BJP Internal Survey: ಬಿಜೆಪಿಯಿಂದ ಹೊಸಬರಿಗೆ ಮಣೆ: ಕೇಸರಿ ಪಕ್ಷಕ್ಕೆ ಲಾಭವಾಗಲಿದೆ ಎಂದ ಆಂತರಿಕ ಸಮೀಕ್ಷೆ
ಬೆಂಗಳೂರು, ಏಪ್ರಿಲ್ 23: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ( Karnataka Assembly Elections 2023 ) ಬಿಜೆಪಿ ಹೊಸಬರಿಗೆ ಮಣೆ ಹಾಕಿದೆ. ಹಲವು ಹಾಲಿ ಶಾಸಕರಿಗೆ ಟಿಕೆಟ್ ನೀಡದೇ ಹೊಸ ಮುಖಗಳಿಗೆ ಮಣೆ ಹಾಕಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಹೊಸಬರಿಗೆ ಮಣೆ ಹಾಕುವ ಬಿಜೆಪಿಯ ನಿರ್ಧಾರವು ಪಕ್ಷದ ಅನೇಕ ಹಿರಿಯ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಪಕ್ಷದ ಆಂತರಿಕ ಸಮೀಕ್ಷೆಯು ಬೇರೆಯದೇ ಫಲಿತಾಂಶವನ್ನು ನೀಡಿದೆ. ಕೇಸರಿ ಪಕ್ಷದ ಭವಿಷ್ಯವನ್ನು ಗಟ್ಟಿಮಾಡಲು ಹೊಸಬರಿಗೆ ಮಣೆ ಹಾಕುವ ನಿರ್ಧಾರ ಸಹಾಯ ಮಾಡಲಿದೆ ಎಂದು ಸಮೀಕ್ಷೆ ಹೇಳಿದೆ.

ಈ ಕುರಿತು ಮಾಧ್ಯಮಗಳಿಗೆ ಮಾತನಾಡಿರುವ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, 'ಹೊಸ ಮುಖಗಳನ್ನು ಕಣಕ್ಕಿಳಿಸಿದ ನಂತರ ಪಕ್ಷದ ಇತ್ತೀಚಿನ ಸಮೀಕ್ಷೆಯು 116 ಸ್ಥಾನಗಳನ್ನು ಪಡೆಯುತ್ತಿದೆ ಎಂದು ತೋರಿಸಿದೆ. ಈ ನಿರ್ಧಾರವು ಸಕಾರಾತ್ಮಕ ಪರಿಣಾಮವನ್ನು ಬೀರಿದೆ' ಎಂದು ತಿಳಿಸಿದ್ದಾರೆ.
'ಪ್ರಧಾನಿ ಮೋದಿ ಮತ್ತು ಇತರ ಕೇಂದ್ರ ನಾಯಕರು ರಾಜ್ಯದಲ್ಲಿ ರ್ಯಾಲಿಗಳನ್ನು ನಡೆಸಿದ ನಂತರ ಪಕ್ಷದ ಸಂಖ್ಯೆಯು ಮತ್ತಷ್ಟು ಹೆಚ್ಚಾಗುತ್ತದೆ' ಎಂದು ಅವರು ಹೇಳಿದ್ದಾರೆ. ಮೋದಿ ಕರ್ನಾಟಕದಾದ್ಯಂತ 20 ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ' ಎಂದು ಹೇಳಿದ್ದಾರೆ.
ಸವಾಲಿನ ಸಂದರ್ಭದಲ್ಲೂ ಚುನಾವಣೆಯಲ್ಲಿ ಗೆದ್ದ ಅನುಭವವಿರುವ ಮಾಜಿ ಶಾಸಕರು, ರಾಜ್ಯಾಧ್ಯಕ್ಷರು, ಮಾಜಿ ಸಚಿವರು ಸೇರಿದಂತೆ ಪಕ್ಷದ ಮುಖಂಡರನ್ನು ಎಲ್ಲಾ ಜಿಲ್ಲೆಗಳು ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಕಾರ್ಯದ ಮೇಲ್ವಿಚಾರಣೆಗೆ ನಿಯೋಜಿಸಲಾಗಿದೆ ಎಂದು ಕಟೀಲ್ ತಿಳಿಸಿದ್ದಾರೆ.
