ಸತ್ತವರ ಆತ್ಮಗಳು ನಿಮ್ಮ ಉತ್ತರಕ್ಕಕಾಗಿ ಕಾಯುತ್ತಿವೆ; ಉತ್ತರ ಕೊಡಿ ಮೋದಿ: ಸಿದ್ದರಾಮಯ್ಯ ಕೇಳಿದ ಪ್ರಶ್ನೆಗಳೇನು?
ಬೆಂಗಳೂರು,ಏಪ್ರಿಲ್ 29: ರಾಜ್ಯ ವಿಧಾನಸಭಾ ಚುನಾವಣಾ ಭರಾಟೆ ಜೋರಾಗಿದೆ. ಈ ಬಾರಿ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಇನ್ನೂ ಆಡಳಿತರೂಢ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಹಲವು ತಂತ್ರಗಾರಿಕೆಯನ್ನ ನಡೆಸಿದೆ.
ಇತ್ತ ರಾಜ್ಯಕ್ಕೆ ಬಿಜೆಪಿ ಹೈಕಮಾಂಡ್ ನಾಯಕರು ಅಬ್ಬರದ ಪ್ರಚಾರವನ್ನ ನಡೆಸುತ್ತಿದ್ದು, ಕರ್ನಾಟಕಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜ್ಯದ ಜನತೆಯ ಪರವಾಗಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದೇ ಸಂದರ್ಭದಲ್ಲಿ ರಾಜ್ಯದ ಜನತೆಯ ಪರವಾಗಿ ನಿಮಗೆ ನನ್ನ ಪ್ರಶ್ನೆಯಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನೆಗಳನ್ನ ಕೇಳಿದ್ದಾರೆ.

ರಾಜ್ಯಕ್ಕೆ ಬಂದ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಕೇಳಿದ ಪ್ರಶ್ನೆಗಳು ಇಲ್ಲಿವೆ?
1. ತಮಗೆ ತಿಳಿದಿರುವಂತೆ ಬಡಜನರ ಹಸಿದ ಹೊಟ್ಟೆಯನ್ನು ತಣಿಸಲು ಯುಪಿಎ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದು 80 ಕೋಟಿ ಜನರಿಗೆ ಆಹಾರಧಾನ್ಯ ವಿತರಿಸಿತ್ತು. ಆದರೆ ನಿಮ್ಮ ಸರ್ಕಾರದ ಈ ಸಾಲಿನ ಬಜೆಟ್ ನಲ್ಲಿ ಆಹಾರ ಸಬ್ಸಿಡಿಯನ್ನು ಶೇಕಡಾ 31ರಷ್ಟು ಕಡಿತಗೊಳಿಸಿ ಬಡವರ ಹೊಟ್ಟೆಗೆ ಕಲ್ಲು ಹಾಕಿದು ಯಾಕೆ?
ಕರ್ನಾಟಕಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜ್ಯದ ಜನತೆಯ ಪರವಾಗಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದೇ ಸಂದರ್ಭದಲ್ಲಿ ರಾಜ್ಯದ ಜನತೆಯ ಪರವಾಗಿ ನಿಮಗೆ ನನ್ನ ಪ್ರಶ್ನೆಯಿದು.
— Siddaramaiah (@siddaramaiah) April 29, 2023
ಈ ಪ್ರಶ್ನೆಗೆ ನಿಮ್ಮ ಭಾಷಣದಲ್ಲಿ ಉತ್ತರ ನೀಡುವಿರೆಂದು ನಂಬಿದ್ದೇನೆ.#AnswerMadiModi pic.twitter.com/DUg1enIITe
2. ಉಚಿತ ಎಲ್ ಪಿ ಜಿ ಸಿಲೆಂಡರ್ ಎಂಬ ಪೊಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿರಿ, ಕಳೆದ ಎಂಟು ವರ್ಷಗಳಿಂದ ಎಲ್.ಪಿ.ಜಿ ಸಿಲಿಂಡರ್ ಬೆಲೆ ನಾಲ್ಕುಪಟ್ಟಾಗಿದೆ. ಹಳ್ಳಿಯ ಬಡವರು ಮತ್ತೆ ಉರುವರಲು ಹಾಕಿ ಒಲೆ ಉರಿಸಿ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಇದರ ಹೊರತಾಗಿಯೂ ಎಲ್.ಪಿ.ಜಿ ಮೇಲಿನ ಸಬ್ಸಿಡಿಯನ್ನು ಶೇಕಡಾ 75ರಷ್ಟು (ರೂ.2,257 ಕೋಟಿ) ಕಡಿಮೆ ಮಾಡಲಾಗಿದೆ. ಅಸಹಾಯಕ ಬಡವರ ಮೇಲೆ ನಿಮಗೆ ಯಾಕಿಷ್ಟು ದ್ವೇಷ?
