Sumalatha V/S HDK: ಮತ್ತೆ ದಳಪತಿಗಳ ವಿರುದ್ದ ಮಂಡ್ಯ ಸೊಸೆ ಕಿಡಿ; ಅತಂತ್ರ ಕುತಂತ್ರ ಸರ್ಕಾರ ಬೇಕಾ?: ಸುಮಲತಾ
ಮಂಡ್ಯ,ಮೇ2: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಚುನಾವಣೆಗೆ ದಿನಗಣನೆ ಶುರುವಾಗಿದೆ. ಮಂಡ್ಯ ಲೋಕಸಭಾ ಚುನಾವಣೆಯಿಂದಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಸುಮಲತಾ ನಡುವಿನ ರಾಜಕೀಯ ಜಟಾಪಟಿ ಇದೀಗ ವಿಧಾನಸಭಾ ಚುನಾವಣೆಯಲ್ಲೂ ಮುಂದುವರೆದಿದೆ.
ಹೌದು, ಬಿಜೆಪಿ ಪಕ್ಷಕ್ಕೆ ಮಂಡ್ಯ ಸಂಸದೆ ಬೆಂಬಲ ಘೋಷಿಸಿದ ನಂತರ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುತ್ತಿರುವ ಸಮಲತಾ ಅವರು ಜೆಡಿಎಸ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ದ ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಮತ್ತೆ ಜಟಾಪಟಿ ಜೋರಾಗಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಸಂಸದೆ ಸುಮಲತಾ ಮಾತನಾಡಿ, ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದನ್ನ ನೀವೇ ದೃಢ ನಿರ್ಧಾರ ಮಾಡಿ ಅತಂತ್ರ, ಕುತಂತ್ರ ಮಾಡುವ ಕುಟುಂಬ ಸರ್ಕಾರ ಬೇಕಾ ಎನ್ನುವ ಮೂಲಕ ಪ್ರಾದೇಶಿಕ ಪಕ್ಷ ಜೆಡಿಎಸ್ ವಿರುದ್ದ ಕಟುವಾಗಿ ಟೀಕಿಸಿದರು.
ಕೇಂದ್ರ ಸರ್ಕಾರದಿಂದ ಯೋಜನೆಗಳ ಜಾರಿಗೆ ಅಡ್ಡಿಯಾಗುವ ಮೂಲಕ ಅಭಿವೃದ್ಧಿಗೆ ಅವಕಾಶ ನೀಡದೇ ಜನರಿಗೆ ದ್ರೋಹವೆಸಗಿದ್ದಾರೆ ಸುಮಲತಾ ಎಂದು ಶಾಸಕ ಡಾ.ಕೆ.ಅನ್ನದಾನಿ ಹೇಳಿಕೆಗೆ ಸುಮಲತಾ ತಿರುಗೇಟು ನೀಡಿದ್ದು, ತಮ್ಮ ಕುಟುಂಬದ ಅಭಿವೃದ್ಧಿಗೆ ಸೀಮಿತರಾಗಿ ಯಾರನ್ನೂ ಬೆಳೆಸದೆ ರಾಮನಗರ, ಹಾಸನ ಜಿಲ್ಲೆಗಳನ್ನು ಕುಟುಂಬದವರಿಗಾಗಿ ಬಳಕೆ ಮಾಡಿಕೊಂಡಿರುವ ಪಕ್ಷವನ್ನು ಸೋಲಿಸಿ. ರಾಜ್ಯದ ಅಭಿವೃದ್ದಿ ಹಾಗೂ ಜನರ ಪರವಾಗಿ ನಿಲ್ಲುವ ಬಿಜೆಪಿ ಪಕ್ಷವನ್ನು ಗೆಲ್ಲಿಸಿ ಎಂದು ಮಂಡ್ಯ ಜನತೆಯಲ್ಲಿ ಮನವಿ ಮಾಡಿದರು.
