Karnataka Elections 2023: ಹಲವು ಸಮೀಕ್ಷೆಗಳಿಂದ ಬಿಜೆಪಿಗೆ ಅಘಾತ; ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು 5 ಕಾರಣಗಳು!
ಬೆಂಗಳೂರು, ಮೇ6: ರಾಜ್ಯ ವಿಧಾನಸಭಾ ಚುನಾವಣಾ ರಣಕಣದ ಕಾವು ಜೋರಾಗಿದೆ. ಮೂರು ರಾಜಕೀಯ ಪಕ್ಷಗಳಿಗೂ 2023 ರ ವಿಧಾನಸಭಾ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಈ ಬಾರಿ ನಮ್ಮದೇ ಸರ್ಕಾರ ಎಂದು ವಿಶ್ವಾಸವನ್ನ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಹಲವು ಸಮೀಕ್ಷೆಗಳ ವರದಿಯಿಂದಾಗಿ ಈ ಬಾರಿಯೂ ಅತಂತ್ರ ವಿಧಾನಸಭೆಯ ಸುಳಿವು ನೀಡುತ್ತಿವೆ.
ಹಲವು ಸಮೀಕ್ಷೆಯಲ್ಲಿ ಕಾಂಗ್ರೆಸ್ ಮೊದಲ ಸ್ಥಾನವನ್ನ ಪಡೆದರೇ ಇನ್ನೂ ಕೆಲ ಸಮೀಕ್ಷೆಯಲ್ಲಿ ಬಿಜೆಪಿ ಮೊದಲ ಸ್ಥಾನವನ್ನ ಪಡೆದುಕೊಂಡಿದೆ. ಆದರೆ, ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತವಂತೂ ಬಂದಿಲ್ಲ. ಆದರೆ, ಬಹುತೇಕ ಸಮೀಕ್ಷೆಗಳು ಅತಂತ್ರ ವಿಧಾನಸಭೆ ನಿರ್ಮಾಣವಾಗಿ ಜೆಡಿಎಸ್ಗೆ ಅವಕಾಶ ಸಿಗಬಹುದೇ ಎಂಬ ಸಾಧ್ಯತೆಗಳತ್ತ ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.

ಇತ್ತ ಮತ್ತೊಮ್ಮೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಆಡಳಿತಾರೂಢ ಬಿಜೆಪಿ ಹಲವು ತಂತ್ರಗಾರಿಕೆಯನ್ನ ನಡೆಸುತ್ತಿವೆ. ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಬಿಜೆಪಿ ಶತಾಯಗತಾಯ ಪ್ರಯತ್ನಜವನ್ನ ನಡೆಸುತ್ತಿದ್ದು, ಕೊನೆಯ ಹಂತದಲ್ಲಿ ಸಮೀಕ್ಷೆಗಳ ವರದಿಯಾಗುವಂತ ಲಕ್ಷಣಗಳು ಕಂಡು ಬರುತ್ತಿವೆ. ರಾಜ್ಯದ ಚುನಾವಣಾ ಅಖಾಡದಲ್ಲಿ ಬಿಜೆಪಿ ಗೆಲುವಿಗೆ ಪೂರಕ ಆಗಬಲ್ಲ ಹಲವು ಸಂಗತಿಗಳು, ಬೆಳವಣಿಗೆಯಿಂದಾಗಿ ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ರಾಜ್ಯ ಚುನಾವಣಾ ಅಖಾಡದಲ್ಲಿ ಮೋದಿ ಅಬ್ಬರ
ಆಡಳಿತರೂಢ ಬಿಜೆಪಿ ಪಕ್ಷಕ್ಕೆ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದುರಾಗಿದ್ದು, ಕಳೆದ ಎರಡು ವಾರಗಳಿಂದ ಚುನಾವಣಾ ಅಖಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನ ಹೇಳುತ್ತಾ, ಕಾಂಗ್ರೆಸ್ ನಾಯಕರ ವಿವಾದತ್ಮಕ ಹೇಳಿಕೆಯನ್ನ ಪ್ರಧಾನಿ ಮೋದಿ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ.

