ರಾಜ್ಯದೆಲ್ಲೆಡೆ ಪಿಯು ಪ್ರಶ್ನೆ ಪತ್ರಿಕೆ ಮೌಲ್ಯಮಾಪನ ಬಹಿಷ್ಕಾರ
ಬೆಂಗಳೂರು, ಏ.6: ಪಿಯು ಪ್ರಶ್ನೆಪತ್ರಿಕೆ ಮೌಲ್ಯಮಾಪನಕ್ಕೆ ಆರಂಭದಲ್ಲೇ ವಿಘ್ನ ಉಂಟಾಗಿದೆ. ಭಾನುವಾರ ಆರಂಭವಾದ ಮೌಲ್ಯಮಾಪಕರ ಪ್ರತಿಭಟನೆ ಸೋಮವಾರ ಹೊಸ ತಿರುವು ಪಡೆದುಕೊಂಡಿದೆ.
ಪಿಯು ಪ್ರಶ್ನೆ ಪತ್ರಿಕೆ ಮೌಲ್ಯಮಾಪನ ನಡೆಯುವ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡಾ ಮೌಲ್ಯಮಾಪಕರು ಭಾನುವಾರ ಪ್ರತಿಭಟನೆಗೆ ಮುಂದಾದರು. ವೇತನ ಪರಿಷ್ಕರಣೆ ಅವರ ಮುಖ್ಯ ಆಗ್ರಹವಾಗಿದೆ. ಲೇಖನಿಗಳನ್ನು ಪಕ್ಕಕ್ಕಿಟ್ಟು 'ಪೆನ್ ಡೌನ್' ಮುಷ್ಕರ ಆರಂಭಿಸಿದರು.
ಸುಮಾರು 8 ಜಿಲ್ಲೆಗಳ 41 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಸ್ಥಗಿತಗೊಂಡಿತು. ಮಾರ್ಚ್ ತಿಂಗಳಿನಲ್ಲಿ ನಡೆದ ಪರೀಕ್ಷೆಗೆ ಸುಮಾರು 6.2 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಈಗ ಮೌಲ್ಯ ಮಾಪಕರ ಕೃಪೆಗಾಗಿ ಕಾದಿದ್ದಾರೆ.

ಸೋಮವಾರ(ಏ.6) ಇಂಗ್ಲೀಷ್ ಪತ್ರಿಕೆ ಮೌಲ್ಯ ಮಾಪನ ಮಾಡದಿರಲು ನಿರ್ಧರಿಸಿದ ಮೌಲ್ಯಮಾಪಕರು ರಾಜ್ಯದೆಲ್ಲೆಡೆ ಮೌಲ್ಯಮಾಪನ ಬಹಿಷ್ಕಾರಕ್ಕೆ ಕರೆ ನೀಡಿದರು. ಇಲಾಖೆ ನೀಡಿರುವ ಕೀ ಉತ್ತರ ಪತ್ರಿಕೆಯಲ್ಲೇ 10 ಕ್ಕೂ ಹೆಚ್ಚು ತಪ್ಪುಗಳು ಕಂಡು ಬಂದಿವೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುತ್ತದೆ ಎಂದು ಮೌಲ್ಯಮಾಪಕರು ಹೇಳಿದ್ದಾರೆ.
ಕರ್ನಾಟಕ ಪಿಯು ಅಧ್ಯಾಪಕರ ಅಸೋಸಿಯೇಷನ್ (KSPULA) ಗೆ ಸೇರಿದ ಸುಮಾರು 17,000 ಸದಸ್ಯರು ಮೌಲ್ಯಮಾಪನಕ್ಕೆ ಬಹಿಷ್ಕಾರ ಹಾಕಿದ್ದಾರೆ.
ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ಬೆಳಗಾವಿ ಹಾಗೂ ದಾವಣಗೆರೆಯಲ್ಲಿ ಮೌಲ್ಯಮಾಪನ ಸ್ಥಗಿತಗೊಂಡಿದೆ.
ಬೇಡಿಕೆ ಏನು?: ವೇತನ ಪರಿಷ್ಕರಣೆ ನಿನ್ನೆ ಮೊನ್ನೆಯ ಬೇಡಿಕೆ ಅಲ್ಲ, ಹಲವು ವರ್ಷಗಳ ಬೇಡಿಕೆ, ನಾವು ಅಡ್ಜೆಸ್ಟ್ ಮಾಡಿಕೊಂಡು ಪ್ರತಿ ವರ್ಷ ಮೌಲ್ಯಮಾಪನ ಮುಗಿಸಿಕೊಡುತ್ತಾ ಬಂದಿದ್ದೇವೆ. ಸರ್ಕಾರ ಸ್ವಲ್ಪ ಈ ಬಗ್ಗೆ ಗಮನ ಹರಿಸಿ ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ನೀಡಲಿ ಎಂದು ಅಧ್ಯಾಪಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದ್ದಾರೆ.
4 ಹಾಗೂ 5ನೇ ವೇತನ ಆಯೋಗದ ಅನುಷ್ಠಾನದ ಸಮಯದಲ್ಲಿ ಆದ ತಾರತಮ್ಯವನ್ನು ಸರಿಪಡಿಸುವಂತೆ 1998 ರಿಂದ ಪಿಯು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧ್ಯಾಪಕರು, ಪ್ರಾಂಶುಪಾಲರು ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. 2011 ರ ಏಪ್ರಿಲ್ ನಲ್ಲಿ ಸಮಸ್ಯೆ ಉಲ್ಬಣವಾದಾಗ ಅಂದಿನ ಸರ್ಕಾರ ಅಧ್ಯಯನ ಸಮಿತಿ ನೇಮಿಸಿ ವರದಿ ನೀಡುವಂತೆ ಸೂಚಿಸಿತ್ತು. ಆದರೆ, ಸಮಸ್ಯೆ ಇನ್ನೂ ಬಗೆಹರಿದಿಲ್ಲ.
ಸದ್ಯ ಪಿಯು ಅಧ್ಯಾಪಕರ ವೇತನ ತಿಂಗಳಿಗೆ 22,800 ರು ನಷ್ಟಿದೆ. ಪರಿಷ್ಕೃತ ಸಂಬಳ 28,100 ರು ಪ್ರತಿ ತಿಂಗಳಿಗೆ ಬೇಕು ಎಂದು ಬೇಡಿಕೆ ಬಂದಿದೆ. ಜೊತೆಗೆ ಕಾಲ ಕಾಲಕ್ಕೆ ಉದ್ಯೋಗದಲ್ಲಿ ಬಡ್ತಿ ನೀಡುವ ಬಗ್ಗೆ ಕೂಡಾ ಬೇಡಿಕೆ ಒಡ್ಡಲಾಗಿದೆ.












Click it and Unblock the Notifications