ನಾನು ಮಂಡ್ಯದ ಸಂಸದೆ ಎನ್ನುವುದಕ್ಕಿಂತ ಹೆಚ್ಚಾಗಿ ಮಳವಳ್ಳಿಯ ಹುಚ್ಚೇಗೌಡರ ಸೊಸೆ ಎನ್ನುವ ಭಾವನೆಯೇ ಹೆಚ್ಚು ಖುಷಿಯ ವಿಚಾರವಾಗಿದೆ, ಲೋಕಾಸಭಾ ಚುನಾವಣೆಯಲ್ಲಿ ಕಳೆದ ಬಾರಿ ಅತಿ ಹೆಚ್ಚಿನ ಮತ ನೀಡಿ ಗೆಲ್ಲಿಸಿದ್ದೀರಿ, ಅಂಬರೀಶ್ ಅವರ ಮೇಲಿನ ಗೌರವ, ಪ್ರೀತಿ ನಿಮ್ಮೆಲ್ಲರೂ ಒತ್ತಾಯಕ್ಕೆ ನಾಲ್ಕು ವರ್ಷಗಳ ಹಿಂದೆ ಮಣಿದು ಸಾಕಷ್ಟುಸವಾಲು ಮೆಟ್ಟಿನಿಂತು ಗೆದ್ದು ಬಂದಿರುವೆ. ಹೆಣ್ಣು ಹೊರಗಡೆ ಬಂದಾಗ ಎದುರಾಗುವ ಸಮಸ್ಯೆಗಳು ನನಗೆ ಗೊತ್ತು. ಚುನಾವಣೆಯ ಹಾಗೂ ನಂತರ ದಿನಗಳಲ್ಲೂ ನಿರಂತರ ಕಿರುಕುಳ ನೀಡುತ್ತಿರುವವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ರಾಜಕೀಯ ವಿರೋಧಿಗಳ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಹಾಲು ಹಾಗೂ ನೀರು ಹಗರಣ ಮಾಡಿದ್ದವರ ಪರವಾಗಿ ನಿಂತರು. ಕುಟುಂಬದ ಅಭಿವೃದ್ಧಿಗಾಗಿ ಇರುವವರು ಹಾಲು ಹಾಗೂ ನೀರು ಹಗರಣದ ಬಗ್ಗೆ ಜಿಲ್ಲೆಯ ಒಬ್ಬ ಶಾಸಕರೂ ಧ್ವನಿ ಎತ್ತಿಲ್ಲ, ಗಣಿಗಾರಿಕೆಯಿಂದ ಕೆಆರ್ಎಸ್ ಅಣೆಕಟ್ಟೆಒಡೆದರೆ ರೈತರ ಪಾಡೇನು, ಹಾಲು-ನೀರು ಹಗರಣದಿಂದ ಮನ್ಮುಲ್ ಮುಚ್ಚಿದರೇ ಸಾವಿರಾರು ಮಹಿಳೆಯರ ಪಾಡೇನು ಎಂದು ಜೆಡಿಎಸ್ ವಿರುದ್ದ ಕಿಡಿಕಾರಿದರು.
ಇನ್ನೂ ಬಿಜೆಪಿ ಅಭ್ಯರ್ಥಿ ಜಿ.ಮುನಿರಾಜು ಅವರು ಮಾತನಾಡಿ, ಮೀಸಲು ಕ್ಷೇತ್ರದಲ್ಲಿ ಇಪ್ಪತ್ತು ವರ್ಷಗಳಿಂದ ಆಳ್ವಿಕೆ ನಡೆಸಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಯಾವುದೇ ಅಭಿವೃದ್ಧಿ ಕೆಲಸಗಳನ್ನ ಮಾಡಿಲ್ಲ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ತಾಲೂಕಿನ ಜೊತೆಗೆ ಜಿಲ್ಲೆಯೂ ಪ್ರಗತಿ ಕಾಣಲು ಬಿಜೆಪಿಯನ್ನು ಬೆಂಬಲಿಸಬೇಕು, ಅಭಿವೃದ್ಧಿಗೆ ವಿರುದ್ಧ ಇರುವ ಕಾಂಗ್ರೆಸ್ ಮತ್ತು ಜೆಡಿಎಸ್ ನನ್ನು ಅಧಿಕಾರದಿಂದ ದೂರವಿಟ್ಟು ಡಬಲ ಇಂಜಿಲ್ ಸರ್ಕಾರವಾದ ಬಿಜೆಪಿಯನ್ನ ಗೆಲ್ಲಿಸಿ ಎಂದರು.












Click it and Unblock the Notifications