ಇನ್ನೂ ಪ್ರಧಾನಿ ಮೋದಿ ಅವರ ಪ್ರಚಾರ, ಸಮಾವೇಶ ಹಾಗೂ ರ್ಯಾಲಿಯಲ್ಲಿ ಜನಸಾಗರವೇ ಹರಿದು ಬಂದಿರುತ್ತದೆ. ಬಿಜೆಪಿ ಸರ್ಕಾರದ ವಿರುದ್ಧ ಕೇಳಿ ಬಂದಿದ್ದ ಹಲವು ಆರೋಪಗಳು, ಟಿಕೆಟ್ ಹಂಚಿಕೆ ವೇಳೆ ಎದ್ದ ಬಂಡಾಯಗಳನ್ನೇ ಮೀರಿಸುವ ರೀತಿಯಲ್ಲಿ ಪ್ರಧಾನಿ ಮೋದಿ ಪ್ರಚಾರದ ಅಬ್ಬರವಿದೆ. ರಾಜ್ಯದ ಎಲ್ಲ ಪ್ರಮುಖ ಜಿಲ್ಲೆಗಳಲ್ಲೂ ಹಾಗೂ ಬೆಂಗಳೂರು ನಗರ ಭಾಗದಲ್ಲಿ ಮೋದಿ ರೋಡ್ ಶೋ ನಿಂದಾಗಿ ಮೋದಿ ಫ್ಯಾಕ್ಟರ್ ಈ ಬಾರಿ ಬಿಜೆಪಿಗೆ ಸಹಾಯಕವಾಗಲಿದೆ.
ಟಿಕೆಟ್ ಹಂಚಿಕೆ; ರಾಜಹುಲಿಯ ವರ್ಚಸ್ಸು!
ಈ ಬಾರಿ ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಟಿಕೆಟ್ ಹಂಚಿಕೆ ಮಾಡಿದ್ದು, ಹೊಸ ಮುಖಗಳಿಗೆ ಅವಕಾಶವನ್ನ ಮಾಡಿಕೊಟ್ಟಿದೆ. ಎಸ್ಸಿ, ಎಸ್ಟಿ ಮೀಸಲು ಕ್ಷೇತ್ರಗಳ ಟಿಕೆಟ್ ಹಂಚಿಕೆ ವಿಚಾರದಲ್ಲೂ ಸೂಕ್ಷ್ಮತೆ ಕಾಯ್ದುಕೊಂಡಿದೆ. ಇನ್ನೂ ದಲಿತ ಸಮುದಾಯದ ನಾಯಕರೇ ಅಧ್ಯಕ್ಷರಾಗಿರುವ ಕಾಂಗ್ರೆಸ್ಗೆ ಪೂರಕ ವಾತಾವರಣ ನಿರ್ಮಾಣವಾಗದಂತೆ ಎಚ್ಚರ ವಹಿಸಿದೆ.

ಇನ್ನು ರಾಜ್ಯದ ಪ್ರಮುಖ ಲಿಂಗಾಯತ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ವರ್ಚಸ್ಸು ಈ ಬಾರೀ ಲಿಂಗಾಯತ ಸಮುದಾಯಗಳ ಮತಗಳು ಹೆಚ್ಚಿಗೆಯಾಗಲಿದ್ದು, ರಾಜ್ಯದಲ್ಲಿ ಲಿಂಗಾಯತರೇ ನಿರ್ಣಾಯಕರಾಗಿರುವ 18 ಜಿಲ್ಲೆಗಳ 40 ವಿಧಾನಸಭಾ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಪ್ರಚಾರವನ್ನ ನಡೆಸುತ್ತಿದ್ದಾರೆ.
ಚುನಾವಣಾ ನಿರ್ವಹಣೆಗೆ ಬಿಜೆಪಿ ಹೈಕಮಾಂಡ್ ತಂತ್ರಗಾರಿಕೆ
ಮತ್ತೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಹೈಕಮಾಂಡ್ ಹಲವು ತಂತ್ರಗಾರಿಕೆಯನ್ನ ರಾಜ್ಯ ಬಿಜೆಪಿ ನಾಯಕರಿಗೆ ಹಾಕಿಕೊಟ್ಟಿದ್ದು, ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಹೈಕಮಾಂಡ್ ದಂಡು ರಾಜ್ಯದಲ್ಲಿ ಹತ್ತು ಹಲವು ಸಭೆ, ತಂತ್ರಗಾರಿಕೆಯನ್ನ ನಡೆಸಿದ್ದಾರೆ.
