DK Shivakumar: ನನ್ನ ವಿರುದ್ಧ ಬಹಳ ಹಿಂದಿನಿಂದ ಕುತಂತ್ರ ನಡೆಯುತ್ತಿವೆ, ಕುತಂತ್ರ ಮಾಡಲಿ: ಡಿ.ಕೆ.ಶಿವಕುಮಾರ್
ಮೈಸೂರು,ಏಪ್ರಿಲ್27: ನನ್ನ ವಿರುದ್ಧ ಬಹಳ ಹಿಂದಿನಿಂದ ಕುತಂತ್ರ ನಡೆಯುತ್ತಿವೆ. ಅವರು ಏನೆಲ್ಲಾ ಕುತಂತ್ರ ಮಾಡಲಿ, ನಾವು ಅವೆಲ್ಲವನ್ನು ಎದುರಿಸಿ ಜನರ ಆಶೀರ್ವಾದದಿಂದ ಸರ್ಕಾರ ರಚನೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷ ಸರ್ವರಿಗೂ ಸಮಪಾಲು, ಸಮಬಾಳು ಎಂಬ ನಿಲುವು ಹೊಂದಿದ್ದು, ಮೀಸಲಾತಿ ಮಿತಿ ವಿಸ್ತರಣೆ ಮಾಡಿ ಎಲ್ಲಾ ಸಮುದಾಯಗಳಿಗೆ ಜನಸಂಖ್ಯೆ ಆಧಾರದ ಮೇಲೆ ಅವರಿಗೆ ಸಿಗಬೇಕಾದ ಹಕ್ಕು ನೀಡಲಾಗುವುದು.

ಬಿಜೆಪಿ ವಿಶ್ವಾಸ ದ್ರೋಹಿ ಪಕ್ಷ ಎಂಬುದು ಈಗ ಸಾಬೀತಾಗಿದೆ. ಮೀಸಲಾತಿ ಹೆಸರಿನಲ್ಲಿ ಬಿಜೆಪಿ ಸರ್ಕಾರ ವಿವಿಧ ಸಮುದಾಯಗಳಿಗೆ ಚಾಕಲೇಟ್ ಕೊಟ್ಟಿದ್ದ ಬಿಜೆಪಿ ಸುಪ್ರೀಂ ಕೋರ್ಟ್ ನಲ್ಲಿ ಉಲ್ಟಾ ಹೊಡದು ಜನರಿಗೆ ಮೋಸ ಮಾಡಿದೆ. ಚುನಾವಣೆ ಸಮಯದಲ್ಲಿ ಸಹಜವಾಗಿ ಮೀಸಲಾತಿ ಎಂಬ ಜೇನುಗೂಡಿಗೆ ಕೈ ಹಾಕುವುದಿಲ್ಲ. ಆದರೆ ಬಿಜೆಪಿ ಎಲ್ಲಾ ಸಮುದಾಯಗಳಿಗೂ ಮೀಸಲಾತಿ ನೀಡುತ್ತೇವೆ ಎಂದು ಭರವಸೆ ನೀಡಿ ಪ್ರಚಾರ ಪಡೆದು ಈಗ ದ್ರೋಹ ಬಗೆದಿದೆ ಎಂದು ಬಿಜೆಪಿ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರ ಮೀಸಲಾತಿ ವಿಚಾರದಲ್ಲಿ ಯಾವ ಸಮುದಾಯಕ್ಕೆ ನ್ಯಾಯ ಒದಗಿಸಿದೆ? ಎಂದು ಪ್ರಶ್ನಿಸಿದ ಅವರು, ಪರಿಶಿಷ್ಟ ಜಾತಿ ಶೇ.15ರಿಂದ ಶೇ.17, ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ ಶೇ.7ರಷ್ಟು ಮೀಸಲಾತಿ ಹೆಚ್ಚಳ ಮಾಡುವ ವಿಚಾರದಲ್ಲೂ ಸರ್ಕಾರ ದ್ರೋಹ ಬಗೆದಿದೆ. ಸರ್ಕಾರ ಪರಿಶಿಷ್ಟರ ಮೀಸಲಾತಿ ಹೆಚ್ಚಳದ ಕಾನೂನು ಮಾಡಿತಾದರೂ ಅದನ್ನು ಸಂವಿಧಾನದ 9ನೇ ಶೆಡ್ಯುಲ್ ಗೆ ಸೇರಿಸಲಿಲ್ಲ. ಆ ಮೂಲಕ ಈ ಕಾನೂನು ಕೇವಲ ಕಾಗದದ ಮೇಲೆ ಉಳಿದಿದೆ.