ಕಳೆದೊಂದು ವಾರದಿಂದ ಎಲ್ಲ ಕ್ಷೇತ್ರಗಳಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆ ನಾಯಕರೊಂದಿಗೆ ಸಭೆ ನಡೆಸಿ ಅವರಿಂದ ಗ್ರೌಂಡ್ ರಿಪೋರ್ಟ್ ಪಡೆದಿದ್ದಾರೆ. 'ಆ ವರದಿಯೂ ನಮಗೆ ಅನುಕೂಲಕರವಾಗಿದೆ' ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಹಲವು ಶಾಸಕರ ವಿರುದ್ಧದ ಆಡಳಿತ ವಿರೋಧಿ ಅಲೆ ಇತ್ತು. ಅದನ್ನು ಹೋಗಲಾಡಿಸಲು ಬಿಜೆಪಿ ಹೊಸ ಮುಖಗಳನ್ನು ಕಣಕ್ಕಿಳಿಸಿದೆ. ಡಬಲ್ ಇಂಜಿನ್ ಸರ್ಕಾರಗಳು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಬಲವಾದ ಸಂಘಟನಾ ಶಕ್ತಿಯು ಪಕ್ಷಕ್ಕೆ ಸ್ಪಷ್ಟ ಬಹುಮತ ಪಡೆಯಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಲಿಂಗಾಯತ ನಾಯಕರನ್ನು ಬಿಜೆಪಿ ಬದಿಗಿಟ್ಟಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಸಂಬಂಧಿಸಿದಂತೆ, ಲಿಂಗಾಯತರನ್ನು ಅವಮಾನಿಸಿರುವುದು ವಿಚಾರ ಕಾಂಗ್ರೆಸ್ ಪಕ್ಷದ ತಪ್ಪು ಪ್ರಚಾರದಿಂದ ಮುನ್ನೆಲೆಗೆ ಬಂದಿದೆ. ಇದು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ಸಿನವರು ವೀರೇಂದ್ರ ಪಾಟೀಲರನ್ನು ಅವಮಾನಿಸಿದರು. ವೀರಶೈವ- ಲಿಂಗಾಯತರನ್ನು ವಿಭಜಿಸಲು ಪ್ರಯತ್ನಿಸಿದರು. ಅವರು ಎಂದಿಗೂ ಸಮುದಾಯವನ್ನು ಗೌರವಿಸಲಿಲ್ಲ ಎಂದು ಕಟೀಲ್ ತಿಳಿಸಿದ್ದಾರೆ.
ಬಿಜೆಪಿ ಸರ್ಕಾರವು ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಲ್ಪಾವಧಿ ಅಧಿಕಾರದಲ್ಲಿದ್ದರೂ ಸಮುದಾಯದ ಮೂವರು ನಾಯಕರನ್ನು ಸಿಎಂ ಮಾಡಲಾಗಿದೆ ಎಂದು ಕಟೀಲ್ ಹೇಳಿದರು.
ಈಗಲೂ ಸಿಎಂ ಲಿಂಗಾಯತ ಸಮುದಾಯದವರಾಗಿದ್ದು, ಮುಂದಿನ ಸಿಎಂ ಆ ಸಮುದಾಯದವರಾಗಿರುತ್ತಾರೆ. ಬಿಜೆಪಿ ಅಧಿಕಾರದಲ್ಲಿದ್ದರೆ ಮಾತ್ರ ಲಿಂಗಾಯತರು ಸಿಎಂ ಆಗಲು ಸಾಧ್ಯ. ಇಲ್ಲದಿದ್ದರೆ, ಬೇರೆ ಪಕ್ಷದವರು ಲಿಂಗಾಯತರಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.












Click it and Unblock the Notifications