3. ಬೆಲೆ ಕುಸಿತ ಮತ್ತು ಬೀಜ ಗೊಬ್ಬರದ ಬೆಲೆ ಏರಿಕೆಯಿಂದಾಗಿ ಹತ್ತಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಹೀಗಿದ್ದರೂ ಹತ್ತಿ ನಿಗಮದ ಬೆಂಬಲ ಬೆಲೆಯ ಅನುದಾನವನ್ನು ರೂ.782 ಕೋಟಿಯಿಂದ ರೂ. 1 ಲಕ್ಷಕ್ಕೆ ಇಳಿಸಿದ್ದೀರಿ. ರೈತರಿಗೆ ನೆರವಾಗುವ ಯೋಜನೆಗಳನ್ನೇ ಸ್ಥಗಿತಗೊಳಿಸಿ ಸೇಡು ರೈತರ ವಿರುದ್ಧ ತೀರಿಸಿಕೊಳ್ಳುತ್ತಿದ್ದೀರಾ?

4. ಬೆಂಗಳೂರು ಉಪನಗರ ರೈಲ್ವೆ ಯೋಜನೆ ಮತ್ತು ಬೆಂಗಳೂರು ಮೆಟ್ರೋ ಯೋಜನೆಗಳನ್ನು ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ನಲ್ಲಿ ಸಂಪೂರ್ಣ ನಿರ್ಲಕ್ಷಿಸಲಾಗಿದೆ. ನರೇಂದ್ರ ಮೋದಿಯವರೇ ನಿಮಗೆ ಕನ್ನಡಿಗರ ಮೇಲೆ ಯಾಕಿಷ್ಟು ದ್ವೇಷ?
5. ಬಾಯಲ್ಲಿ ರೈತರ ಗುಣಗಾನ ಮಾಡುವ ನರೇಂದ್ರಮೋದಿಯವರು ಬಜೆಟ್ ನಲ್ಲಿ ಮಾಡಿದ್ದೇನು ಗೊತ್ತಾ? ರೈತರ ಬೆಳೆಗಳ ಬೆಲೆ ಕುಸಿತ ತಡೆಯಲು ಬೆಂಬಲ ಬೆಲೆ ನೀಡುವ ಮೂಲಕ ಮಾರುಕಟ್ಟೆ ಮಧ್ಯಪ್ರವೇಶಿಸಲು ನೀಡಲಾಗುತ್ತಿದ್ದ ಅನುದಾನವನ್ನು ರೂ.1500 ಕೋಟಿಗಳಿಂದ ರೂ. ಒಂದು ಲಕ್ಷಕ್ಕೆ ಇಳಿಸಲಾಗಿದೆ, ಅಂದರೆ ಯೋಜನೆಗೆ ಬೀಗ, ರೈತರಿಗೆ ಯಾಕೆ ಈ ಮೋಸ?
6. ರೈತರ ಆದಾಯ ದುಪ್ಪಟ್ಟುಗೊಳಿಸುತ್ತೇನೆ ಎಂದು ಬುರುಡೆಬಿಟ್ಟು ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿಯವರೇ ನೀವು ರೈತರಿಗಾಗಿ ಮಾಡಿದ್ದೇನು ಗೊತ್ತಾ? ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ರೂ.50,121 ಕೋಟಿಯಷ್ಟು ಕಡಿಮೆ ಮಾಡಿದ್ದೀರಿ. ಯಾಕೆ?
7. ನರೇಂದ್ರ ಮೋದಿಯವರ ಖಾಸಾ ಗೆಳೆಯ ಅದಾನಿ ಉದ್ಯಮ ಸಾಮ್ರಾಜ್ಯದ ಕಳ್ಳಾಟಗಳನ್ನು ಹಿಂಡನ್ ಬರ್ಗ್ ವರದಿ ಬತ್ತಲೆ ಮಾಡಿದೆ. ಈ ಕಳ್ಳಾಟದಿಂದ ಭಾರತದ ಆರ್ಥಿಕತೆ ಕುಸಿದುಹೋಗುವ ಅಪಾಯ ಎದುರಿಸುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇದು ಸುದ್ದಿಯಾಗಿ ಭಾರತದ ಮಾನ ಹರಜಾಗುತ್ತಿದೆ, ಬ್ಯಾಂಕುಗಳಲ್ಲಿ ಠೇವಣಿ ಇಟ್ಟವರು, ಎಲ್.ಐ.ಸಿ ಯಲ್ಲಿ ಪಾಲಿಸಿ ಖರೀದಿಸಿದವರು ಆತಂಕದಲ್ಲಿದ್ದಾರೆ. 56 ಇಂಚಿನ ಎದೆಯ ಮೋದಿಯವರು ಯಾಕೆ ಈ ಬಗ್ಗೆ ತನಿಖೆಮಾಡದೆ ಮೌನಿಬಾಬಾ ಆಗಿದ್ದಾರೆ?