ಇನ್ನೂ ಪ್ರತಿಯೊಬ್ಬ ಸಂಸದರಿಗೆ ತಮ್ಮ ತಮ್ಮ ಜಿಲ್ಲೆಗಳ ಉಸ್ತುವಾರಿ ನೀಡಲಾಗಿತ್ತು. ಅದರಲ್ಲೂ ಬೆಂಗಳೂರು ನಗರ ಜಿಲ್ಲೆಯ 28 ಕ್ಷೇತ್ರಗಳ ಮೇಲೆ ಹೆಚ್ಚಿನ ನಿಗಾ ವಹಿಸಿರುವ ಬಿಜೆಪಿ, ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಮೇಲೂ ಕಣ್ಣಿಟ್ಟಿದೆ. ಹಳೇ ಮೈಸೂರು ಭಾಗದ ಮೇಲೆ ವಿಶೇಷ ನಿಗಾ ವಹಿಸಿರುವ ಬಿಜೆಪಿ, ಪ್ರಧಾನಿ ಮೋದಿ, ಅಮಿತ್ ಶಾ ಅವರಂಥಾ ನಾಯಕರನ್ನೇ ಪ್ರಚಾರದ ಅಖಾಡಕ್ಕೆ ಇಳಿಸಿದೆ.
ಇನ್ನೂ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಲಿಂಗಾಯತ ಮತ ಬ್ಯಾಂಕ್ ಮೇಲೂ ಗಮನ ನೀಡಿದ್ದು, ಕಾಂಗ್ರೆಸ್ ತಂತ್ರ ಹಾಗೂ ಗ್ಯಾರಂಟಿ ಘೋಷಣೆಗೆ ಠಕ್ಕಕ್ ಕೊಡುವ ತಂತ್ರಗಾರಿಕೆಯ ಚುನಾವಣಾ ನಿರ್ವಹಣೆಯನ್ನ ಅಮಿತ್ ಶಾ ನಡೆಸಿದ್ದಾರೆ.
ಬಜರಂಗದಳ ಬ್ಯಾನ್ ಕೈ ಕೊಟ್ಟ ಭರವಸೆಯೇ ಬಿಜೆಪಿಗೆ ಅಸ್ತ್ರ
ಕರ್ನಾಟಕ ರಾಜ್ಯಾದ್ಯಂತ ಚುನಾವಣಾ ಪ್ರಚಾರದ ಭರಾಟೆ ಜೋರಾಗಿತ್ತು. ಈ ಮಧ್ಯ ಕಾಂಗ್ರೆಸ್ ಪಕ್ಷವು ಬಜರಂಗ ದಳವನ್ನು ನಿಷೇಧಿತ ಪಿಎಫ್ಐ ಸಂಘಟನೆಗೆ ಹೋಲಿಕೆ ಮಾಡಿ ಅದನ್ನೂ ನಿಷೇಧ ಮಾಡ್ತೇವೆ ಎಂದು ತನ್ನ ಪ್ರಣಾಳಿಕೆಯಲ್ಲಿ ಹೇಳಿದ ವಿಚಾರವೇ ಬಿಜೆಪಿಗೆ ದೊಡ್ಡ ಅಸ್ತ್ರ ಸಿಕ್ಕಂಕತಾಗಿದ್ದು, ಕೈ ಕೊಟ್ಟ ಭರವಸೆ ಚುನಾವಣಾ ಹೊತ್ತಲಿ ಕಾಂಗ್ರೆಸ್ಗೆ ತಿರುಗುಬಾಣವಾಗಿದೆ. ಈಗಾಗಲೇ ಕಾಂಗ್ರೆಸ್ ಭರವಸೆಯಿಂದಾಗ ಹಲವು ಹಿಂದೂಪರ ಸಂಘಟನೆಗಳು ಕಾಂಗ್ರೆಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನೇ ಬಿಜೆಪಿ ಅಸ್ತ್ರವನ್ನಾಗಿ ಮಾಡಿಕೊಂಡಿದೆ.
