಾರಿ ಮತ್ತು ವಿಜಯನಗರದ ಇನ್ನು ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡಿನ ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಕೆಲವು ಸ್ಥಳಗಳಲ್ಲಿ ವ್ಯಾಪಕ ಮಳೆ ಆಗಲಿದೆ. ಗಂಟೆಗೆ ಗರಿಷ್ಠ 40 ಕಿ.ಮೀ ವೇಗದ ಗಾಳಿ ಸಹಿತ ಮಳೆ ಸುರಿಯುವ ಕಾರಣಕ್ಕೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಏಪ್ರಿಲ್ 24ರಿಂದ ಮೂರು ದಿನಗಳ ಕಾಲ ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದಷ್ಟ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ. ವಿಜಯಪುರ, ಬಾಗಲಕೋಟೆ, ಕಲಬುರಗಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಈ ಮೂಲಕ ಬೇಸಿಗೆಯಲ್ಲೂ ಮಳೆ ಅಬ್ಬರ ಕಂಡು ಬರಲಿದೆ.
ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು ಇನ್ನಿತರ ಭಾಗಗಳಲ್ಲಿ ಒಣಹವೆ ಮುಂದುವರಿಯಲಿದೆ. ಉದ್ಯಾನ ನಗರಿ ಬೆಂಗಳೂರು ಬಿಸಿಲ ಧಗೆ ಬೇಯುವ ಸ್ಥಿತಿ ತಲುಪಿದೆ. ಅಷ್ಟರ ಮಟ್ಟಿನ ಬಿಸಿಲು ಬೆಳಗ್ಗೆ 9 ನಂತರ ಆರಂಭವಾಗುತ್ತಿದೆ. ನಿತ್ಯವು ಇಲ್ಲಿ ಗರಿಷ್ಠ 35ಡಿಗ್ರಿ ಸೆಲ್ಸಿಯಸ್ ಆಸು ಪಾಸು ದಾಖಲಾಗುತ್ತಿದೆ. ಇದರಿಂದ ಜನರು ಪರದಾಡುವಂತಾಗಿದೆ.
ಹವಾಮಾನ ವೈಫರೀತ್ಯಗಳ ಅಪ್ಡೇಟ್
ತಮಿಳುನಾಡು ಉತ್ತರ ಭಾಗ ಹಾಗೂ ಇತರ ಭಾಗಗಳಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿ ಮೇಲ್ಮುಖ ವಾಯು ಚಂಡಮಾರುತದ ಪರಿಚಲನೆ ಉಂಟಾಗಿದೆ. ಮಹಾರಾಷ್ಟ್ರದ ಒಳಭಾಗ ಮತ್ತು ಪಕ್ಕದ ತೆಲಂಗಾಣ ಮತ್ತು ಉತ್ತರ ಒಳನಾಡಿನ ಕರ್ನಾಟಕದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 3.1 ಮತ್ತು 5.8 ಕಿ.ಮೀ ಎತ್ತರದಲ್ಲಿ ವಾಯು ಚಂಡಮಾರುತದ ಪರಿಚಲನೆ ಮುಂದುವರೆದಿದೆ. ತೆಲಂಗಾಣ ಮತ್ತು ನೆರೆಹೊರೆಗಳಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿ ಮೇಲ್ಮುಖ ವಾಯು ಚಂಡಮಾರುತದ ಪರಿಚಲನೆ ಕಡಿಮೆಯಾಗಿದೆ. ಇದೆಲ್ಲದರ ಪ್ರಭಾವದಿಂದ ಪೂರ್ವ ಮುಂಗಾರು ಮಳೆ ರಾಜ್ಯದಲ್ಲಿ ಮೂರು ದಿನ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.













Click it and Unblock the Notifications