8. ಕೊವಿಡ್ ಸಂದರ್ಭದಲ್ಲಿ ಅಗತ್ಯ ಸಲಕರಣೆ ಪೂರೈಕೆ ಮಾಡಿದ್ದ ಗುತ್ತಿಗೆದಾರ ಬಸವರಾಜ ಅಮರಗೋಳ ಅವರಿಗೆ ರಾಜ್ಯ ಬಿಜೆಪಿ ಸರ್ಕಾರ ಬಿಲ್ ಹಣ ನೀಡದೆ ಇರುವುದರಿಂದ ಬೇಸತ್ತು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಈತನಿಗೆ ನ್ಯಾಯ ಕೊಡಿಸಿ, ಪ್ರಾಣ ಉಳಿಸಬೇಕಾದವರು ನೀವಲ್ಲವೇ ಮೋದಿ ಅವರೇ?
9. ಕೊರೊನಾ ಕಾಲದಲ್ಲಿ ಸ್ಯಾನಿಟೈಜರ್, ಮಾಸ್ಕ್ ನಿಂದ ಹಿಡಿದು ವೆಂಟಿಲೇಟರ್ ವರೆಗೆ ಎಲ್ಲದರಲ್ಲೂ ರಾಜ್ಯ ಸರ್ಕಾರ ಲೂಟಿ ಮಾಡಿದ್ದರಿಂದ ಕನಿಷ್ಠ 3,000 ಕೋಟಿ ಅವ್ಯವಹಾರ ನಡೆದಿದೆ. ಕೊರೊನಾದಿಂದ ಹಾದಿಯಲ್ಲಿ ಬೀದಿಯಲ್ಲಿ ಸತ್ತವರ ಆತ್ಮಗಳು ನ್ಯಾಯಕ್ಕಾಗಿ ನಿಮ್ಮ ಹಾದಿಯನ್ನೇ ಕಾಯುತ್ತಿವೆ ಮೋದಿ ಅವರೇ?
10. ಕೆ.ಆರ್ ಪುರಂನ ಇನ್ಸ್ಪೆಕ್ಟ ನಂದೀಶ್ 80 ಲಕ್ಷ ಲಂಚ ಕೊಟ್ಟು ವರ್ಗಾವಣೆ ಪಡೆದು ಬಂದ ಕಾರಣಕ್ಕೆ ಒತ್ತಡದಿಂದ ಸತ್ತಿದ್ದಾರೆ ಎಂದು ಸ್ವತಃ ಬಿಜೆಪಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಇತರರಿಗೆ ರಕ್ಷಣೆ ನೀಡುವ ಪೊಲೀಸರಿಗೇ ಹೀಗಾದರೆ ಸಾಮಾನ್ಯರ ಗತಿ ಏನು ಮೋದಿ ಅವರೇ
11. ಸಚಿವರಾಗಿದ್ದ ಈಶ್ವರಪ್ಪ ಅವರಿಗೆ 40% ಕಮಿಷನ್ ನೀಡಲಾಗದೆ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆಗೆ ಶರಣಾದರು. ಬದುಕಿದ್ದಾಗಲಂತೂ ನೀವು ಆತನಿಗೆ ನ್ಯಾಯ ಕೊಡಿಸಿಲ್ಲ, ಸತ್ತಮೇಲಾದರೂ ನ್ಯಾಯ ಸಿಗುವುದು ಬೇಡವೇ ಮೋದಿ ಅವರೇ?
12. 40% ಕಮಿಷನ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಕಾಮಗಾರಿಯ ಹಣ ನೀಡದೆ ಸತಾಯಿಸಿದ ಬಿಜೆಪಿ ಸರ್ಕಾರದ ಹಣದಾಸೆಗೆ ಗುತ್ತಿಗೆದಾರ ಪ್ರಸಾದ್ ಬಲಿಯಾದ. ಈ ಸಾವಿನ ಸರಣಿಯನ್ನು ಕೊನೆಗಾಣಿಸುವವರು ಯಾರು ಮೋದಿ ಅವರೇ?
13. ತನ್ನ ಸಾವಿನ ಮೂಲಕ ಬಿಜೆಪಿ ಗೆ ಭರ್ಜರಿ ರಾಜಕೀಯ ಲಾಭ ಮಾಡಿಕೊಟ್ಟ ಪರೇಶ್ ಮೇಸ್ತಾನ ವಯೋವೃದ್ಧ ತಂದೆ-ತಾಯಿ ಕುಟುಂಬಕ್ಕೆ ನ್ಯಾಯ ಬೇಕು. PSI ನೇಮಕಾತಿ ಹಗರಣದಿಂದ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣವೂ ಸೇರಿ ಮೊನ್ನೆ ನಡೆದ PWD ಸಹಾಯಕ ಎಂಜಿನಿಯ ನೇಮಕಾತಿ ಹಗರಣದಲ್ಲಿ ಕೆಲಸದಿಂದ ವಂಚಿತರಾದ ಎಲ್ಲಾ ಅರ್ಹರಿಗೆ ನ್ಯಾಯ ಕೊಡಿಸಿ ಮೋದಿಯವರೇ? ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.











Click it and Unblock the Notifications