ಭಗವಾನ್ ಹನುಮಂತನಿಗೆ ಅವಮಾನ ಎಂಬಂತೆ ಎಂದು ಬಿಜೆಪಿ ಬಿಂಬಿಸುತ್ತಿದೆ. ಇನ್ನೂ ಚುನಾವಣಾ ಪ್ರಚಾರದ ವೇಳೆಯಲ್ಲೂ ಪ್ರಧಾನಿ ಮೋದಿ ಆ ಬಜರಂಗ ಬಲಿ ಕೀ ಜೈ ಎಂಬ ಘೋಷ ವಾಕ್ಯವನ್ನು ಜನರಿಂದ ಹೇಳಿಸುತ್ತಿದ್ದಾರೆ. ಮುಸ್ಲಿಂ ಮತಗಳ ಓಲೈಕೆ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ಬಜರಂಗ ದಳ ನಿಷೇಧ ಪ್ರಸ್ತಾಪ ಮಾಡಿದೆ ಅನ್ನೋದು ಬಿಜೆಪಿ ವಾದವಾಗಿದ್ದು, ಇದು ಸಹ ಬಿಜೆಪಿಗೆ ಸಹಾಯಕವಾಗಲಿದೆ.
ಮತ ಹಂಚಿಕೆ-ಸೀಟು ಹಂಚಿಕೆಯಲ್ಲೂ ಜಾಗರೂಕ ಹೆಜ್ಜೆ ಇಟ್ಟ ಬಿಜೆಪಿ
ಈ ಬಾರಿ ಸೀಟು ಹಂಚಿಕೆ ವಿಚಾರದಲ್ಲಿ ಬಿಜೆಪಿ ಪಕ್ಷವೂ ಮೇಲುಗೈ ಸಾಧಿಸಿದೆ. ಬಿಜೆಪಿ ತನ್ನ ಮತ ಬ್ಯಾಂಕ್ ಅನ್ನು ಪ್ರತಿ ಚುನಾವಣೆಯಲ್ಲೂ ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ಆದಾಗ್ಯೂ ಈ ಬಾರಿಯ ಚುನಾವಣಾ ಪೂರ್ವ ಸಮೀಕ್ಷೆಗಳೂ ಕೂಡಾ ಕಾಂಗ್ರೆಸ್ನ ವೋಟ್ ಶೇರ್ ಹೆಚ್ಚಾಗಿ ಇರುತ್ತದೆ ಎಂದೇ ಹೇಳಿದೆ. ಆದ್ರೆ, ಸೀಟ್ ಶೇರ್ ವಿಚಾರಕ್ಕೆ ಬಂದರೆ ಬಿಜೆಪಿ ಕೆಲವೆಡೆ ಮುನ್ನಡೆ ಸಾಧಿಸಬಹುದಾಗಿದೆ.
ಹೊಸ ಮುಖಗಳಿಗೆ ಅವಕಾಶವನ್ನ ಕೊಟ್ಟ ಬಿಜೆಪಿಯಿಂದಾಗಿ ಕೆಲ ಭಾಗದಲ್ಲಿ ಕಾರ್ಯಕರ್ತರಿಗೆ ಹೆಚ್ಚಿನ ಬಲ ನೀಡಿದಂತಾಗಿದೆ, ಬಿಜೆಪಿಯು ನಿಗದಿತ ಕ್ಷೇತ್ರಗಳಲ್ಲಿ, ತನ್ನ ಭದ್ರ ನೆಲೆ ಇರುವ ಕಡೆಗಳಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಳ ಮಾಡಿಕೊಳ್ಳುತ್ತಾ ಬಂದಿದೆ. ಈ ನಡುವೆ, ಹಳೆ ಮೈಸೂರು ಭಾಗದ ಜೆಡಿಎಸ್ ಮತಗಳಿಗೂ ಬಿಜೆಪಿ ಕಣ್ಣು ಹಾಕಿರೋದು ಪಕ್ಷಕ್ಕೆ ಧನಾತ್ಮಕ ಫಲಿತಾಂಶ ಸಿಗುವ ಸಾಧ್ಯತೆ ಹೆಚ್ಚಿಸಿದೆ. ಹಳೇ ಮೈಸೂರು ಭಾಗದಲ್ಲಿ ಈ ಬಾರೀ ಬಿಜೆಪಿ ಹಲವು ಸ್ಥಾನಗಳನ್ನ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.












Click it and Unblock the Notifications