ಈ ಮಿಸಲಾತಿ ಹೆಚ್ಚಳದಿಂದ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ.56ರಷ್ಟಾಗಿದೆ. ಆದರೆ ಸದ್ಯ ಸುಪ್ರೀಂ ಕೋರ್ಟ್ ಆದೇಶದಂತೆ ಮೀಸಲಾತಿ ಮಿತಿಯ ಪ್ರಮಾಣ ಶೇ.50ರಷ್ಟಿದೆ. ಈ ಪರಿಶಿಷ್ಟರಿಗೆ ಈ ಮೀಸಲಾತಿ ಏರಿಕೆ ಆಗಬೇಕಾದರೆ ಈ ಮಿತಿಯನ್ನು ವಿಸ್ತರಣೆ ಮಾಡಬೇಕು. ಆದರೆ ಕೇಂದ್ರ ಸರ್ಕಾರ ಮಾರ್ಚ್.14ರಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಮೀಸಲಾತಿ ಮಿತಿ ಹೆಚ್ಚಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಆಮೂಲಕ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೂ ಅವರಿಗೆ ಸಿಗಬೇಕಾದ ನ್ಯಾಯ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.
ಇನ್ನೂ ಈ ಸಮುದಾಯಗಳಿಗೆ ವಿಶ್ವಾಸದ್ರೋಹ ಬಗೆದಿರುವುದಕ್ಕೆ ಯಾರು ಹೊಣೆ? ಈ ಸರ್ಕಾರ ರಾಜ್ಯದ ಜನರ ಬೆನ್ನಿಗೆ ಚೂರಿ ಹಾಕಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬೊಮ್ಮಾಯಿ ಅವರ ಸರ್ಕಾರ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡು ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಲಿಲ್ಲ ಏಕೆ? ಆಮೂಲಕ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಮೀಸಲಾತಿ ವಿಚಾರದಲ್ಲಿ ಹಿಟ್ ವಿಕೆಟ್ ಆಗಿದೆ. ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಹಾಗೂ ಹಿಂದುಳಿದ ವರ್ಗಗಳ ವಿಕೆಟ್ ಒಡೆದಿದೆ ಎಂದರು.
ರಾಜ್ಯದ ಇತಿಹಾಸದಲ್ಲಿ ಯಾವ ಸರ್ಕಾರಗಳು ರಾಜ್ಯದ ಜನರಿಗೆ ಇಂತಹ ಪರಮ ದ್ರೋಹವನ್ನು ಯಾವತ್ತೂ ಬಗೆದಿರಲಿಲ್ಲ. ಈ ಸರ್ಕಾರ 40% ಕಮಿಷನ್ ಭ್ರಷ್ಟಾಚಾರದ ಮೂಲಕ ಕರ್ನಾಟಕವನ್ನು ದೇಶದ ಭ್ರಷ್ಟಾಚಾರದ ರಾಜಧಾನಿ ಎಂಬ ಕಳಂಕ ತಂದಿದೆ. ಈ 40% ಕಮಿಷನ್ ಸರ್ಕಾರಕ್ಕೆ ರಾಜ್ಯದ ಜನ 40ಕ್ಕಿಂತ ಕಡಿಮೆ ಕ್ಷೇತ್ರಗಳನ್ನು ನೀಡುತ್ತಾರೆ.












Click it and Unblock the Notifications